
ಶ್ರೀಲಂಕಾದ ಜಾಫ್ನಾದಲ್ಲಿ ಹಾನಿಗೊಂಡ ಸೇತುವೆಯನ್ನು ಅಲ್ಲಿನ ಸೇನೆ ಹಾಗೂ ಭಾರತೀಯ ಸೇನೆಯ ಎಂಜಿನಿಯರ್ಗಳ ಕಾರ್ಯಪಡೆಯ ಸಿಬ್ಬಂದಿಯು ತೆರವುಗೊಳಿಸಿದರು
–ಪಿಟಿಐ ಚಿತ್ರ
ಕೊಲಂಬೊ: ಆರ್ಥಿಕ ಬಿಕ್ಕಟ್ಟು ಹಾಗೂ ‘ದಿತ್ವಾ’ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ 3.5 ಕೋಟಿ ಡಾಲರ್ (ಸುಮಾರು ₹316 ಕೋಟಿ) ಅನುದಾನವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಸಂಗ್ರಹಿಸಲು ವಿಶ್ವಸಂಸ್ಥೆ ಮುಂದಾಗಿದೆ.
‘ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಶ್ರೀಲಂಕಾ ಸಾಲದ ಸುಳಿಗೆ ಸಿಲುಕಿದೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಉಂಟಾದ ‘ದಿತ್ವಾ’ ಚಂಡಮಾರುತವು ಬಡವರು ಮತ್ತು ದುರ್ಬಲರನ್ನು ಅತ್ಯಂತ ತೀವ್ರವಾಗಿ ಬಾಧಿಸಿದೆ. ಅಲ್ಲಿನ ಜನಸಂಖ್ಯೆಯ ಶೇ 25ರಷ್ಟು ಜನರು ಬಡವರಾಗಿದ್ದಾರೆ. ದ್ವೀಪ ರಾಷ್ಟ್ರಕ್ಕೆ ನೆರವಾಗಲು ‘ಮಾನವೀಯ ಆದ್ಯತೆಗಳ ಯೋಜನೆ’ಯನ್ನು (ಎಚ್ಪಿಪಿ) ಕೈಗೊಳ್ಳಲಾಗಿದೆ’ ಎಂದು ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಮಾರ್ಕ್–ಆಂಡ್ರೆ ಫ್ರಾಂಚೆ ಗುರುವಾರ ತಿಳಿಸಿದ್ದಾರೆ.
‘ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಸ್ವಿಟ್ಜರ್ಲೆಂಡ್, ಅಮೆರಿಕದಿಂದ ಈಗಾಗಲೇ 95 ಲಕ್ಷ ಡಾಲರ್ (₹85.77 ಕೋಟಿ) ಸಂಗ್ರಹಿಸಲಾಗಿದೆ. ಇನ್ನೂ 2.6 ಕೋಟಿ ಡಾಲರ್ (₹234.75 ಕೋಟಿ) ಸಂಗ್ರಹಿಸಲು ಉದ್ದೇಶಿಸಲಾಗಿದೆ. ಅಂತರರಾಷ್ಟ್ರೀಯ ಸಮುದಾಯವು ಶ್ರೀಲಂಕಾಕ್ಕೆ ಕೊಡುಗೆ ನೀಡುವಂತೆ ವಿಶ್ವಸಂಸ್ಥೆ ಕರೆ ನೀಡಿದೆ’ ಎಂದು ಫ್ರಾಂಚೆ ಹೇಳಿದ್ದಾರೆ.
ಶ್ರೀಲಂಕಾದ ವೈದ್ಯಕೀಯ ಶಿಬಿರದಲ್ಲಿ ಗಾಯಾಳುಗಳಿಗೆ ಭಾರತೀಯ ಸೇನೆಯ ವೈದ್ಯಕೀಯ ತಂಡವು ಚಿಕಿತ್ಸೆ ನೀಡಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.