
ಕರಾಚಿ: ಸಿಂಧ್ ಪ್ರಾಂತ್ಯದಲ್ಲಿ ಸಂಭವಿಸಿದ ಎಕ್ಸ್ಪ್ರೆಸ್ ರೈಲು ಅಪಘಾತದಲ್ಲಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ. 80 ಜನ ಗಾಯಗೊಂಡಿದ್ದಾರೆ ಎಂದು ರೈಲ್ವೆ ಸಚಿವ ಸಾದ್ ರಫೀಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕರಾಚಿಯಿಂದ ರಾವಲ್ಪಿಂಡಿಗೆ ಹೊರಟಿದ್ದ ಹಜಾರಾ ಎಕ್ಸ್ಪ್ರೆಸ್ ರೈಲು ನವಾಬ್ ಶಾ ಜಿಲ್ಲೆಯ ಬಳಿ ಹಳಿತಪ್ಪಿದೆ. ಕರಾಚಿಯಿಂದ 275 ಕಿ.ಮೀ ದೂರದಲ್ಲಿ ರೈಲು ಅಪಘಾತಕ್ಕೀಡಾಗಿದೆ.
ರೈಲ್ವೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿವೆ, ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು ಒಂದು ಸಾವಿರ ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹಲವಾರು ಮಂದಿ ರೈಲು ಬೋಗಿಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ರೈಲ್ವೆ ಚಾಲಕ ಮಾಧ್ಯಮಗಳೊಂದಿಗೆ ಮಾತನಾಡುವಾಗ, ‘ರೈಲಿನ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ ಆಗಿದೆ. ಆದರೆ ರೈಲು ಗಂಟೆಗೆ 50 ಕಿ.ಮೀ ವೇಗದಲ್ಲಿತ್ತು. 19 ಬೋಗಿಗಳಲ್ಲಿ 10 ಬೋಗಿಗಳು ಹಳಿತಪ್ಪಿದ್ದವು, ಏನಾಯಿತು ಎಂದು ನನಗೆ ತಿಳಿದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ: ಹಳಿತಪ್ಪಿದ ರೈಲು– 22 ಮಂದಿ ಸಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.