ಕೊಲಂಬೊ: ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೀಪಾವಳಿ ವೇಳೆ ಧಾರ್ಮಿಕ ಸ್ಥಳಗಳಲ್ಲಿ ಹಬ್ಬದ ಚಟುವಟಿಕೆಗಳನ್ನು ಮೊಟಕುಗೊಳಿಸಬೇಕು ಎಂದು ಶ್ರೀಲಂಕಾ ಸರ್ಕಾರ ಅಲ್ಲಿನ ಹಿಂದೂ ಸಮುದಾಯಕ್ಕೆ ಗುರುವಾರ ಮನವಿ ಮಾಡಿದೆ.
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಸೋಂಕು ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿವೆ. ಇದೇ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಹಿಂದೂ ಸಮುದಾಯದಲ್ಲಿ ಮನವಿ ಮಾಡಿದೆ.
'ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,' ಚಹಾ ತೋಟಗಳಲ್ಲಿ ಕೆಲಸ ಮಾಡುವ ಭಾರತ ಮೂಲದ ತಮಿಳರಿಗೆ ಆರೋಗ್ಯ ಇಲಾಖೆಯು ಸೂಚಿಸಿದೆ.
'ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ದೀಪಾವಳಿ ಚಟುವಟಿಕೆಗಳನ್ನು ಈ ಬಾರಿ ಮೊಟಕುಗೊಳಿಸಬೇಕಾಗಿದೆ,' ಎಂದು ಆರೋಗ್ಯ ಇಲಾಖೆ ಸೂಚನೆಯಲ್ಲಿ ತಿಳಿಸಿದೆ.
ಶ್ರೀಲಂಕಾದ ಪಶ್ಚಿಮ ಭಾಗವನ್ನು ಭಾನುವಾರ ಸಂಜೆಯವರೆಗೆ ಲಾಕ್ಡೌನ್ ಮಾಡಲಾಗಿತ್ತು. ಕೊರೊನಾ ವೈರಸ್ನ ಸಮುದಾಯ ಪ್ರಸರಣೆಯನ್ನು ನಿಯಂತ್ರಿಸುವ ಸಲುವಾಗಿ ಲಾಕ್ಡೌನ್ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದರು.
ಕಳೆದ 24 ಗಂಟೆಗಳಲ್ಲಿ ಶ್ರೀಲಂಕಾ 644 ಹೊಸ ಕೋವಿಡ್ ಪ್ರಕರಣಗಳನ್ನು ಕಂಡಿದೆ. ಈ ಮಧ್ಯೆ ಸರ್ಕಾರ ಈ ಸೂಚನೆ ಬಿಡುಗಡೆ ಮಾಡಿದೆ.
ಶ್ರೀಲಂಕಾದಲ್ಲಿ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ 15,350ಕ್ಕೆ ಏರಿದೆ. 5,121 ಸಕ್ರಿಯ ಪ್ರಕರಣಗಳು ಅಲ್ಲಿದ್ದು, 523 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ 46 ಸಾವುಗಳು ವರದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.