ವಾಷಿಂಗ್ಟನ್: ದಬ್ಬಾಳಿಕೆಯಿಂದ ಮುಕ್ತ, ವಿವಾದಗಳಿಗೆ ಶಾಂತಿ–ಸೌಹಾರ್ದಯುತ ಪರಿಹಾರ ಹಾಗೂ ನೌಕಾಯಾನದ ಸ್ವಾತಂತ್ರ್ಯ ಎಂಬ ತತ್ವಗಳೇ ತಳಹದಿಯಾಗಿರುವ ಇಂಡೊ–ಪೆಸಿಫಿಕ್ ಪ್ರದೇಶ ನಿರ್ಮಾಣಕ್ಕೆ ಕ್ವಾಡ್ ನಾಯಕರು ಬದ್ಧತೆ ಪ್ರದರ್ಶಿಸಿದ್ದಾರೆ.
ತನ್ನ ವ್ಯಾಪ್ತಿ ಮೀರಿ ಬಲಪ್ರದರ್ಶನಕ್ಕೆ ಹಾತೊರೆಯುತ್ತಿರುವ ಚೀನಾಕ್ಕೆ ವಿಶ್ವದ ನಾಲ್ಕು ಪ್ರಮುಖ ರಾಷ್ಟ್ರಗಳ ಕೂಟದ (ಕ್ವಾಡ್) ನಾಯಕರು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಅಭಿಪ್ರಾಯಪಡಲಾಗಿದೆ.
‘ದಬ್ಬಾಳಿಕೆಯಿಂದ ಮುಕ್ತವಾಗಿರುವ ಹಾಗೂ ರಾಜಕೀಯವಾಗಿ ತಮಗೆ ಅನುಕೂಲವಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಎಲ್ಲ ರಾಷ್ಟ್ರಗಳು ಶಕ್ತವಾಗಿರಬೇಕು ಎಂಬುದನ್ನು ಕ್ವಾಡ್ನ ನಾಯಕರಾದ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರು ಈ ಶೃಂಗಸಭೆಯಲ್ಲಿ ಪ್ರತಿಪಾದಿಸಿದರು’ ಎಂದು ಲೇಖನದಲ್ಲಿ ವಿವರಿಸಲಾಗಿದೆ.
‘ಭಾರತ, ಜಪಾನ್, ಅಮೆರಿಕ ಹಾಗೂ ಆಸ್ಟ್ರೇಲಿಯಾ ಹಲವು ವರ್ಷಗಳಿಂದ ಬಹಳ ನಿಕಟವಾಗಿ ಕಾರ್ಯನಿರ್ವಹಿಸಿವೆ. ಆದರೆ, ಶುಕ್ರವಾರ ನಡೆದ ಕ್ವಾಡ್ ಸಭೆಯಲ್ಲಿ ಈ ನಾಯಕರು ಈ ನಾಲ್ಕು ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತೊಂದು ಮಜಲಿಗೆ ಒಯ್ಯುವ ಬದ್ಧತೆಯನ್ನು ಮೊದಲ ಬಾರಿಗೆ ಪ್ರದರ್ಶಿಸಿದರು’ ಎಂದೂ ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.