ADVERTISEMENT

ಗಾಜಾದಲ್ಲಿ ನಿಲ್ಲದ ಇಸ್ರೇಲ್ ದಾಳಿ: ಮಹಿಳೆಯರು, ಮಕ್ಕಳು ಸೇರಿ 70 ಮಂದಿ ಸಾವು

ಕದನ ವಿರಾಮ: ರಾಜಿ ಮಾತುಕತೆಗೆ ಇಸ್ರೇಲ್ ನಿರಾಕರಣೆ

ರಾಯಿಟರ್ಸ್
Published 20 ಮಾರ್ಚ್ 2025, 12:42 IST
Last Updated 20 ಮಾರ್ಚ್ 2025, 12:42 IST
<div class="paragraphs"><p>ಗಾಜಾದಲ್ಲಿ ಇಸ್ರೇಲ್ ದಾಳಿ</p></div>

ಗಾಜಾದಲ್ಲಿ ಇಸ್ರೇಲ್ ದಾಳಿ

   

–ರಾಯಿಟರ್ಸ್ ಚಿತ್ರ

ಗಾಜಾ/ಕೈರೊ: ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಗುರುವಾರ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ವಾಯುದಾಳಿಯು ಗಾಜಾಪಟ್ಟಿಯ ಉತ್ತರ ಹಾಗೂ ದಕ್ಷಿಣ ಭಾಗದ ಹಲವು ಮನೆಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಸಾವಿನ ಕುರಿತಾದ ವರದಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಗಾಜಾಪಟ್ಟಿಯ ಮೇಲೆ ವಾಯುದಾಳಿಯನ್ನು ಇಸ್ರೇಲ್ ಮಂಗಳವಾರದಿಂದ ಮತ್ತೆ ಆರಂಭಿಸಿದೆ. ಬುಧವಾರ ಭೂದಾಳಿ ಕೂಡ ಶುರುವಾಗಿದೆ. ಈ ಮೂಲಕ ಅದು ಜನವರಿಯಲ್ಲಿ ಜಾರಿಗೆ ಬಂದಿದ್ದ ಕದನ ವಿರಾಮ ಒಪ್ಪಂದವನ್ನು ಕೈಬಿಟ್ಟಂತೆ ಆಗಿದೆ.

ಗಾಜಾದಲ್ಲಿ ತನ್ನ ಆಡಳಿತವನ್ನು ಮತ್ತೆ ಸ್ಥಾಪಿಸುವ ಹವಣಿಕೆಯಲ್ಲಿ ಇದ್ದ ಹಮಾಸ್‌ ಸಂಘಟನೆಗೆ ಇಸ್ರೇಲ್‌ನ ದಾಳಿಯು ಭಾರಿ ಪೆಟ್ಟು ಕೊಟ್ಟಿದೆ. ಈ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್‌ನ ಪ್ರಮುಖ ನಾಯಕರು ಹತರಾಗಿದ್ದಾರೆ. ಮೃತಪಟ್ಟವರಲ್ಲಿ ಗಾಜಾ ಸರ್ಕಾರದ ಮುಖ್ಯಸ್ಥ ಕೂಡ ಸೇರಿದ್ದಾರೆ. 

ಕದನ ವಿರಾಮದ ಮೊದಲ ಹಂತವು ಈ ತಿಂಗಳ ಆರಂಭದಲ್ಲಿ ಕೊನೆಗೊಂಡಿದೆ. ಮೊದಲೇ ಒಪ್ಪಿಕೊಂಡಿರುವ ಎರಡನೆಯ ಹಂತಕ್ಕೆ ಅಡಿ ಇಡಬೇಕು ಎಂಬುದು ಹಮಾಸ್‌ನ ಬಯಕೆ. ಎರಡನೆಯ ಹಂತದಲ್ಲಿ ಯುದ್ಧ ಕೊನೆಗೊಳಿಸುವ ಹಾಗೂ ಗಾಜಾಪಟ್ಟಿಯಿಂದ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಇಸ್ರೇಲ್ ಮಾತುಕತೆ ನಡೆಸಬೇಕು. ಗಾಜಾದಲ್ಲಿ ಸೆರೆಯಾಗಿರುವ ಇಸ್ರೇಲ್‌ನ ಒತ್ತೆಯಾಳುಗಳನ್ನು, ಇಸ್ರೇಲ್‌ನ ವಶದಲ್ಲಿರುವ ಪ್ಯಾಲೆಸ್ಟೀನ್ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಬೇಕು.

ಎರಡನೆಯ ಹಂತದ ಕದನ ವಿರಾಮಕ್ಕೆ ರಾಜಿ ಮಾತುಕತೆಯನ್ನು ಇಸ್ರೇಲ್ ತಿರಸ್ಕರಿಸಿದೆ. ಮೊದಲ ಹಂತವನ್ನು ವಿಸ್ತರಿಸಿ, ಒತ್ತೆಯಾಳುಗಳಾಗಿ ಇರುವ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂದು ಇಸ್ರೇಲ್ ಹೇಳಿದೆ.

ಟೆಲ್‌ ಅವಿವ್‌ ಮೇಲೆ ಹಮಾಸ್ ದಾಳಿ: ಇಸ್ರೇಲ್‌ನ ವಾಣಿಜ್ಯ ರಾಜಧಾನಿ ಟೆಲ್‌ ಅವಿವ್‌ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಹಮಾಸ್ ಹೇಳಿದೆ. ಗಾಜಾ ಮೇಲೆ ಇಸ್ರೇಲ್‌ ದಾಳಿಯು ಪುನರಾರಂಭ ಆದ ನಂತರ ಹಮಾಸ್ ನಡೆಸಿರುವ ಮೊದಲ ಪ್ರತಿದಾಳಿ ಇದು.

ಒಂದು ರಾಕೆಟ್ ಹೊಡೆದುರುಳಿಸಲಾಗಿದೆ, ಇನ್ನೆರಡು ರಾಕೆಟ್‌ಗಳು ಜನರಿಲ್ಲದ ಸ್ಥಳದಲ್ಲಿ ಬಿದ್ದಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಉತ್ತರ ಭಾಗಕ್ಕೆ ದಿಗ್ಬಂಧನ

ಗಾಜಾ ಪಟ್ಟಿ: ಪ್ಯಾಲೆಸ್ಟೀನ್ ನಾಗರಿಕರಿಗೆ ಗಾಜಾಪಟ್ಟಿಯ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಬರಲು ಅವಕಾಶ ಕೊಡುವುದಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಜನವರಿಯಲ್ಲಿ ಕದನ ವಿರಾಮ ಆರಂಭವಾಗುವುದಕ್ಕೂ ಮೊದಲು ಇಸ್ರೇಲ್‌ ಮಿಲಿಟರಿಯು ಜನರು ಗಾಜಾ ಪಟ್ಟಿಯ ಉತ್ತರ ಭಾಗ ಪ್ರವೇಶಿಸುವುದಕ್ಕೆ ತಡೆ ಒಡ್ಡಿತ್ತು. ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಗಾಜಾಪಟ್ಟಿಯ ಉತ್ತರ–ದಕ್ಷಿಣವನ್ನು ಬೆಸೆಯುವ ಪ್ರಮುಖ ಹೆದ್ದಾರಿಯನ್ನು ಬಳಸಿ ಜನ ಉತ್ತರ ಭಾಗಕ್ಕೆ ಬರುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಜನರು ದಕ್ಷಿಣ ಭಾಗಕ್ಕೆ ತೆರಳಲು ಕಿನಾರೆಗೆ ಹೊಂದಿಕೊಂಡಿರುವ ಮಾರ್ಗವನ್ನು ಮಾತ್ರ ಬಳಸಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.