
ಢಾಕಾ/ನವದೆಹಲಿ: ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ (ಎನ್ಐಡಿ) ಪಡೆಯಲು ಅಗತ್ಯವಿರುವ ಪ್ರಕ್ರಿಯೆಯನ್ನು ಶನಿವಾರ ಪೂರ್ಣಗೊಳಿಸಿದರು.
ಸ್ವಯಂ ಗಡಿಪಾರಾಗಿ 17 ವರ್ಷಗಳ ಬಳಿಕ ಲಂಡನ್ನಿಂದ ತವರಿಗೆ ಮರಳಿದ ತಾರಿಕ್, ಎರಡು ದಿನಗಳ ನಂತರ ಢಾಕಾದಲ್ಲಿರುವ ಚುನಾವಣಾ ಆಯೋಗದ (ಇ.ಸಿ) ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಬಯೋಮೆಟ್ರಿಕ್ ದಾಖಲಾತಿಗಾಗಿ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡಲಾಯಿತು.
‘ತಾರಿಕ್ ಈಗಾಗಲೇ ಆನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿದ್ದಾರೆ. ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವರು ಬಂದಿದ್ದರು. ಅವರಿಗೆ 24 ಗಂಟೆಗಳೊಳಗೆ ಎನ್ಐಡಿ ಕಾರ್ಡ್ ನೀಡಲಾಗುವುದು’ ಎಂದು ಚುನಾವಣಾ ಆಯೋಗದ ರಾಷ್ಟ್ರೀಯ ಗುರುತಿನ ನೋಂದಣಿ ವಿಭಾಗದ ಮಹಾನಿರ್ದೇಶಕ ಎ.ಎಸ್.ಎಂ ಹುಮಾಯೂನ್ ಕಬೀರ್ ತಿಳಿಸಿದ್ದಾರೆ.
ತಾರಿಕ್ ಅವರ ಪುತ್ರಿ ಜೈಮಾ ಕೂಡ ಎನ್ಐಡಿ ಕಾರ್ಡ್ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಇ.ಸಿ ಕಚೇರಿ ಆವರಣದ ಸುತ್ತಲೂ ಸೇನಾಪಡೆ, ಕ್ಷಿಪ್ರ ಕಾರ್ಯಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿತ್ತು.
ಬಂಗಾಳಿ ದಿನಪತ್ರಿಕೆ ‘ಪ್ರೊಥೊಮ್ ಅಲೊ’ ವರದಿಯ ಪ್ರಕಾರ, ಬಾಂಗ್ಲಾದೇಶದಲ್ಲಿ 2007–2008ರ ರಾಜಕೀಯ ಬಿಕ್ಕಟ್ಟಿನ ನಂತರ ಫಕ್ರುದ್ದೀನ್ ಅಹ್ಮದ್ ನೇತೃತ್ವದ ಮಿಲಿಟರಿ ಬೆಂಬಲಿತ ಸರ್ಕಾರದ ಅವಧಿಯಲ್ಲಿ ಛಾಯಾಚಿತ್ರ ಮತ್ತು ಬಯೋಮೆಟ್ರಿಕ್ ಒಳಗೊಂಡ ಮತದಾರರ ಪಟ್ಟಿಯನ್ನು 2008ರಲ್ಲಿ ಮೊದಲಿಗೆ ಪರಿಚಯಿಸಲಾಗಿತ್ತು.
ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಆ ಸಮಯದಲ್ಲಿ ರಾಜಕೀಯ ಕೈದಿಯಾಗಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ, 2008ರ ಸೆಪ್ಟೆಂಬರ್ 11ರಂದು ಲಂಡನ್ಗೆ ತೆರಳಿದ್ದರು. ಹೀಗಾಗಿ, ಮತದಾರರ ಪಟ್ಟಿಗೆ ಹೆಸರು ಸೇರಿಸಿರಲಿಲ್ಲ. ನಂತರದ ಶೇಖ್ ಹಸೀನಾ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಬಾಂಗ್ಲಾದೇಶಕ್ಕೆ ಹಿಂದಿರುಗಿರಲಿಲ್ಲ.
‘ಅರ್ಹ ನಾಗರಿಕರನ್ನು ಯಾವುದೇ ಸಮಯದಲ್ಲಿ ಮತದಾರರ ಪಟ್ಟಿಗೆ ಸೇರಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಚುನಾವಣಾ ಆಯೋಗದ ಮಾಜಿ ಅಧಿಕಾರಿ ಎಸ್.ಎಂ. ಅಸಾದುಜ್ಮಾನ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಫೆಬ್ರುವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ತಾರಿಕ್ ತಮ್ಮ ಪೂರ್ವಜರ ಕ್ಷೇತ್ರವಾದ ಬೊಗುರಾ ಸದರ್ನಿಂದ (ಬೊಗುರಾ–6) ಸ್ಪರ್ಧಿಸಲಿದ್ದಾರೆ. ಅವರ ಪರವಾಗಿ ಬಿಎನ್ಪಿ ನಾಯಕರು ಈ ತಿಂಗಳ ಆರಂಭದಲ್ಲೇ ನಾಮಪತ್ರಗಳನ್ನು ಸಂಗ್ರಹಿಸಿದ್ದಾರೆ.
17 ವರ್ಷಗಳ ಬಳಿಕ ಲಂಡನ್ನಿಂದ ತವರಿಗೆ ಮರಳಿದ್ದ ತಾರಿಕ್ ಇ.ಸಿ ಕಚೇರಿ ಆವರಣದ ಸುತ್ತಲೂ ಬಿಗಿ ಭದ್ರತೆ ಬೊಗುರಾ ಸದರ್ ಕ್ಷೇತ್ರದಿಂದ ತಾರಿಕ್ ಸ್ಪರ್ಧೆ
‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾನೂನುಬಾಹಿರ’
‘ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಿರುವಾಗ ತಾರಿಕ್ ಅವರನ್ನು ಪಟ್ಟಿಗೆ ಸೇರಿಸುವುದು ಕಾನೂನುಬಾಹಿರ’ ಎಂದು ಅವಾಮಿ ಲೀಗ್ ಹೇಳಿದೆ. ‘ತಾರಿಕ್ ಪದೇ ಪದೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಆದರೂ ಅವರು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಹೊಸ ಮತದಾರರಾಗುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಅದಲ್ಲದೆ ಶನಿವಾರ ಸರ್ಕಾರಿ ರಜಾ ದಿನವಾಗಿದ್ದರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ನಡೆಸಲಾಗಿದೆ. ಯಾರ ಸೂಚನೆಯಡಿ ಇದು ನಡೆದಿದೆ’ ಎಂದು ಪ್ರಶ್ನಿಸಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಸ್ಪರ್ಧಿಸದಂತೆ ಮಧ್ಯಂತರ ಸರ್ಕಾರ ನಿಷೇಧ ಹೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.