ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಪ್ರತಿಭಟನೆ
– ಪಿಟಿಐ ಚಿತ್ರ
ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಖಮೇನಿಯವರು ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಯಾರು ಎನ್ನುವ ಚರ್ಚೆಗಳು ನಡೆಯುತ್ತಿವೆ.
ಶಸಸ್ತ್ರ ಪಡೆಗಳ ಕಮಾಂಡರ್ ಆಗಿರುವ ಸರ್ವೋಚ್ಚ ನಾಯಕ, ವಿದೇಶಾಂಗ ನೀತಿಯನ್ನು ನಿರ್ಧರಿಸುತ್ತಾರೆ. ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆ ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ನೂತನ ಸರ್ವೋಚ್ಚ ನಾಯಕನ ಆಯ್ಕೆಯು ಸಂವಿಧಾನಬದ್ಧವಾಗಿದ್ದರೂ, ಧಾರ್ಮಿಕ ಅಧಿಕಾರ, ರಾಜಕೀಯ ಒಮ್ಮತ ಮತ್ತು ಸಾಂಸ್ಥಿಕ ಶಕ್ತಿಯನ್ನು ಒಳಗೊಂಡ ಅತ್ಯಂತ ಸೂಕ್ಷ್ಮ ಪ್ರಕ್ರಿಯೆಯಾಗಿದೆ.
ಸರ್ವೋಚ್ಛ ನಾಯಕನನ್ನು ಯಾರು ಆರಿಸಬೇಕು ಎಂಬುದನ್ನು ಇರಾನ್ ಸಂವಿಧಾನದಲ್ಲಿ ಹೇಳಲಾಗಿದೆ. 88 ಹಿರಿಯ ಶಿಯಾ ಮುಸ್ಲಿಂ ಧರ್ಮಗುರುಗಳನ್ನೊಳಗೊಂಡ ‘ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್' (ತಜ್ಞರ ಮಂಡಳಿ) ಹೊಸ ನಾಯಕನನ್ನು ಆಯ್ಕೆ ಮಾಡುತ್ತದೆ. ಸಂವಿಧಾನದ 111 ನೇ ವಿಧಿಯ ಪ್ರಕಾರ, ಸರ್ವೊಚ್ಚ ನಾಯಕನ ನಿಧನ, ರಾಜೀನಾಮೆ ಅಥವಾ ಅಸಮರ್ಥತೆಯ ಸಂದರ್ಭದಲ್ಲಿ ಮಂಡಳಿಯು ಹೊಸ ನಾಯಕನನ್ನು ಆಯ್ಕೆ ಮಾಡಬೇಕು. ಕಡಿಮೆ ಅವಧಿಯಲ್ಲಿ ಆಯ್ಕೆ ಮಾಡಬೇಕು ಎನ್ನುವುದು ನಿಯಮ.
ಪುರುಷ ಮುಸ್ಲಿಂ ಧರ್ಮಗುರುವಾಗಿರಬೇಕು.
ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ, ವಿಶೇಷವಾಗಿ ಶಿಯಾ ಫಿಕ್ಹ್ನಲ್ಲಿ (ಕರ್ಮಶಾಸ್ತ್ರ) ಆಳವಾದ ಜ್ಞಾನ ಹೊಂದಿರಬೇಕು.
ರಾಜಕೀಯ ಸಾಮರ್ಥ್ಯ ಮತ್ತು ಆಳ್ವಿಕೆ ನಡೆಸುವ ಕೌಶಲ ಇರಬೇಕು.
ಉನ್ನತ ನೈತಿಕ ಗುಣ ಮತ್ತು ಧರ್ಮನಿಷ್ಠೆ ಹೊಂದಿರಬೇಕು.
ಇಸ್ಲಾಮಿಕ್ ಗಣರಾಜ್ಯ ಮತ್ತು ಅದರ ಮೂಲ ತತ್ವಗಳಿಗೆ ನಿಷ್ಠರಾಗಿರಬೇಕು
ಸರ್ವೋಚ್ಚ ನಾಯಕರನ್ನು ಆಯ್ಕೆ ಮಾಡುವ ಅಧಿಕಾರ ಇರುವ ಅಸೆಂಬ್ಲಿ ಆಫ್ ಎಕ್ಸ್ಪರ್ಟ್ನಲ್ಲಿ 88 ಸದಸ್ಯರು ಇರುತ್ತಾರೆ. ಇವರ ಅವಧಿ 8 ವರ್ಷ. ಇವರು ಜನರಿಂದ ಆಯ್ಕೆಯಾಗಿರುತ್ತಾರೆ.
ಯಾವುದೇ ಅಭ್ಯರ್ಥಿ ಸ್ಪರ್ಧಿಸುವ ಮೊದಲು 'ಗಾರ್ಡಿಯನ್ ಕೌನ್ಸಿಲ್ನ ಅನುಮೋದನೆ ಪಡೆಯಬೇಕು. ಈ ಕೌನ್ಸಿಲ್ನ 12 ಸದಸ್ಯರಲ್ಲಿ 6 ಮಂದಿಯನ್ನು ಸರ್ವೋಚ್ಚ ನಾಯಕನೇ ನೇರವಾಗಿ ನೇಮಿಸುತ್ತಾರೆ. ಆಡಳಿತದ ನಿಷ್ಠಾವಂತರಿಂದಲೇ ಮಂಡಳಿ ತುಂಬಿರುವಂತೆ ನೋಡಿಕೊಳ್ಳುತ್ತದೆ.
ನಾಯಕನ ಸ್ಥಾನವು ತೆರವಾದಾಗ, ಮಂಡಳಿಯು ತಕ್ಷಣವೇ ಸಭೆ ಸೇರಬೇಕು. ಇಲ್ಲಿ ಯಾವುದೇ ಪ್ರಚಾರ ಅಥವಾ ಸಾರ್ವಜನಿಕ ಮತದಾನವಿರುವುದಿಲ್ಲ.
ರಹಸ್ಯ ಸಭೆ: ಮಂಡಳಿಯ ಚರ್ಚೆಗಳು ಮತ್ತು ನಡಾವಳಿಗಳು ಅತ್ಯಂತ ಗೋಪ್ಯವಾಗಿರುತ್ತವೆ
ಬಹುಮತ: ಆಯ್ಕೆಯಾಗಬೇಕಾದರೆ ಅಭ್ಯರ್ಥಿಯು 88 ಸದಸ್ಯರಲ್ಲಿ ಬಹುಮತದ ಬೆಂಬಲ ಪಡೆಯಬೇಕು.
ಮಧ್ಯಂತರ ಮಂಡಳಿ: ಹೊಸ ನಾಯಕನ ನೇಮಕವಾಗುವವರೆಗೆ, ಅಧ್ಯಕ್ಷ, ನ್ಯಾಯಾಂಗ ಮುಖ್ಯಸ್ಥ ಮತ್ತು ಗಾರ್ಡಿಯನ್ ಕೌನ್ಸಿಲ್ನ ಒಬ್ಬ ಸದಸ್ಯರನ್ನೊಳಗೊಂಡ 'ನಾಯಕತ್ವ ಮಂಡಳಿ' ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಯಾದಾಗಿನಿಂದ ಈ ಅಧಿಕಾರವು ಕೇವಲ ಒಂದು ಬಾರಿ ಮಾತ್ರ ವರ್ಗಾವಣೆಯಾಗಿದೆ. 1989 ರಲ್ಲಿ ಅಯತೊಲ್ಲಾ ರುಹೊಲ್ಲಾ ಖಮೇನಿ ನಿಧನರಾದಾಗ, ಅಲಿ ಖಮೇನಿ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಆ ಸಮಯದಲ್ಲಿ ಖಮೇನಿ ಅವರು ಉನ್ನತ ಶ್ರೇಣಿಯ ಧರ್ಮಗುರುವಾಗಿರಲಿಲ್ಲ, ಈ ಕಾರಣಕ್ಕಾಗಿಯೇ ಸಂವಿಧಾನಕ್ಕೆ ತಿದ್ದುಪಡಿ ತಂದು ಆ ಅರ್ಹತೆಯ ನಿಯಮವನ್ನು ಸಡಿಲಿಸಲಾಯಿತು.
(ವಿವಿಧ ಸುದ್ದಿ ಮೂಲಗಳನ್ನು ಆಧರಿಸಿ ಕ್ರೋಢಿಕರಿಸಿದ ಮಾಹಿತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.