ಗೌರವಯುತ ಬದುಕು ಮತ್ತು ಪರಿಸರವನ್ನು ಅಧ್ಯಾಪಕರಿಗೆ ಒದಗಿಸದೆ ಅಧ್ಯಾಪನದಿಂದ ಅತ್ಯುತ್ತಮ ಫಲ ನಿರೀಕ್ಷಿಸಲಾಗದು. ಗೌರವವೂ ಇಲ್ಲದೆ, ಸೂಕ್ತ ಸಂಭಾವನೆಯೂ ಇಲ್ಲದೆ ದುಡಿಯುತ್ತಿರುವ ಅತಿಥಿ ಅಧ್ಯಾಪಕರು, ಈ ಹೊತ್ತಿನ ಶಿಕ್ಷಣ ಕ್ಷೇತ್ರದ ಸ್ಥಿತಿ ಹಾಗೂ ಶಿಕ್ಷಕರ ಬಗೆಗಿನ ಸಮಾಜದ ಮನಃಸ್ಥಿತಿಯನ್ನು ಸಂಕೇತಿಸುವಂತೆ ಇದ್ದಾರೆ.
ಶಿಕ್ಷಣ ಎಲ್ಲ ಜ್ಞಾನ ಶಾಖೆಗಳ ತಾಯಿ. ತಾಯಿಯೇ ದುರ್ಬಲಳಾದರೆ ಯಾವುದೂ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೀಗೆ ಹೇಳಿದೆ: ‘ಅಧ್ಯಾಪಕರನ್ನು ಗೌರವದಿಂದ ನಡೆಸಿಕೊಳ್ಳದೆ ಇದ್ದರೆ ಅಥವಾ ಗೌರವಯುತ ವೇತನ ನೀಡದಿದ್ದರೆ ಅದು ದೇಶವು ಜ್ಞಾನಕ್ಕೆ ನೀಡುವ ಮೌಲ್ಯವನ್ನು ಕಡಿಮೆಗೊಳಿಸಿದಂತೆ ಆಗುತ್ತದೆ; ಬೌದ್ಧಿಕ ಬಂಡವಾಳ ನಿರ್ಮಿಸುವ ಜವಾಬ್ದಾರಿ ಹೊಂದಿರುವವರ ಪ್ರೇರಣೆಯನ್ನೂ ಹಾಳುಗೆಡವುತ್ತದೆ’.
ಅಧ್ಯಾಪಕರ ಗೌರವದ ವಿಚಾರವನ್ನು ಪ್ರಸ್ತಾಪಿಸಿದ ತಕ್ಷಣ, ‘ಅಧ್ಯಾಪಕರು ಸರಿಯಿಲ್ಲ. ಅಧ್ಯಾಪಕರ ಲೈಂಗಿಕ ದೌರ್ಜನ್ಯ’ ಇತ್ಯಾದಿ ಆರೋಪಗಳು ಪ್ರತಿಕ್ರಿಯೆಯಾಗಿ ಬರುತ್ತವೆ. ಆರೋಪಗಳು ಅಧ್ಯಾಪಕರಿಗಷ್ಟೇ ಸೀಮಿತ ಅಲ್ಲ; ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ಯಾವುದೇ ವೃತ್ತಿಗೆ ಸಂಬಂಧಿಸಿದವರ ಸಮಸ್ಯೆಯ ವಿಚಾರವನ್ನು ಪ್ರಸ್ತಾಪಿಸಿದ ತಕ್ಷಣ ವಿಚಾರದ ಬಗ್ಗೆ ಗಮನ ಕೊಡದೆ, ‘ಅವರು ಸರಿಯಿಲ್ಲ’ ಎನ್ನುವುದು ಸಮಾಜದ ಮಾನಸಿಕತೆಯಾಗಿದೆ. ‘ಸರಿ ಇಲ್ಲ’ ಎಂದು ಹೇಳಿಬಿಟ್ಟರೆ ಆಮೇಲೆ ಆ ಸಮಸ್ಯೆಗೆ ಸ್ಪಂದಿಸುವ ಅಗತ್ಯ ಇರುವುದಿಲ್ಲ. ಇದು ಮನೋ ವೈಜ್ಞಾನಿಕ ಪಲಾಯನ ವಾದ. ‘ಸರಿ ಇಲ್ಲ’ ಎಂದು ವಿಷಯವನ್ನು ನಿರಾಕರಿಸದೆ ಇದ್ದಲ್ಲಿ, ಆ ವಿಷಯಕ್ಕೆ ಸ್ಪಂದಿಸಿ ಯೋಚಿಸುವ ಅವಶ್ಯಕತೆಯಾದರೂ ಇರುತ್ತದೆ.
ಯಾವುದೇ ವೃತ್ತಿಯಲ್ಲಾದರೂ ‘ಸರಿ ಇಲ್ಲದವರು’ ಒಂದಷ್ಟು ಜನ ಸಾರ್ವಕಾಲಿಕವಾಗಿ ಇರುತ್ತಾರೆ. ‘ಸರಿ ಇಲ್ಲ’ ಎಂದು ಗೊತ್ತಾದ ಮೇಲೆ ಯಾಕೆ ಸುಮ್ಮನಿರುತ್ತಾರೆ, ಅಂಥವರನ್ನು ವಜಾಗೊಳಿಸಲು ಏನಾದರೂ ಚಾಲನೆ ಕೊಡಬೇಕಲ್ಲವೆ ಎನ್ನುವ ಪ್ರಶ್ನೆ ಇದ್ದೇ ಇದೆ. ಆ ಪ್ರಶ್ನೆಯನ್ನು ಬದಿಗಿರಿಸಿದಾಗಲೂ ‘ಸರಿ ಇಲ್ಲ’ದವರನ್ನು ಆಧರಿಸಿದ ಚಿಂತನೆಯನ್ನು ಸರಿ ಇರುವ ಎಲ್ಲರಿಗೂ ಅನ್ವಯಿಸುವುದು ವೈಯಕ್ತಿಕವಾಗಿ ಆತ್ಮವಂಚನೆಯೂ, ಸಾರ್ವತ್ರಿಕವಾಗಿ ಸರಿ ಇರುವವರ ಕುರಿತ ತಿರಸ್ಕಾರವೂ ಆಗಿರುತ್ತದೆ.
ಕ್ಷಣಿಕ ಪ್ರಕ್ರಿಯೆ ಚೆನ್ನಾಗಿ ನಡೆಯಬೇಕಾದರೆ ಅಧ್ಯಾಪಕರು ಗೌರವಯುತವಾದ ಸ್ಥಿತಿಯಲ್ಲಿ ಇರಬೇಕು ಎನ್ನುವುದು ಸಾಮಾನ್ಯ ಜ್ಞಾನಕ್ಕೆ ಅರ್ಥವಾಗುವ ವಿಷಯ. ಗೌರವಯುತವಾದ ಸ್ಥಿತಿ ಎಂದರೆ ಅಧ್ಯಾಪಕರ ಮಾತಿಗೆ ಗೌರವ ಕೊಡುವುದು ಎಂಬ ಸಂಕುಚಿತ ಅರ್ಥವಲ್ಲ. ಕುಟುಂಬವನ್ನು ತೃಪ್ತಿಕರವಾಗಿ ನಿರ್ವಹಿಸಲು ಬೇಕಾದಷ್ಟು ಆದಾಯ, ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಬೇಕಾದ ಔದ್ಯೋಗಿಕ ಪರಿಸರ ದೊರೆತಾಗ ಅದು ಗೌರವಯುತ ಸ್ಥಿತಿಯಾಗುತ್ತದೆ. ಆದರೆ, ಒಟ್ಟಂದದಲ್ಲಿ ನಮ್ಮಲ್ಲಿ ಅಧ್ಯಾಪಕರ ಸ್ಥಿತಿಗತಿಗಳು ಹೇಗಿವೆ?
ಸರ್ಕಾರದ ಅಧೀನದಲ್ಲಿರುವ ಶಾಲಾ–ಕಾಲೇಜುಗಳಲ್ಲಿ ಕಾಯಂ ಸಿಬ್ಬಂದಿಯಾಗಿರುವ ಅಧ್ಯಾಪಕರಿಗೆ ಗೌರವಯುತ ವೇತನವೇ ಸಿಗುತ್ತಿದೆ. ಆದರೆ, ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಕಾಯಂ ಸಿಬ್ಬಂದಿಯಾಗಿರುವ ಅಧ್ಯಾಪಕರ ಸಂಖ್ಯೆಗಿಂತ, ಸರ್ಕಾರಿ ಶಾಲಾ–ಕಾಲೇಜುಗಳಲ್ಲೆ ಅತಿಥಿ ಅಧ್ಯಾಪಕರು, ಹೊರಗುತ್ತಿಗೆ ಅಧ್ಯಾಪಕ ರಾಗಿರುವವರು ಮತ್ತು ಖಾಸಗಿ ಶಾಲಾ–ಕಾಲೇಜು ಗಳಲ್ಲಿರುವ ಅಧ್ಯಾಪಕರ ಒಟ್ಟು ಸಂಖ್ಯೆ ಜಾಸ್ತಿ ಇದೆ. ಸರ್ಕಾರಿ ಸಂಸ್ಥೆಗಳು ಮುಚ್ಚುತ್ತಾ ಹೋದ ಹಾಗೆ, ಖಾಸಗಿ ಸಂಸ್ಥೆಗಳ ಪಾಲುದಾರಿಕೆ ಇನ್ನಷ್ಟು ಜಾಸ್ತಿಯಾಗಲಿದೆ. ಶಿಕ್ಷಣ ವ್ಯವಸ್ಥೆಯ ಬೃಹತ್ ಸಂಪನ್ಮೂಲವಾಗಿರುವ ಕಾಯಂ ಅಲ್ಲದ ಅಧ್ಯಾಪಕರ ವಿಷಯಗಳು ಸಾರ್ವಜನಿಕ ಮಹತ್ವವನ್ನು ಪಡೆದ ವಿಷಯಗಳೇ ಆಗಿವೆ ಎನ್ನುವುದನ್ನು ಒಪ್ಪಿಕೊಳ್ಳಲು ಮೊದಲು ಸಾಧ್ಯವಾಗಬೇಕು. ಕಾಯಂ ಅಲ್ಲದ ಸಿಬ್ಬಂದಿಯ ಸ್ಥಿತಿಗತಿಗಳ ಬಗ್ಗೆ ವ್ಯಾಪಕ ಅಧ್ಯಯನವೇನೂ ನಡೆದಿಲ್ಲ. ಈ ಅಧ್ಯಯನ ಇವತ್ತಿನ ತುರ್ತು ಅಗತ್ಯ.
ಕಾಯಂ ಅಲ್ಲದ ಸಿಬ್ಬಂದಿ ಸದಾ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿರುತ್ತಾರೆ. ಉದ್ಯೋಗ ಕಳೆದುಕೊಳ್ಳಲು ಅವರ ಅದಕ್ಷತೆ ಅಥವಾ ದುರ್ನಡತೆಗಳೇನೂ ಕಾರಣವಾಗಬೇಕಾಗಿಲ್ಲ. ಖಾಲಿ ಇರುವ ಹುದ್ದೆಯ ಸ್ಥಳಕ್ಕೆ ಒಬ್ಬ ಕಾಯಂ ಸಿಬ್ಬಂದಿ ವರ್ಗಾವಣೆಯಾಗಿ ಬಂದರೆ ಸಾಕು, ಅವರು ಎಂಥ ದಕ್ಷ ಅಧ್ಯಾಪಕರೇ ಆಗಿದ್ದರೂ ಉದ್ಯೋಗ ಕಳೆದುಕೊಳ್ಳುತ್ತಾರೆ. ಎರಡನೆಯದಾಗಿ, ಕಾಯಂ ಸಿಬ್ಬಂದಿ ಮತ್ತು ಕಾಯಂ ಅಲ್ಲದ ಸಿಬ್ಬಂದಿ ಒಟ್ಟೊಟ್ಟಿಗೇ ಕೆಲಸ ಮಾಡುವಾಗ ಅತೀ ಕಡಿಮೆ ವೇತನ ಪಡೆಯುವವರಿಗೆ ಹೆಚ್ಚು ಕೆಲಸದ ಹೊರೆಯನ್ನು ಕೊಡಲಾಗುತ್ತದೆ. ಏಕೆಂದರೆ ಅವರು ಕಾಯಂ ಅಲ್ಲ! ಹೇಳಿದ್ದನ್ನು ಮಾಡದಿದ್ದರೆ ಅವರನ್ನು ಕೆಲಸದಿಂದ ತೆಗೆಯಬಹುದು. ಇದು ಅಧ್ಯಾಪಕರನ್ನು ಗೌರವಯುತವಾಗಿ ನಡೆಸಿಕೊಳ್ಳುವ ವಿಧಾನವಲ್ಲ. ಕಾಯಂ ಸಿಬ್ಬಂದಿ ಮತ್ತು ಕಾಯಂ ಅಲ್ಲದ ಸಿಬ್ಬಂದಿ ಎನ್ನುವುದು ಅವರವರ ಆಡಳಿತಾತ್ಮಕ ಸ್ಥಿತಿಯನ್ನಷ್ಟೇ ಸೂಚಿಸುತ್ತದೆಯೇ ಹೊರತು ಅವರ ಸ್ಥಾನಮಾನದ ವ್ಯತ್ಯಾಸವನ್ನಲ್ಲ. ಏಕೆಂದರೆ ವೃತ್ತಿಯನ್ನು ಇಬ್ಬರೂ ಸಮಾನವಾಗಿಯೇ ನಿರ್ವಹಿಸಬೇಕು. ಸಮಾನ ವೃತ್ತಿಗೆ ಸಮಾನ ವೇತನವಿಲ್ಲ, ಸಮಾನ ಗೌರವವೂ ಇಲ್ಲ ಎನ್ನುವುದು ‘ಮೌಲ್ಯ’ಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಕಾಣಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಅನಪೇಕ್ಷಣೀಯ ಸ್ಥಿತಿಯಾಗಿದೆ.
ಕೆಲವು ಖಾಸಗಿ ಶಾಲಾ–ಕಾಲೇಜುಗಳು ಅಧ್ಯಾಪಕರಿಗೆ ಒಳ್ಳೆಯ ವೇತನ ಕೊಡುತ್ತಿವೆ. ಕೆಲವೆಡೆಗಳಲ್ಲಿ ಆಯ್ದ ಕೆಲವು ಪಠ್ಯಗಳ ಬೋಧಕರಿಗೆ ಸರ್ಕಾರ ಕೊಡುವುದಕ್ಕಿಂತಲೂ ಹೆಚ್ಚಿನ ವೇತನ ಕೊಡುತ್ತಾರೆ. ಆದರೆ, ಇಂಥ ಖಾಸಗಿ ಸಂಸ್ಥೆಗಳು ಅತೀ ಕಡಿಮೆ. ಇನ್ನೂ ಕೆಲವು ಆಡಳಿತ ಮಂಡಳಿಗಳ ವಿಷಯಕ್ಕೆ ಬಂದರೆ, ಆಡಳಿತ ಮಂಡಳಿಯೇ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಾ ಶಾಲೆಗಳನ್ನು ನಿಭಾಯಿಸುತ್ತಿರುತ್ತವೆ. ಅಧ್ಯಾಪಕರಿಗೆ ಗೌರವಯುತವಾದ ವೇತನ ಕೊಡಲು ಅವುಗಳಿಗೇ ಸಾಧ್ಯವಾಗುವುದಿಲ್ಲ. ಆದರೆ, ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚಿನ ಸಂಸ್ಥೆಗಳು ಸಮಾರಂಭ, ಕಟ್ಟಡಗಳಿಗೆಲ್ಲ ಖರ್ಚು ಮಾಡುತ್ತವೆ. ಅಧ್ಯಾಪಕರಿಗೆ ವೇತನ ಕೊಡುವ ವಿಷಯಕ್ಕೆ ಬಂದಾಗ ಜಿಪುಣತನ ತೋರಿಸುತ್ತವೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಅಧ್ಯಾಪಕರಿಗೆ ತೃಪ್ತಿಕರವಾಗಿ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುವ ಮಟ್ಟಿನ ಸಾಮಾನ್ಯ ವೇತನ ಮಾನದಂಡವನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಕನಿಷ್ಠ ವೇತನದ ಮಾನದಂಡ ಇದ್ದರೆ ಸಾಲುವುದಿಲ್ಲ. ಅದು ಅನುಷ್ಠಾನಕ್ಕೆ ಬರಬೇಕಾದ್ದು ಮುಖ್ಯ. ಅಧ್ಯಾಪಕರದ್ದು ವೃತ್ತಿ ಆಗಿರುವುದರಿಂದ ಕಾರ್ಮಿಕ ಕಾಯ್ದೆ ಅನ್ವಯವಾಗುವುದಿಲ್ಲ. ಆದ್ದರಿಂದ ಕಾರ್ಮಿಕ ಕಾಯ್ದೆಯ ಅನುಸಾರ ವೇತನ ಕೊಡದೆ ಇರಲು ಅವಕಾಶವಿದೆ ಎಂಬ ವಿಚಿತ್ರ ತರ್ಕ ಇರುತ್ತದೆ. ಅಧ್ಯಾಪಕರಿಗೆ ಕಾರ್ಮಿಕ ಕಾಯ್ದೆ ಅನ್ವಯ ಆಗದೆ ಇರುವುದು ಸರಿ. ಆದರೆ, ಕಾರ್ಮಿಕರಿಗೆ ಅಂಗಿ, ಪ್ಯಾಂಟು, ಸೀರೆ, ರವಿಕೆ ಹೊಲಿದು ಕೊಡಲು ದರ್ಜಿ ತೆಗೆದುಕೊಳ್ಳುವ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆಯೇ? ಅವರಿಗೆ ಕುಟುಂಬ ನಿರ್ವಹಣೆಗೆ ತಕ್ಕಷ್ಟು ವೇತನ ಕೊಡಬೇಕು ಎನ್ನುವುದು ಸಾಮಾನ್ಯ ಜ್ಞಾನ.
ಖಾಸಗಿ ಶಾಲಾ–ಕಾಲೇಜುಗಳಿಗೆ ಅವುಗಳದೇ ಸಂಘಟನೆಗಳಿವೆ. ಆಡಳಿತ ಮಂಡಳಿಗಳ ಸಂಘಟನೆ ಸಾಮೂಹಿಕವಾಗಿ ಅಧ್ಯಾಪಕರಿಗೆ ಗೌರವಾನ್ವಿತ ವೇತನವನ್ನು ನಿರ್ಧರಿಸಿ ಅನುಷ್ಠಾನಗೊಳಿಸಬೇಕು. ಇದೇ ಕೆಲಸವನ್ನು ಸರ್ಕಾರ ಅತಿಥಿ ಅಧ್ಯಾಪಕರು, ಹೊರಗುತ್ತಿಗೆ ಅಧ್ಯಾಪಕರ ವಿಚಾರದಲ್ಲಿ ಮಾಡಬೇಕಾಗಿದೆ. ಖಾಸಗಿ ಆಡಳಿತ ಮಂಡಳಿಗಳೇ ಆರ್ಥಿಕವಾಗಿ ದುರ್ಬಲವಾಗಿದ್ದಾಗ ಅಂತಹ ಶಾಲೆಗಳನ್ನು ಖಾಸಗಿ ಆಡಳಿತ ಮಂಡಳಿಗಳ ಒಕ್ಕೂಟ ತನ್ನ ಮಧ್ಯಪ್ರವೇಶದ ಮೂಲಕ ನಿಭಾಯಿಸಲು ಸಾಧ್ಯವಾಗಬೇಕು. ಅಧ್ಯಾಪಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು. ಅತಿಥಿ ಅಧ್ಯಾಪಕರನ್ನು, ಹೊರಗುತ್ತಿಗೆ ಅಧ್ಯಾಪಕರನ್ನು, ಖಾಸಗಿ ಸಂಸ್ಥೆಗಳಲ್ಲಿನ ಅಧ್ಯಾಪಕರನ್ನು ಸೂಕ್ತ ಕಾರಣವಿಲ್ಲದೆ ತೆಗೆಯುವ ಪದ್ಧತಿಯನ್ನು ನಿಲ್ಲಿಸಲು ಸೂಕ್ತ ಕಾನೂನು ರಚನೆ ಆಗಬೇಕಾಗಿದೆ.
ಅಧ್ಯಾಪಕರ ಗೌರವದ ಎರಡನೆಯ ಭಾಗದಲ್ಲಿ ಔದ್ಯೋಗಿಕ ಪರಿಸರ ಗೌರವಾನ್ವಿತವಾಗಿರುವ ಹಾಗೆ ನೋಡಿಕೊಳ್ಳುವುದು ಮುಖ್ಯವಾಗಿದೆ. ವಕೀಲರು ಮತ್ತು ವೈದ್ಯರ ಹಾಗೆ ಅಧ್ಯಾಪಕರದ್ದೂ ವೃತ್ತಿ ಎಂದ ಮೇಲೆ ಅಲ್ಲಿ ವೃತ್ತಿ ಪರಿಣತಿ ಇರುತ್ತದೆ. ಅಂದರೆ, ವಿದ್ಯಾರ್ಥಿಗೆ ಯಾವ ರೀತಿ ಬೋಧಿಸಬೇಕು, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೇಗೆ ರಚಿಸಬೇಕು, ಎಂಬಿತ್ಯಾದಿ ವಿಷಯಗಳನ್ನು ಸಂಬಂಧಪಟ್ಟ ಅಧ್ಯಾಪಕರೇ ನಿರ್ಧರಿಸಲು ಅವರಿಗೆ ಸ್ವಾತಂತ್ರ್ಯವಿರಬೇಕು. ಸರ್ಕಾರಿ ಶಾಲೆಗಳಿಗಾದರೆ, ಎಡೆಬಿಡದೆ ಅಧ್ಯಾಪಕರಿಗೆ ಪ್ರತಿಯೊಂದನ್ನೂ ಹೀಗೇ ಮಾಡಬೇಕು ಎಂದು ಆದೇಶ ಹೊರಡಿಸುತ್ತಾ ಇರುವುದು, ಖಾಸಗಿ ಶಾಲೆಗಳಾದರೆ ವಿದ್ಯಾರ್ಥಿಗಳ ನೋಟ್ಬುಕ್ಗಳನ್ನು ಕೂಡ ಹೀಗೆಯೇ ಪರಿಶೀಲಿಸಬೇಕು ಎನ್ನುವಷ್ಟು ಅತಿಯಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಅಧ್ಯಾಪಕರ ಸ್ವಾತಂತ್ರ್ಯವನ್ನು ಆಡಳಿತ ಮಂಡಳಿಗಳು ತೊಡೆದು ಹಾಕುತ್ತಿರುವುದು ಕಾಣಿಸುತ್ತಿದೆ. ಇದರಿಂದ ಅಧ್ಯಾಪಕರ ಔದ್ಯೋಗಿಕ ಪರಿಸರವೇ ಅಗೌರವಯುತ ಪರಿಸರವಾಗಿ ಮಾರ್ಪಡುತ್ತದೆ. ಸರ್ಕಾರದ್ದಿರಲಿ, ಖಾಸಗಿ ಇರಲಿ, ಶೈಕ್ಷಣಿಕ ಆಡಳಿತವು ಅಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರ್ತಿಸಬೇಕೇ ಹೊರತು ಜೀತಗಾರರ ಹಾಗೆ ನಡೆಸಿಕೊಳ್ಳಬಾರದು.
ಸೆಪ್ಟೆಂಬರ್ ಐದರ ಅಧ್ಯಾಪಕರ ದಿನಾಚರಣೆ ಯನ್ನು ಹೆಚ್ಚು ವ್ಯಾಪಕಗೊಳಿಸುವುದರಿಂದ ಅಥವಾ ಇನ್ನಷ್ಟು ಭವ್ಯವಾಗಿಸುವುದರಿಂದ ಇದೆಲ್ಲ ಸಾಧ್ಯವಾಗುವುದಿಲ್ಲ. ಶಿಕ್ಷಣ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಸಂವೇದನಾಶೀಲವಾಗಿ ಯೋಚಿಸುವ ಸಾಮರ್ಥ್ಯದಿಂದ ಸಾಧ್ಯವಾಗುವ ಬದಲಾವಣೆಯಿದು. ಗೋಚರ ಅದ್ದೂರಿಯ ಜಾಗಕ್ಕೆ ಅಗೋಚರ ವಿವೇಕದ ಪ್ರವೇಶ ಆಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.