ಕಠ್ಮಂಡು: ದೇಶದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ನೇಪಾಳ ಸಂಸತ್ನ ಕೆಳಮನೆಯಲ್ಲಿ ಸರ್ವಾನುಮತದಿಂದ ಶನಿವಾರ ಅಂಗೀಕರಿಸಲಾಯಿತು.
ಭಾರತ ಜತೆಗಿನ ವಿವಾದಿತ ಗಡಿಯಲ್ಲಿರುವ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧೂರಾಗಳನ್ನು ತನ್ನದೆಂದು ನೇಪಾಳ ಪ್ರತಿಪಾದಿಸುತ್ತಿದೆ. ಮಾರ್ಪಡಿಸಿರುವ ಭೂಪಟವು ಈ ಪ್ರದೇಶಗಳನ್ನು ಒಳಗೊಂಡಿದೆ.
ನೇಪಾಳಿ ಕಾಂಗ್ರೆಸ್, ರಾಷ್ಡ್ರೀಯ ಜನತಾ ಪಾರ್ಟಿ–ನೇಪಾಳ (ಆರ್ಜೆಪಿ–ಎನ್), ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ (ಆರ್ಪಿಪಿ) ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ತಿದ್ದುಪಡಿ ಪರ ಮತ ಚಲಾಯಿಸಿದವು.
ಮಾರ್ಪಡಿಸಿರುವ ಭೂಪಟವನ್ನು ಒಳಗೊಂಡ ರಾಷ್ಟ್ರೀಯ ಲಾಂಛನವನ್ನು ಮರುವಿನ್ಯಾಸಗೊಳಿಸಲು ಸಹ ಈ ತಿದ್ದುಪಡಿ ಮಸೂದೆಯಿಂದ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಅನುಮೋದಿತ ಮಸೂದೆಯನ್ನು ಈಗ ನ್ಯಾಷನಲ್ ಅಸೆಂಬ್ಲಿಗೆ ಕಳುಹಿಸಲಾಗುತ್ತದೆ. ಮತ್ತೆ ತಿದ್ದುಪಡಿಗಳು ಅಗತ್ಯ ಎನಿಸಿದರೆ, ಅವುಗಳನ್ನು ಸಲ್ಲಿಸಲು 72 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.
ಅಲ್ಲಿಯೂ ಅಂಗೀಕರಿಸಿದ ಮಸೂದೆಯನ್ನು ಅಂಕಿತಕ್ಕಾಗಿ ರಾಷ್ಟ್ರಪತಿ ಅವರಿಗೆ ಕಳುಹಿಸಲಾಗುತ್ತದೆ. ನಂತರ ಈ ತಿದ್ದುಪಡಿಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗುತ್ತದೆ.
ನ್ಯಾಷನಲ್ ಅಸೆಂಬ್ಲಿಯ ಒಟ್ಟು ಸದಸ್ಯ ಬಲ 275. ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮೂರನೇ ಒಂದರಷ್ಟು ಮತಗಳ ಅಗತ್ಯ ಇದೆ. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿ ಅಗತ್ಯ ಸಂಖ್ಯಾಬಲ ಹೊಂದಿದೆ.
ವಿರೋಧ: ಕಳೆದ ತಿಂಗಳು ಸಚಿವ ಸಂಪುಟ ಅನುಮೋದನೆ ಮಾಡಿದ್ದ ಮಾರ್ಪಡಿಸಿದ ಭೂಪಟವನ್ನು ನೇಪಾಳ ಬಿಡುಗಡೆ ಮಾಡಿದಾಗ, ಅದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
‘ಇಂತಹ ಕ್ರಮಗಳ ಮೂಲಕ ತನ್ನ ಭೂಭಾಗವನ್ನು ವಿಸ್ತರಿಸುವುದನ್ನು ನೇಪಾಳ ನಿಲ್ಲಿಸಬೇಕು’ ಎಂದು ಕಟುವಾದ ಎಚ್ಚರಿಕೆಯನ್ನೂ ನೀಡಿತ್ತು.
ಇದನ್ನೂ ಓದಿ:ಭಾರತ–ಚೀನಾ ಗಡಿ: ಗಡಿಬಿಡಿಯ ಸುತ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.