ADVERTISEMENT

ರಾಕೆಟ್‌ ದಾಳಿ: ಕೇರಳ ಮೂಲದ ಮಹಿಳೆ ಕುಟುಂಬಕ್ಕೆ ಇಸ್ರೇಲ್‌ ಅಧ್ಯಕ್ಷರ ಸಾಂತ್ವನ

ಪಿಟಿಐ
Published 19 ಮೇ 2021, 7:11 IST
Last Updated 19 ಮೇ 2021, 7:11 IST
ರಿಯುವನ್ ರಿವ್ಲಿನ್
ರಿಯುವನ್ ರಿವ್ಲಿನ್   

ಜೆರುಸಲೇಂ: ಪ್ಯಾಲೆಸ್ಟೀನ್‌ ಮೂಲದ ಭಯೋತ್ಪಾದಕ ಸಂಘಟನೆಯು ನಡೆಸಿದ್ದ ರಾಕೆಟ್‌ ದಾಳಿಯಲ್ಲಿ ಮೃತಪಟ್ಟ ಕೇರಳ ಮೂಲದ ಮಹಿಳೆಯ ಕುಟುಂಬದವರೊಂದಿಗೆ ಇಸ್ರೇಲ್‌ ಅಧ್ಯಕ್ಷ ರಿಯುವನ್ ರಿವ್ಲಿನ್ ಅವರು ಬುಧವಾರ ಮಾತನಾಡಿ ಸಾಂತ್ವನ ಹೇಳಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯ ಸಂತೋಷ್, ದಕ್ಷಿಣ ಇಸ್ರೇಲ್‌ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಮೇ 11 ರಂದು ಗಾಜಾ ಪಟ್ಟಿಯಿಂದ ಉಗ್ರರು ನಡೆಸಿದ ರಾಕೆಟ್ ದಾಳಿಯು ನೇರವಾಗಿ ವೃದ್ಧೆಯ ಮನೆಗೆ ಅಪ್ಪಳಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

‘ಇಸ್ರೇಲ್ ಅಧ್ಯಕ್ಷರು ಸೌಮ್ಯ ಸಂತೋಷ್‌ ಅವರ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಸಂತಾಪ ಸೂಚಿಸಿದ್ದಾರೆ’ ಎಂದು ರಿವ್ಲಿನ್ ಸಲಹೆಗಾರರು ಮಾಹಿತಿ ನೀಡಿದರು.

ADVERTISEMENT

ಮೇ 14ರಂದು ಸೌಮ್ಯ ಅವರ ಮೃತದೇಹವನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.