ADVERTISEMENT

ಗಡಿಯಲ್ಲಿ ಸಹಜಸ್ಥಿತಿ ನಿರ್ಮಾಣಕ್ಕೆ ವಿಶೇಷ ಗಮನ ಅಗತ್ಯ: ಚೀನಾ ವಿದೇಶಾಂಗ ಸಚಿವ

ಪಿಟಿಐ
Published 3 ಮಾರ್ಚ್ 2023, 11:06 IST
Last Updated 3 ಮಾರ್ಚ್ 2023, 11:06 IST
ಚೀನಾ ವಿದೇಶಾಂಗ ಸಚಿವ ಕಿನ್ ಗಾಂಗ್‌ ಹಾಗೂ ಸಚಿವ ಎಸ್‌.ಜೈಶಂಕರ್‌ ಅವರು ದ್ವಿಪಕ್ಷೀಯ ಸಭೆಗೂ ಮುನ್ನ ಹಸ್ತಲಾಘವ ಮಾಡಿದರು –ಪಿಟಿಐ ಚಿತ್ರ
ಚೀನಾ ವಿದೇಶಾಂಗ ಸಚಿವ ಕಿನ್ ಗಾಂಗ್‌ ಹಾಗೂ ಸಚಿವ ಎಸ್‌.ಜೈಶಂಕರ್‌ ಅವರು ದ್ವಿಪಕ್ಷೀಯ ಸಭೆಗೂ ಮುನ್ನ ಹಸ್ತಲಾಘವ ಮಾಡಿದರು –ಪಿಟಿಐ ಚಿತ್ರ   

ಬೀಜಿಂಗ್: ‘ದ್ವಿಪಕ್ಷೀಯ ಸಂಬಂಧದಲ್ಲಿ ಗಡಿ ವಿವಾದಕ್ಕೆ ವಿಶೇಷ ಗಮನ ಅಗತ್ಯ. ಗಡಿ ಪ್ರದೇಶಗಳಲ್ಲಿ ಸಹಜಸ್ಥಿತಿ ನಿರ್ಮಿಸುವ ನಿಟ್ಟಿನಲ್ಲಿ ಉಭಯ ದೇಶಗಳು ತ್ವರಿತವಾಗಿ ಕಾರ್ಯಪ್ರವೃತ್ತವಾಗಬೇಕು ಎಂಬುದನ್ನು ಸಚಿವ ಕಿನ್‌ ಗಾಂಗ್‌ ಅವರು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಗಮನಕ್ಕೆ ತಂದಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಇಲ್ಲಿ ಹೇಳಿದೆ.

ನವದೆಹಲಿಯಲ್ಲಿ ಜಿ–20 ವಿದೇಶಾಂಗ ಸಚಿವರ ಸಭೆ ನಡೆದ ಸಂದರ್ಭದಲ್ಲಿ ಗಾಂಗ್ ಹಾಗೂ ಜೈಶಂಕರ್‌ ಅವರು ಮಾತುಕತೆ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್‌, ‘ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ಸೇರಿದಂತೆ ತಮ್ಮ ಮುಂದಿರುವ ಸವಾಲುಗಳ ಮೇಲೆಯೇ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆಯನ್ನು ಕೇಂದ್ರೀಕರಿಸುತ್ತಿವೆ. ಈ ಕಾರಣಕ್ಕೆ ಭಾರತ ಮತ್ತು ಚೀನಾ ನಡುವಿನ ಸಂಬಂಧ ಸಹಜವಾಗಿ ಇಲ್ಲ’ ಎಂದಿದ್ದಾರೆ.

ADVERTISEMENT

‘ಉಭಯ ದೇಶಗಳು ಮಾತುಕತೆ ಮುಂದುವರಿಸಿ, ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ನಮ್ಮ ನಾಯಕರು ಒಮ್ಮತದಿಂದ ಕೈಗೊಂಡಿರುವ ನಿರ್ಣಯಗಳನ್ನು ಎರಡೂ ದೇಶಗಳು ಅನುಷ್ಠಾನಕ್ಕೆ ತರಬೇಕು ಎಂಬುದಾಗಿ ಕಿನ್‌ ಹೇಳಿದರು’ ಎಂದು ವಿದೇಶಾಂಗ ಸಚಿವಾಲಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರಿ ಒಡೆತನದ ಷಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.