ADVERTISEMENT

₹3,300 ಕೋಟಿಯ 2 ಪವನ ವಿದ್ಯುತ್‌ ಯೋಜನೆಗಳನ್ನು ‘ಅದಾನಿ’ಗೆ ನೀಡಿದ ಶ್ರೀಲಂಕಾ

ಐಎಎನ್ಎಸ್
Published 23 ಫೆಬ್ರುವರಿ 2023, 6:16 IST
Last Updated 23 ಫೆಬ್ರುವರಿ 2023, 6:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದಿಸಲು ಹೆಣಗಾಡುತ್ತಿರುವ ಶ್ರೀಲಂಕಾವು ‘ಅದಾನಿ ಗ್ರೂಪ್‌’ನ ಎರಡು ಪವನ ವಿದ್ಯುತ್ ಸ್ಥಾವರಗಳಿಗೆ ಅನುಮತಿ ನೀಡಿದೆ. ಈ ಎರಡು ಸ್ಥಾವರಗಳಿಗಾಗಿ ಭಾರತ ಮೂಲದ ಉದ್ಯಮವು ₹3,310 ಕೋಟಿ (400 ಮಿಲಿಯನ್ ಡಾಲರ್‌) ಹೂಡಿಕೆ ಮಾಡಲಿದೆ.

ಉತ್ತರ ಶ್ರೀಲಂಕಾದ ಹಿಂದಿನ ಯುದ್ಧ ಪೀಡಿತ ಪ್ರದೇಶಗಳಾದ ಮನ್ನಾರ್ ಮತ್ತು ಪೂನೆರಿನ್‌ನಲ್ಲಿ ಎರಡು ಪವನ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ‘ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌’ಗೆ ಶ್ರೀಲಂಕಾ ಹೂಡಿಕೆ ಮಂಡಳಿ (ಬಿಒಐ) ಅನುಮೋದನೆ ನೀಡಿದೆ.

350 ಮೆಗಾವಾಟ್‌ ಸಾಮರ್ಥ್ಯದ ಎರಡು ಪವನ ವಿದ್ಯುತ್ ಸ್ಥಾವರಗಳು ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿದ್ದು, 2025ರ ವೇಳೆಗೆ ರಾಷ್ಟ್ರೀಯ ಗ್ರಿಡ್‌ಗೆ ಸೇರಿಕೊಳ್ಳಲಿವೆ ಎಂದು ಬಿಒಐ ತಿಳಿಸಿದೆ.

ADVERTISEMENT

ಮನ್ನಾರ್‌ನಲ್ಲಿರುವ ಪವನ ವಿದ್ಯುತ್ ಸ್ಥಾವರವು 250 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಿದೆ, ಪೂನೆರಿನ್‌ನಲ್ಲಿರುವ ಸ್ಥಾವರವು 100 ಮೆ.ವಾ ಉತ್ಪಾದಿಸುತ್ತದೆ. ಹೊಸ ಯೋಜನೆಗಳಿಂದ ಸುಮಾರು 1,500-2,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗಿದೆ.

ಅದಾನಿ ಗ್ರೂಪ್‌ನ ಅಧಿಕಾರಿಗಳ ಗುಂಪು ಶ್ರೀಲಂಕಾ ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸೆಕರ ಅವರನ್ನು ಬುಧವಾರ ಭೇಟಿ ಮಾಡಿತ್ತು.

ಸ್ವಾತಂತ್ರ್ಯದ ನಂತರದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಶ್ರೀಲಂಕಾ, 2022ರ ಜನವರಿಯಲ್ಲಿ ದೀರ್ಘಾವಧಿಯ ಲೋಡ್‌ಶೆಡ್ಡಿಂಗ್‌ ಆರಂಭಿಸಿತ್ತು. ಜನರು ಇದರ ವಿರುದ್ಧ ಬೀದಿಗಿಳಿದಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮತ್ತು ಅವರ ಸರ್ಕಾರವನ್ನು ಉರುಳಿಸಲಾಗಿತ್ತು.

ಸ್ವಾತಂತ್ರ್ಯದ ನಂತರದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾ 2022 ರ ಜನವರಿಯಲ್ಲಿ ದೀರ್ಘ ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಪ್ರಾರಂಭಿಸಿತು ಮತ್ತು ಜನರು ಈ ಕ್ರಮದ ವಿರುದ್ಧ ಬೀದಿಗಿಳಿದರು, ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆ ಮತ್ತು ಅವರ ಸರ್ಕಾರವನ್ನು ಕೆಳಗಿಳಿಸಲು ಒತ್ತಾಯಿಸಿದರು.

ಅದಾನಿಗೆ ಯೋಜನೆ ಕೋಡಿಸಲು ಮೋದಿ ಪ್ರಭಾವದ ಆರೋಪ

ಅದಾನಿ ಸಂಸ್ಥೆಗೆ ಶ್ರೀಲಂಕಾದಲ್ಲಿ ಪವನ ವಿದ್ಯುತ್ ಯೋಜನೆ ಕೊಡಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಮೇಲೆ ಪ್ರಭಾವ ಬೀರಿದ್ದರು ಎಂದು ಸರ್ಕಾರಿ ಸ್ವಾಮ್ಯದ ವಿದ್ಯುತ್ ಘಟಕದ ‘ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ)’ನ ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ಅವರು ಕಳೆದ ಜೂನ್‌ನಲ್ಲಿ ಹೇಳಿದ್ದರು. ಈ ವಿಷಯ ವಿವಾದವಾಗುತ್ತಲೇ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘2021ರ ನವಂಬರ್‌ನಲ್ಲಿ ನಡೆದಿದ್ದ ಸಭೆಯೊಂದರ ನಂತರ ನನ್ನನ್ನು ಕರೆಸಿಕೊಂಡಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಪವನ ವಿದ್ಯುತ್ ಯೋಜನೆಯನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಅವರಿಗೆ ನೀಡಬೇಕು ಎಂದು ಸೂಚಿಸಿದ್ದರು. ಈ ಯೋಜನೆ ಅದಾನಿಗೆ ನೀಡಬೇಕು ಎಂದು ಭಾರತದ ಪ್ರಧಾನಿ ಮೋದಿ ಒತ್ತಾಯಿಸುತ್ತಿದ್ದಾರೆ’ ಎಂದು ರಾಜಪಕ್ಸ ಹೇಳಿದ್ದಾಗಿ ಫರ್ಡಿನಾಂಡೋ ಅವರು ಸಾರ್ವಜನಿಕ ಉದ್ಯಮಗಳ ಸಮಿತಿಯ (ಸಿಒಪಿಇ) ಸಭೆಯಲ್ಲಿ ಹೇಳಿದ್ದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.