ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಣ ಶಾಂತಿ ಮಾತುಕತೆಯ ಜವಾಬ್ದಾರಿ ಪಾಕಿಸ್ತಾನದ ಮೇಲೆಯೇ ನಿಂತಿದೆ. ಪಾಕ್ ಮಾತ್ರವೇ ಉಗ್ರರ ವಿರುದ್ಧ ‘ನಿರಂತರ ಮತ್ತು ಬದಲಿಸಲಾಗದ’ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ಒಪ್ಪಿದರೆ ಕಾಶ್ಮೀರ ವಿವಾದ ಸಂಬಂಧ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತನ್ನು ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನ ಉಗ್ರರ ಗುಂಪು 2016 ರ ಜನವರಿಯಲ್ಲಿ ಪಠಾಣ್ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನದ ಜತೆಗೆ ಭಾರತ ಮಾತುಕತೆಯನ್ನು ಸ್ಥಗಿತಗೊಳಿಸಿದೆ. ಮಾತುಕತೆ ಮತ್ತು ಉಗ್ರ ಕೃತ್ಯ ಎರಡೂ ಒಟ್ಟಿಗೆ ನಡೆಯದು ಎಂಬ ವಾದವನ್ನು ಮುಂದಿಟ್ಟಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ರದ್ದುಪಡಿಸಿದ ನಂತರವಂತೂ ಉಭಯ ದೇಶಗಳ ನಡುವಣ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ. ರಾಜತಾಂತ್ರಿಕ ಒಪ್ಪಂದಕ್ಕೆ ಮುಂದಾಗದ ಪಾಕಿಸ್ತಾನ ಭಾರತದ ರಾಯಭಾರಿಯನ್ನೂ ಹಿಂದಕ್ಕೆ ಕಳುಹಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಣ ರಚನಾತ್ಮಕ ವಾತಾವರಣ ನಿರ್ಮಾಣವಾಗುವಂತೆ ಅಮೆರಿಕದ ಪ್ರೋತ್ಸಾಹ ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.