
'ಕಾನ್ಫಿಡೆಂಟ್ ಗ್ರೂಪ್' ಮುಖ್ಯಸ್ಥ ಸಿ.ಜೆ.ರಾಯ್ ಹಾಗೂ 'ಕೆಫೆ ಕಾಫಿ ಡೇ' ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ಹೆಗ್ಡೆ
ರಿಯಲ್ ಎಸ್ಟೇಟ್ ಕಂಪನಿಯಾದ 'ಕಾನ್ಫಿಡೆಂಟ್ ಗ್ರೂಪ್' ಮುಖ್ಯಸ್ಥ ಸಿ.ಜೆ.ರಾಯ್ (57) ಅವರು ಜನವರಿ 30ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಯ್ ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಕಾರಣವೇ? ವೈಯಕ್ತಿಕ ಸಮಸ್ಯೆಗಳು ಹಾಗೂ ವ್ಯವಹಾರಿಕ ಕಾರಣಗಳು ಇರಬಹುದೇ? ಎಂಬ ಅನುಮಾನಗಳು ಮೂಡಿವೆ. ಹೀಗಾಗಿ, ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
'ಕೆಫೆ ಕಾಫಿ ಡೇ' ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ಹೆಗ್ಡೆ ಅವರೂ 2019ರ ಜುಲೈ 19ರಂದು ಆತ್ಮಹತ್ಯೆಗೆ ಶರಣಾಗಿದ್ದರು.
ಸಾವಿರಾರು ಕೋಟಿ ಆಸ್ತಿ, ಸುತ್ತಲೂ ನೂರಾರು ಜನರಿದ್ದರೂ, ಬದುಕಿನ ಕೊನೇ ಕ್ಷಣದಲ್ಲಿ ಒಬ್ಬಂಟಿಯಾದ ಈ ಇಬ್ಬರು ಉದ್ಯಮಿಗಳ ಆತ್ಮಹತ್ಯೆ ಪ್ರಕರಣಗಳ ಕುರಿತು 'ಜೆ.ಪಿ. ನಾಯರ್' ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಲೇಖನ ಇಲ್ಲಿದೆ.
***
ಒಬ್ಬ ಕಾಫಿ ಘಮಲಿನಲ್ಲಿ ಜಗತ್ತನ್ನೇ ಗೆದ್ದಿದ್ದ 'ಕಾಫಿ ಕಿಂಗ್' ಸಿದ್ದಾರ್ಥ್. ಇನ್ನೊಬ್ಬ ಸಿಮೆಂಟ್-ಕಾಂಕ್ರೀಟ್ ಕಾಡಿನಲ್ಲಿ ಸಾಮ್ರಾಜ್ಯ ಕಟ್ಟಿದ್ದ 'ರಿಯಲ್ ಎಸ್ಟೇಟ್ ಸುಲ್ತಾನ' ಸಿಜೆ ರಾಯ್! ಇಬ್ಬರದ್ದೂ ಬೇರೆ ಬೇರೆ ದಾರಿ, ಆದರೆ ಸೇರಿದ್ದು ಮಾತ್ರ ಒಂದೇ ಸ್ಮಶಾನವನ್ನ!
ಕೇರಳದವರಾದರೂ ರಾಯ್ಗೆ ಕನ್ನಡವೆಂದರೆ ಪ್ರಾಣ. ಸುಮ್ಮನೆ ದುಡ್ಡು ಮಾಡಿ ಕೇರಳಕ್ಕೆ ಹೋಗಲಿಲ್ಲ ಅವರು. ಗಾಂಧಿನಗರದ ಕಷ್ಟದ ಕಾಲದಲ್ಲಿ ಹೆಗಲು ಕೊಟ್ಟು ನಿಂತರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಕ್ರೇಜಿ ಲೋಕ' ಸಿನಿಮಾ ನಿರ್ಮಾಣ ಮಾಡಿದ್ದು ಇದೇ ರಾಯ್. ರಮೇಶ್ ಅರವಿಂದ್ ಅವರ 'ಪ್ರೀತಿಯಿಂದ ರಮೇಶ್' ಮತ್ತು 'ರಂಗಪ್ಪ ಹೋಗ್ಬಿಟ್ನ' ಸಿನಿಮಾಗೂ ಬಂಡವಾಳ ಹಾಕಿದ್ದರು. ಕೋಮಲ್ ಅವರ 'ರಾಧಾನ ಗಂಡ' ಸಿನಿಮಾಕ್ಕೂ ಇವರೇ ಬೆನ್ನೆಲುಬು. ಹೀಗೆ ಬಿದ್ದವರನ್ನು ಮೇಲೆತ್ತುವ ಜಾಯಮಾನ ಇವರದ್ದು.
ನೀವು ಟಿವಿಯಲ್ಲಿ ಕಿಚ್ಚ ಸುದೀಪ್ ಅವರ 'ಬಿಗ್ ಬಾಸ್' ಕಾರ್ಯಕ್ರಮ ನೋಡುತ್ತೀರಾ? ಆ ಶೋನ ಆರಂಭದ ಸೀಸನ್ಗಳು ಅದ್ದೂರಿಯಾಗಿ ಮೂಡಿಬರಲು ಕಾರಣವಾಗಿದ್ದೂ ಇದೇ ರಾಯ್. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಇರಲಿ, ಅಥವಾ ಸ್ಟಾರ್ ಸುವರ್ಣದ ರಿಯಾಲಿಟಿ ಶೋಗಳಿರಲೀ. ನಿರ್ಮಾಪಕರು ಕಷ್ಟ ಅಂತ ಬಂದಾಗಲೆಲ್ಲ, ಚೆಕ್ ಬುಕ್ ತೆಗೆದು ಸಹಿ ಹಾಕುತ್ತಿದ್ದರು. 'ಕಲೆ ಬೆಳಿಬೇಕು ಬಾಸ್' ಅನ್ನೋದು ಅವರ ಪಾಲಿಸಿ ಆಗಿತ್ತು.
ರಿಯಾಲಿಟಿ ಶೋಗಳಲ್ಲಿ ಗೆದ್ದವರಿಗೆ ಬರೀ ಚೆಕ್ ಕೊಡೋದು, ಹೂವಿನ ಹಾರ ಹಾಕೋದು ಕಾಮನ್. ಆದರೆ, ರಾಯ್ ಅವರ ಸ್ಟೈಲೇ ಬೇರೆ. ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಪಾಲ್ಗೊಂಡಿದ್ದ ಒಬ್ಬ ಅದ್ಭುತ ಪ್ರತಿಭೆಯ ಬಡತನದ ಬಗ್ಗೆ ತಿಳಿದು, ನೇರವಾಗಿ ವೇದಿಕೆಗೆ ಬಂದ ರಾಯ್, 'ತಗೋಳಪ್ಪಾ, ನನ್ ಕಡೆಯಿಂದ ನಿನಗೊಂದು ಫ್ಲಾಟ್' ಅಂತ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಮನೆಯ ಕೀ ಎಸೆದಿದ್ದರು! ಕಿರುತೆರೆ ಇತಿಹಾಸದಲ್ಲೇ ಅಂತಹ ಕೆಲಸ ಯಾರೂ ಮಾಡಿರಲಿಲ್ಲ.
ಇಂದು ನಾವು ಯಾವುದೇ ಲೇಔಟ್ಗೆ ಹೋದರೂ ಕ್ರೀಟ್ ರಸ್ತೆ ನೋಡಬಹುದು. ಆದರೆ, ಬೆಂಗಳೂರಿನ ಪ್ರೈವೇಟ್ ಲೇಔಟ್ಗಳಲ್ಲಿ ಈ ಕಾನ್ಸೆಪ್ಟ್ ತಂದಿದ್ದೇ ಸಿಜೆ ರಾಯ್! 'ಟಾರ್ ರಸ್ತೆ ಮಳೆ ಬಂದ್ರೆ ಹಾಳಾಗುತ್ತೆ, ನನ್ನ ಗ್ರಾಹಕರಿಗೆ ಧೂಳು ಬರಬಾರದು' ಅಂತ ಸ್ವಂತ ಖರ್ಚಲ್ಲಿ ಕಾಂಕ್ರೀಟ್ ರಸ್ತೆ ಹಾಕಿ ಟ್ರೆಂಡ್ ಸೆಟ್ ಮಾಡಿದ್ದರು.
ಬೆಂಗಳೂರಿನ ಕಾರ್ಪೊರೇಟ್ ಜಗತ್ತನ್ನೇ ನಡುಗಿಸಿದ ಈ ಎರಡು ಸಾವುಗಳನ್ನ ಪಕ್ಕ ಪಕ್ಕ ಇಟ್ಟು ನೋಡಿದರೆ, ಮೈ ಜುಮ್ ಎನ್ನಿಸುವಂತಹ ಸತ್ಯಗಳು ಹೊರಬರುತ್ತವೆ. ಇವರ ಸಾವಿನ ಹಿಂದೆ ಇದ್ದದ್ದು ಬರೀ ಸಾಲವಾ? ಅಥವಾ ವ್ಯವಸ್ಥೆ ಎಂಬ ಎಂಬ ಕಬಂಧಬಾಹುವಾ?
ಸಿದ್ದಾರ್ಥ ಅವರು ನೇತ್ರಾವತಿ ನದಿಗೆ ಹಾರುವ ಮುನ್ನ ಬರೆದ ಪತ್ರ ನೆನಪಿದೆಯಾ? ಅದಲ್ಲಿ, 'ನಾನು ಸೋತು ಹೋದೆ' ಎಂದು ಬರೆಯಲಾಗಿತ್ತು. ಸಿದ್ದಾರ್ಥ ಅವರಾಗಲಿ, ರಾಯ್ ಅವರಾಗಲಿ, ಇಬ್ಬರಿಗೂ ಸಾಲ ಅನ್ನುವುದು ದೊಡ್ಡ ವಿಷಯವೇ ಆಗಿರಲಿಲ್ಲ. ಸಾವಿರ ಕೋಟಿ ಆಸ್ತಿ ಹೊಂದಿದ್ದದವರಿಗೆ ನೂರು ಕೋಟಿ ಸಾಲ ಏನ್ ಮಹಾ? ಆದರೆ, ಯಾವಾಗ ಈ 'ವ್ಯವಸ್ಥೆ' (System) ಕುತ್ತಿಗೆ ಪಟ್ಟಿ ಹಿಡಿಯೋಕೆ ಬರುತ್ತದೋ, ಯಾವಾಗ ಈ ಅದಾಯ ತೆರಿಗೆ (ಐಟಿ) ಮತ್ತು ಜಾರಿ ನಿರ್ದೇಶನಾಲಯದಂತಹ (ಇಡಿ) ಸಂಸ್ಥೆಗಳು ಬಾಗಿಲು ಬಡಿಯುವ ಮುನ್ಸೂಚನೆ ಸಿಗುತ್ತದೋ, ಆಗ ಹುಟ್ಟುತ್ತದೆ ನೋಡಿ ಭಯ! ಒಬ್ಬ ಉದ್ಯಮಿಗೆ 'ಜೈಲು' ಎನ್ನುವುದಕ್ಕಿಂತಲೂ, ಸಮಾಜದ ಮುಂದೆ ತಲೆ ತಗ್ಗಿಸುವುದಿದೆಯಲ್ಲಾ.. ಅದು ಸಾವಿಗಿಂತ ಯಾತನೆ ನೀಡುತ್ತದೆ.
ಒಮ್ಮೆ ಯೋಚಿಸಿ, ರೋಲ್ಸ್ ರಾಯ್ಸ್ ಕಾರಲ್ಲಿ ಓಡಾಡುತ್ತಿದ್ದ ರಾಯ್ಗೆ, ಅಥವಾ ಸಾವಿರಾರು ಎಕರೆ ಕಾಫಿ ತೋಟದ ಒಡೆಯ ಸಿದ್ದಾರ್ಥಗೆ, ನಾಳೆ ಪೊಲೀಸರು ಬಂದು ಕೈಗೆ ಕೋಳ ಹಾಕಿದರೆ? ಈ ಐಟಿ ಮತ್ತು ಇಡಿ ದಾಳಿಗಳು ವ್ಯಕ್ತಿ ಜೀವಂತವಿದ್ದಾಗಲೇ, ಆತನ ಅವನ ಮಾನ ಮರ್ಯಾದೆಯನ್ನ ಹಾರಾಜಿಗೆ ಇಡುತ್ತವೆ. ಸಿದ್ದಾರ್ಥ ಹೆದರಿದ್ದು ಅದೇ ಅವಮಾನಕ್ಕೆ. ಸಿಜೆ ರಾಯ್ ಕುಗ್ಗಿ ಹೋಗಿದ್ದೂ ಅದೇ ಒತ್ತಡಕ್ಕೆ. 'ನಾನು ಕಳ್ಳನಲ್ಲ, ಆದ್ರೆ ಈ ವ್ಯವಸ್ಥೆ ನನ್ನನ್ನು ಕಳ್ಳನನ್ನಾಗಿ ಮಾಡುತ್ತೆ' ಅನ್ನೋ ಹತಾಶೆ ಇಬ್ಬರಲ್ಲೂ ಇತ್ತು.
ಜಗತ್ತಿಗೆ ಇವರಿಬ್ಬರೂ ಹೀರೋಗಳು. ಆದರೆ, ಅವರಾದರೂ ತಮ್ಮ ಕಷ್ಟವನ್ನ ಯಾರ ಹತ್ತಿರ ಹೇಳಿಕೊಳ್ಳೋದು? ಹೆಂಡತಿ ಹತ್ತಿರವೇ? ಮಕ್ಕಳ ಬಳಿಯೇ? ಅಥವಾ ನಂಬಿ ಬಂದ ಹೂಡಿಕೆದಾರರ ಮುಂದೆಯೇ? ಯಾರ ಎದುರು ಹೇಳಿದರೂ, ಅದು ದೌರ್ಬಲ್ಯವಾಗಿಬಿಡುತ್ತದೆ.
ಅದೇ ಕಾರಣಕ್ಕೆ, ಸಿದ್ದಾರ್ಥ ಅವರು ನದಿಯ ಸೇತುವೆ ಮೇಲೆ ಏಕಾಂಗಿಯಾಗಿ ನಡೆದರು. ರಾಯ್ ತಮ್ಮ ಕೋಣೆಯಲ್ಲಿ ಏಕಾಂಗಿಯಾಗಿ ಪಿಸ್ತೂಲು ಎತ್ತಿಕೊಂಡರು. ಸುತ್ತಲೂ ಸಾವಿರಾರು ಜನರಿದ್ದರೂ, ಸಾಯುವಾಗ ಇವರಿಬ್ಬರೂ ಅಕ್ಷರಶಃ ಒಬ್ಬಂಟಿಯಾಗಿದ್ದರು.
ಅವರ ಬಳಿ 'ಕ್ಯಾಶ್' ಇತ್ತು, ಆದ್ರೆ 'ಪೀಸ್ ಆಫ್ ಮೈಂಡ್' ಇರಲಿಲ್ಲ. ಈ ಇಡಿ, ಐಟಿ, ಸಾಲ, ಬಡ್ಡಿ – ಇವೆಲ್ಲವೂ ಉದ್ಯಮಿಯನ್ನ ಕೊಲ್ಲುವ ಅಸ್ತ್ರಗಳು. ಸಿದ್ದಾರ್ಥ ನೀರಲ್ಲಿ ಮುಳುಗಿ ಹೋದರು. ರಾಯ್ ರಕ್ತದ ಮಡುವಿನಲ್ಲಿ ಮಲಗಿದ್ದರು. ಎಷ್ಟೇ ಎತ್ತರಕ್ಕೆ ಬೆಳೆದರೂ, ನೆಮ್ಮದಿ ಎನ್ನುವ ನೆಲದ ಸಂಪರ್ಕವನ್ನು ಬಿಡಬಾರದು. ಆ ಕೊಂಡಿ ಕಳಚಿದರೆ, ಬದುಕು ಅಂತ್ಯಗೊಳ್ಳುವುದು ಹೀಗೆಯೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.