ADVERTISEMENT

ಭದ್ರತೆಯನ್ನು ಬದಿಗೊತ್ತಿ ಆರ್ಥಿಕತೆಗೆ ಪ್ರಾಮುಖ್ಯತೆ ನೀಡಿದ ಜರ್ಮನಿ: ಝೆಲೆನ್‌ಸ್ಕಿ

ಪಿಟಿಐ
Published 17 ಮಾರ್ಚ್ 2022, 12:27 IST
Last Updated 17 ಮಾರ್ಚ್ 2022, 12:27 IST
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ   

ಬರ್ಲಿನ್: ರಷ್ಯಾದ ಆಕ್ರಮಣದ ಸಮಯದಲ್ಲಿ ಜರ್ಮನಿಯು ತನ್ನ ದೇಶದ ಭದ್ರತೆಯನ್ನು ಬದಿಗೊತ್ತಿ ಆರ್ಥಿಕತೆಗೆ ಪ್ರಾಮುಖ್ಯತೆನೀಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ದೂರಿದ್ದಾರೆ.

ಜರ್ಮನಿಯ ಸಂಸತ್ತಿನಲ್ಲಿ ಗುರುವಾರ ಮಾಡಿದ ಭಾವನಾತ್ಮಕ ಭಾಷಣದಲ್ಲಿ, ರಷ್ಯಾದಿಂದ ನೈಸರ್ಗಿಕ ಅನಿಲವನ್ನು ತರಲು ಉದ್ದೇಶಿಸಿರುವ ‘ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್’ಯೋಜನೆಗೆ ಜರ್ಮನ್ ಸರ್ಕಾರದ ಬೆಂಬಲವನ್ನು ಝೆಲೆನ್‌ಸ್ಕಿ ಟೀಕಿಸಿದರು. ಉಕ್ರೇನ್ ಮತ್ತು ಇತರ ದೇಶಗಳು ಈ ಯೋಜನೆಯನ್ನು ವಿರೋಧಿಸಿದ್ದು, ಅದು ಉಕ್ರೇನ್ ಮತ್ತು ಯುರೋಪಿಯನ್ ದೇಶಗಳ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿವೆ.

ಜರ್ಮನಿಯ ಆರ್ಥಿಕತೆಗೆ ಹಾನಿಯಾಗಬಹುದು ಎಂಬ ಭಯದಿಂದ ರಷ್ಯಾದ ಮೇಲೆ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಲು ಜರ್ಮನಿ ಹಿಂಜರಿಕೆ ತೋರಿದೆ ಎಂದು ಝೆಲೆನ್‌ಸ್ಕಿ ದೂರಿದ್ದಾರೆ.

ಹೊಸ ಗೋಡೆಗೆ ಅವಕಾಶ ನೀಡಬೇಡಿ. ಯುರೋಪ್‌ನಲ್ಲಿ ಎದ್ದಿರುವ ರಷ್ಯಾದ ಹೊಸ ಗೋಡೆಯನ್ನು ಉರುಳಿಸಲು ಸಹಾಯ ಮಾಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್‌ಸ್ಕಿ, ಜರ್ಮನಿ ಮುಂದೆ ಗೋಗರೆದಿದ್ದಾರೆ.

ADVERTISEMENT

‘ಇದು ಬರ್ಲಿನ್‌ನ ಗೋಡೆಯಲ್ಲ. ಸ್ವಾತಂತ್ರ್ಯ ಮತ್ತು ಗುಲಾಮಗಿರಿ ನಡುವೆ ಕೇಂದ್ರ ಯುರೋಪ್‌ನಲ್ಲಿ ಎದ್ದಿರುವ ರಷ್ಯಾ ಗೋಡೆ. ಪ್ರತಿ ಬಾರಿ ಉಕ್ರೇನ್ ಮೇಲೆ ಬಾಂಬ್ ಬಿದ್ದಾಗಲೂ ಈ ಗೋಡೆ ದೊಡ್ಡದಾಗಿ ಬೆಳೆಯುತ್ತಿದೆ. ಈ ಗೋಡೆಯನ್ನು ಉರುಳಿಸಿ’ ಎಂದು ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.