ನ್ಯೂಯಾರ್ಕ್: ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಮೆಕ್ಸಿಕೊ ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದೆ.
ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಉಕ್ರೇನ್ ಕುರಿತ ಚರ್ಚೆಯ ವೇಳೆ ಮೆಕ್ಸಿಕೊದ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಎಬ್ರಾಡ್ ಕ್ಯಾಸೌಬಾನ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟರು.
ಉಜ್ಬೇಕಿಸ್ತಾನದ ಸಮರ್ಕಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ 22ನೇ ಸಭೆಯ ನಂತರ ಪುಟಿನ್ ಅವರನ್ನು ಭೇಟಿಯಾದ ಮೋದಿ ಅವರು ‘ಯುದ್ಧವು ಈ ಯುಗಕ್ಕೆ ಸರಿಹೊಂದುವಂಥದ್ದಲ್ಲ’ ಎಂದು ಪುಟಿನ್ಗೆ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ಸದ್ಯ ಮೋದಿ ಅವರನ್ನು ಒಳಗೊಂಡಂತೆ ಸಮಿತಿ ರಚಿಸುವ ಪ್ರಸ್ತಾವ ಕೇಳಿ ಬಂದಿದೆ. ಪುಟಿನ್ ಭೇಟಿ ವೇಳೆ ಭಾರತದ ಪ್ರಧಾನಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಅಮೆರಿಕ, ಫ್ರಾನ್ಸ್ ಮತ್ತು ಪಾಶ್ಚಿಮಾತ್ಯ ಜಗತ್ತು ಸ್ವಾಗತಿಸಿದೆ.
‘ಸಾಧ್ಯವಾದರೆ, ಘನತೆವೆತ್ತ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಸೇರಿದಂತೆ ಇತರ ದೇಶ ಮತ್ತು ಸರ್ಕಾರಗಳ ಮುಖ್ಯಸ್ಥರ ಪ್ರಾತಿನಿಧ್ಯವಿರುವ ಸಮಿತಿಯನ್ನು ರಚಿಸಿ, ಉಕ್ರೇನ್ನಲ್ಲಿ ಮಾತುಕತೆ ಮತ್ತು ಶಾಂತಿ ಸ್ಥಾಪಿಸುವ ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಪ್ರಯತ್ನವನ್ನು ಬಲಪಡಿಸಬೇಕು. ಇದು ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಅಭಿಪ್ರಾಯವಾಗಿದೆ’ ಎಂದು ಮೆಕ್ಸಿಕೊ ವಿದೇಶಾಂಗ ಸಚಿವ ಲೂಯಿಸ್ ಹೇಳಿದರು.
ಇವುಗಳನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.