ತಹವ್ವುರ್ ರಾಣಾ
– ಪಿಟಿಐ ಚಿತ್ರಗಳು
ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ ವಿಚಾರದಲ್ಲಿ ಪಾಕಿಸ್ತಾನ ಅಂತರ ಕಾಯ್ದುಕೊಂಡಿದೆ. ರಾಣಾ ಪಾಕಿಸ್ತಾನದ ಪೌರತ್ವ ಹೊಂದಿದ ನಾಗರಿಕನಲ್ಲ ಬದಲಾಗಿ ರಾಣಾಗೆ ಕೆನಡಾ ಪೌರತ್ವವಿದೆ. ಹೀಗಾಗಿ ಆತ ಕೆನಡಾದ ಪ್ರಜೆ ಎಂದು ಪಾಕಿಸ್ತಾನ ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಿದೆ.
ರಾಣಾನನ್ನು ಅಮೆರಿಕದಿಂದ ಗಡೀಪಾರು ಮಾಡಿದ ನಂತರ ಭಾರತಕ್ಕೆ ಕರೆತರಲಾಗಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಶಫ್ಕತ್ ಅಲಿ ಖಾನ್, ‘ರಾಣಾ ಕೆನಾಡಕ್ಕೆ ತೆರಳಿದ ನಂತರ ಪಾಕಿಸ್ತಾನದ ಪೌರತ್ವವನ್ನು ನವೀಕರಿಸಿಲ್ಲ. ರಾಣಾ ಪೌರತ್ವ ದಾಖಲೆಗಳು ನವೀಕರಣಗೊಂಡು ಎರಡು ದಶಕಗಳೇ ಕಳೆದಿವೆ. ಆತನ ಬಳಿ ಕೆನಡಾದ ಪೌರತ್ವವಿದೆ. ಎರಡು ದೇಶಗಳ ಪೌರತ್ವ ಪಡೆಯಲು ಪಾಕಿಸ್ತಾನ ಅನುಮತಿ ನೀಡುವುದಿಲ್ಲ. ಹೀಗಾಗಿ ರಾಣಾ ಕೆನಡಾದ ನಾಗರಿಕ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ’ ಎಂದು ಹೇಳಿದ್ದಾರೆ.
ಆದರೆ, 26/11 ದಾಳಿಯನ್ನು ಪಾಕಿಸ್ತಾನ ಮೂಲದ ನಾಯಕರ ಬೆಂಬಲದೊಂದಿಗೆ ನಡೆಸಲಾಗಿದೆ ಎಂದು ಭಾರತ ಪದೇ ಪದೇ ಹೇಳಿದೆ.
ಪಾಕಿಸ್ತಾನದ ಸೇನೆ ಮತ್ತು ಅದರ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಹಾಗೂ 26/11ರ ದಾಳಿ ನಡೆಸಿದ ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯಬಾ ಜೊತೆ ಸಂಪರ್ಕ ಹೊಂದಿರುವ ಶಂಕಿತ ರಾಣಾನನ್ನು ಬುಧವಾರ ತಡರಾತ್ರಿ ಅಮೆರಿಕದಿಂದ ಗಡೀಪಾರು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.