ADVERTISEMENT

‘ಯುದ್ಧವೊಂದೇ ಪರಿಹಾರವಲ್ಲ’: ಪಾಕಿಸ್ತಾನದಲ್ಲೀಗ ಸ್ಥಳೀಯರಿಂದ ಶಾಂತಿ ಮಂತ್ರ ಜಪ... 

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 3:15 IST
Last Updated 4 ಮಾರ್ಚ್ 2019, 3:15 IST
ಯುದ್ಧಬೇಡ ಶಾಂತಿ ಕಾಪಾಡಿ ಎಂದು ಆಗ್ರಹಿಸಿ ಪಾಕಿಸ್ತಾನದ ಲಾಹೋರ್‌ನಲ್ಲಿ ನಾಗರಿಕರು ರ‍್ಯಾಲಿ ನಡೆಸಿದ್ದಾರೆ. ಚಿತ್ರ: ಎಎಫ್‌ಪಿ
ಯುದ್ಧಬೇಡ ಶಾಂತಿ ಕಾಪಾಡಿ ಎಂದು ಆಗ್ರಹಿಸಿ ಪಾಕಿಸ್ತಾನದ ಲಾಹೋರ್‌ನಲ್ಲಿ ನಾಗರಿಕರು ರ‍್ಯಾಲಿ ನಡೆಸಿದ್ದಾರೆ. ಚಿತ್ರ: ಎಎಫ್‌ಪಿ   

ಲಾಹೋರ್:ಜಮ್ಮು ಮತ್ತು ಕಾಶ್ಮಿರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಭಾರತ ‘ಏರ್‌ ಸ್ಟ್ರೈಕ್‌’ ನಡೆಸಿ ಉಗ್ರರ ನೆಲೆಯನ್ನು ಧ್ವಂಸ ಮಾಡಿದೆ. ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿರುವ ಬೆನ್ನಲ್ಲೇ ಪಾಕ್‌ನಲ್ಲಿ ನಾಗರಿಕರು ಶಾಂತಿ ಮಂತ್ರ ಜಪಿಸುತ್ತಿದ್ದಾರೆ.

ಶಾಂತಿ ಕಾಪಾಡಿ ಎಂದು ಜನರು ಲಾಹೋರ್‌ನಲ್ಲಿ ರಸ್ತೆಗಿಳಿದು ರ‍್ಯಾಲಿ ಮಾಡಿದ್ದಾರೆ.

‘ಯುದ್ಧ ಬೇಡ ಶಾಂತಿ ಕಾಪಾಡಿ’, ‘ಶಾಂತಿಯೊಂದೇ ಮುಂದಿನ ನೆಮ್ಮದಿಯ ದಿನಕ್ಕೆ ದಾರಿ’, ’ಯುದ್ಧವೊಂದೇ ಪರಿಹಾರವಲ್ಲ’ ಎಂಬ ಫಲಕಗಳನ್ನು ಹಿಡಿದ ನಾಗರಿಕರು ಮೊಂಬತ್ತಿ ಬೆಳಗಿಸಿ ಶಾಂತಿ ಮಂತ್ರ ಜಪಿಸಿದ್ದಾರೆ.

ADVERTISEMENT

ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವದ ಪ್ರಮುಖ ರಾಷ್ಟ್ರಗಳು ಒತ್ತಡ ಹೇರಿದ ಬಳಿಕ, ಪಾಕ್‌ ಅಧ್ಯಕ್ಷ ಇಮ್ರಾನ್‌ ಖಾನ್‌ ಶಾಂತಿ ಕಾಪಾಡಲು ಒಂದು ಅವಕಾಶ ನೀಡಿ ಎಂದು ಸಂಸತ್‌ನಲ್ಲಿ ಹೇಳಿದ್ದರು.

ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತೀಯ 44 ಯೋಧರು ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ಬಾಲ್‌ಕೋಟ್‌ನಲ್ಲಿನ ಉಗ್ರರ ನೆಲೆಯ ಮೇಲೆ ವಾಯು ದಾಳಿ ನಡೆಸಿ ಧ್ವಂಸ ಗೊಳಿಸಿದೆ. ಇದಕ್ಕೆ ಪ್ರತೀಕಾರ ಎಂಬಂತೆ ಪಾಕಿಸ್ತಾನ ಭಾರತದತ್ತ ಎಫ್‌16 ವಿಮಾನದ ಮೂಲಕ ಬಾಂಬ್ ಹಾಕಿದೆ. ಈ ವೇಳೆ ಪಾಕ್‌ ವಿಮಾನವನ್ನು ಭಾರತೀಯ ವಾಯು ಪಡೆ ಹಿಮ್ಮೆಟ್ಟಿಸಿದೆ.

ಭಾರತೀಯ ವಾಯು ಪಡೆಯ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ವಿಂಗ್‌ ಕಮಾಂಡರ್ ಅಭಿನಂದನ್‌ ಅವರು ಪಾಕ್‌ ಸೇನೆಯಿಂದ ಬಂಧನಕ್ಕೊಳಗಾಗಿದ್ದರು. ಎರಡು ದಿನಗಳ ಬಳಿಕ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.

ಈ ಎಲ್ಲಾ ಘಟನೆಗಳ ನಡುವೆಯೂ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.