ಇಸ್ಲಾಮಾಬಾದ್: ಕೋವಿಡ್–19ನ ಎರಡನೇ ಅಲೆಯನ್ನು ಎದುರಿಸಲು ಭಾರತಕ್ಕೆ ವೆಂಟಿಲೇಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಪರಿಕರಗಳನ್ನು ನೆರವು ನೀಡುವುದಾಗಿ ಪಾಕಿಸ್ತಾನ ಪುನರುಚ್ಚರಿಸಿದೆ.
ಉಭಯ ರಾಷ್ಟ್ರಗಳು ಸಹಕಾರವನ್ನು ಹೆಚ್ಚಿಸುವ ಮೂಲಕ ಸೋಂಕಿನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ್ನು ಪರಿಹಾರಿಸುವ ಮಾರ್ಗಗಳನ್ನು ಕಂಡುಕೊಳ್ಳಬಹುದು ಎಂದು ಪಾಕಿಸ್ತಾನ ಹೇಳಿದೆ.
‘ಭಾರತಕ್ಕೆ ವೆಂಟಿಲೇಟರ್, ಬಿಐ ಪಿಎಪಿ, ಡಿಜಿಟಲ್ ಎಕ್ಸ್–ರೇ ಉಪಕರಣಗಳು, ಪಿಪಿಇ ಕಿಟ್ಗಳು ನೀಡಲು ಪಾಕಿಸ್ತಾನ ಸಿದ್ಧವಿದೆ’ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಶಾಹಿದ್ ಹಫೀಜ್ ಚೌಧರಿ ಹೇಳಿದ್ದಾರೆ.
‘ಕೋವಿಡ್ನಿಂದಾಗಿ ಎದುರಾಗುವ ಸವಾಲುಗಳನ್ನು ತಗ್ಗಿಸಲು ಉಭಯ ದೇಶಗಳ ಸಂಬಂಧಪಟ್ಟ ಅಧಿಕಾರಿಗಳು ಮಾತುಕತೆ ನಡೆಸಿ ಸೂಕ್ತ ವಿಧಾನಗಳನ್ನು ಅನುಸರಿಸಬೇಕು’ ಎಂದು ಚೌಧರಿ ತಿಳಿಸಿದ್ದಾರೆ.
ಇದೇ ವೇಳೆ, ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜೈಲಿನಲ್ಲಿರುವ ಕಾಶ್ಮೀರದ ನಾಯಕರು ಮತ್ತು ಎಲ್ಲಾ ಕಾಶ್ಮೀರಿ ಕೈದಿಗಳನ್ನು ಭಾರತ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಚೌಧರಿ ಆಗ್ರಹಿಸಿದ್ದಾರೆ.
ಇತ್ತೀಚಿಗೆ ಭಾರತಕ್ಕೆ ನೆರವು ನೀಡುವ ಬಗ್ಗೆ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ‘ನೆರೆರಾಷ್ಟ್ರ ಮತ್ತು ವಿಶ್ವದಲ್ಲಿ ಸಾಂಕ್ರಾಮಿಕದಿಂದ ಬಳಲುತ್ತಿರುವ ಎಲ್ಲರೂ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇನೆ. ಕೋವಿಡ್ ವಿರುದ್ಧ ಹೋರಾಡುತ್ತಿರುವ ಭಾರತದ ಜತೆಗೆ ನಾವು ಇದ್ದೇವೆ. ನಾವು ಮಾನವೀಯತೆಯಿಂದ ಈ ಜಾಗತಿಕ ಸವಾಲನ್ನು ಒಟ್ಟಾಗಿ ಎದುರಿಸಬೇಕು’ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.