ಕಠ್ಮಂಡು: ‘ಜೆನ್–ಝಿ’ ಯುವ ಜನತೆ ನಡೆಸಿದ ಪ್ರತಿಭಟನೆಗಳ ವೇಳೆ ಸಂಭವಿಸಿದ 72 ಜನರ ಹತ್ಯೆಗಳ ಕುರಿತು ತನಿಖೆ ನಡೆಸಲು ಸುಶೀಲಾ ಕಾರ್ಕಿ ನೇತೃತ್ವದ ಮಧ್ಯಂತರ ಸರ್ಕಾರ ಮೂವರು ಸದಸ್ಯರ ಸಮಿತಿ ರಚಿಸಿ ಭಾನುವಾರ ಆದೇಶಿಸಿದೆ.
‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೌರಿ ಬಹದೂರ್ ಕಾರ್ಕಿ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ನಿವೃತ್ತ ಹೆಚ್ಚುವರಿ ಐಜಿಪಿ ವಿಜ್ಞಾನ ರಣ ಶರ್ಮಾ, ಕಾನೂನು ತಜ್ಞ ವಿಶ್ವೇಶ್ವರ ಪ್ರಸಾದ ಭಂಡಾರಿ ಸಮಿತಿಯ ಸದಸ್ಯರಾಗಿದ್ದಾರೆ’ ಎಂದು ಗೃಹ ಸಚಿವ ಓಂಪ್ರಕಾಶ್ ಆರ್ಯಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 8 ಹಾಗೂ 9ರಂದು ಕಠ್ಮಂಡು ಹಾಗೂ ಇತರೆಡೆ ನಡೆದಿದ್ದ ಪ್ರತಿಭಟನೆಗಳ ನಂತರ, ಕೆ.ಪಿ.ಶರ್ಮಾ ಓಲಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಪ್ರತಿಭಟನೆಗಳ ವೇಳೆ ಭುಗಿಲೆದ್ದಿದ್ದ ಹಿಂಸಾಚಾರಗಳಲ್ಲಿ 72 ಜನರ ಹತ್ಯೆಯಾಗಿತ್ತು. ಈ ಹತ್ಯೆಗಳ ಬಗ್ಗೆ ತನಿಖೆ ನಡೆಸಬೇಕು ಎಂಬುದು ‘ಜೆನ್–ಝಿ’ ಗುಂಪಿನ ಬೇಡಿಕೆಗಳಲ್ಲೊಂದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.