ಅಥೆನ್ಸ್: ಕೆಟ್ಟ ಹಾಗೂ ಒಳ್ಳೆಯಭಯೋತ್ಪಾದನೆಗಳಲ್ಲಿ ಅಂತಹ ವ್ಯತ್ಯಾಸವಿಲ್ಲ ಎಂಬುದನ್ನು ಭಾರತ ಹಾಗೂ ಐರೋಪ್ಯ ಒಕ್ಕೂಟ ಒಟ್ಟಾಗಿ ಜಾಗತಿಕ ಸಮುದಾಯದ ಗಮನಕ್ಕೆ ತರಬೇಕಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ಹೆಲೆನಿಕ್ ಪ್ರತಿಷ್ಠಾನ ಆಯೋಜಿಸಿದ್ದ ಭಾರತ ಹಾಗೂ ಐರೋಪ್ಯ ಒಕ್ಕೂಟದ ಸಂಬಂಧ ಕುರಿತ ಸಮಾವೇಶದಲ್ಲಿ ಕೋವಿಂದ್ ಮಾತನಾಡಿದರು.
ಯುರೋಪ್ನ ಪೂರ್ವ ಹಾಗೂ ಭಾರತದ ಪಶ್ಚಿಮ ದಿಕ್ಕಿನಲ್ಲಿ ಅಸ್ಥಿರತೆ ಹಾಗೂ ಉಗ್ರವಾದ ಕಂಡುಬರುತ್ತಿದೆ. ಇದು ಆತಂಕಕಾರಿ ಎಂದ ಅವರು, ಭಯೋತ್ಪಾದನೆಗೆ ಉತ್ತೇಜನ ನೀಡುವ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಸಲಹೆ ನೀಡಿದರು. ಉಗ್ರರಿಗೆ ಸ್ವರ್ಗ ಎನಿಸಿರುವ ಪಾಕಿಸ್ತಾನದ ಹೆಸರನ್ನು ಈ ಮೂಲಕ ಪರೋಕ್ಷವಾಗಿ ಪ್ರಸ್ತಾಪಿಸಿದರು.
ಕಾರ್ಯಸಾಧುವೂ, ಸುಸ್ಥಿರವೂ ಹಾಗೂ ಸಾರ್ವಭೌಮತೆಗೆ ಗೌರವ ಕೊಡುವಂತಹಅಂತರರಾಷ್ಟ್ರೀಯ ಸಂಪರ್ಕ ಯೋಜನೆಗಳಿಗೆ ಭಾರತ ಬದ್ಧವಾಗಿರಲಿದೆ ಎಂದು ಅವರು ಹೇಳಿದರು.
‘ಭಯೋತ್ಪಾದನೆಯು ಒಂದು ಪ್ರಜ್ಞಾಹೀನ ಕೃತ್ಯ. ಸೂಕ್ಷ್ಮ ಶಸ್ತ್ರಾಸ್ತ್ರಗಳ ಪ್ರಸರಣದಿಂದ ಹಿಡಿದು ದೈನದಿಂದ ಆರ್ಥಿಕ ಹಾಗೂ ಸಂಪರ್ಕ ಸಾಧನಗಳನ್ನು ಉಗ್ರರ ಗುಂಪುಗಳು ಬಳಕೆ ಮಾಡಿಕೊಳ್ಳುತ್ತಿರುವುದು ಕೇವಲ ಒಂದು ದೇಶಕ್ಕೆ ಬೆದರಿಕೆಯಲ್ಲ. ಅದು ಮಾನವ ಕುಲಕ್ಕೆ ಒಡ್ಡಿದ ಸವಾಲು’ ಎಂದು ಕೋವಿಂದ್ ಹೇಳಿದರು.
ಉಗ್ರವಾದವನ್ನು ಹತ್ತಿಕ್ಕಬೇಕಾದರೆ ಅಂತರರಾಷ್ಟ್ರೀಯ ಮಟ್ಟದ ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಹಾಗೂ ಜಾಗತಿಕ ಭಯೋತ್ಪಾದನೆ ನಿಗ್ರಹ ವೇದಿಕೆಗಳನ್ನು ಬಲಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.