
‘ಜಗಳ ಆಡಬೇಡಿ, ಫ್ರೆಂಡ್ಸ್ ಆಗಿರಿ ಎಂದು ಮಕ್ಕಳಿಗೆ ಬುದ್ಧಿ ಹೇಳಬಹುದು. ಯುದ್ಧ ಮಾಡಬೇಡಿ, ಅನ್ಯೋನ್ಯವಾಗಿರಿ ಎಂದು ಆ ದೇಶಗಳವರಿಗೆ ಹೇಳಲಾಗುವುದಿಲ್ಲ...’ ಎಂದು ನ್ಯೂಸ್ ಪೇಪರ್ ಓದುತ್ತಿದ್ದ ಸುಮಿ ನಿಟ್ಟುಸಿರುಬಿಟ್ಟಳು.
‘ಯುದ್ಧೋನ್ಮಾದದಲ್ಲಿ ಇರುವವರು ಬುದ್ಧಿಮಾತು ಕೇಳುವುದಿಲ್ಲ. ಶತ್ರು ದಮನ, ಸಿಟ್ಟು ಶಮನವಷ್ಟೇ ಅವರ ಗುರಿ’ ಎಂದ ಶಂಕ್ರಿ.
‘ಯುದ್ಧವೆಂಬುದು ಪಟಾಕಿ ಹಚ್ಚುವ ದೀಪಾವಳಿಯಂತಾಗಿಬಿಟ್ಟಿದೆ. ಬಣ್ಣ ಎರಚಾಡುವ ಹೋಳಿ ಹಬ್ಬದಂತೆ ರಕ್ತದೋಕುಳಿ ನಡೆಸುವ ಆಚರಣೆಯಂತಾಗಿಬಿಟ್ಟಿದೆ!’
‘ರಾಜ ಮಹಾರಾಜರ ಕಾಲದಲ್ಲಿ ರಣರಂಗದಲ್ಲಿ ಹೋರಾಡಿ ಶತ್ರುಗಳನ್ನು ಕೊಲ್ಲುತ್ತಿದ್ದರು. ಈ ವೈಜ್ಞಾನಿಕ ಕಾಲದಲ್ಲಿ ತಾವಿರುವ ಕಡೆಯಿಂದಲೇ ಕ್ಷಿಪಣಿ ಹಾರಿಸಿ ಶತ್ರು ದೇಶ ನಾಶ ಮಾಡುವಷ್ಟು ಯುದ್ಧ ಸರಳವಾಗಿಬಿಟ್ಟಿದೆ’.
‘ಎಲ್ಲರನ್ನೂ ಅಡಿಯಾಳು ಮಾಡಿಕೊಂಡು ತಾವೇ ಭೂಮಂಡಲದ ಅಧಿಪತಿಯಾಗಬೇಕು ಎನ್ನುವ ಸಾಮ್ರಾಜ್ಯಶಾಹಿ ಧೋರಣೆ ಇದೇ ಮೊದಲಲ್ಲ. ಯುದ್ಧದ ಇತಿಹಾಸ ಪುಟಗಳು ರಕ್ತಸಿಕ್ತವಾಗಿವೆ. ಆಗಿನಿಂದ ನಡೆದ ಯುದ್ಧಗಳಲ್ಲಿ ಹರಿದ ರಕ್ತವು ಉಳಿದಿದ್ದರೆ ಈ ವೇಳೆಗೆ ಸರ್ವಋತು ರಕ್ತನದಿಯಾಗಿ ಹರಿಯುತ್ತಿತ್ತು. ಯುದ್ಧಗಳ ರಕ್ತವನ್ನೂ ನೋವನ್ನೂ ಭೂಮಿ ನುಂಗಿದೆ!’
‘ಪ್ರಾಣಿ–ಪಕ್ಷಿಗಳು ಹಣ್ಣು ತಿಂದು ಬೀಜ ಎಸೆದು ಗಿಡ ಮರ ಬೆಳೆಸಿ ಹುಟ್ಟಿದ ಭೂಮಿಯ ಋಣ ತೀರಿಸುತ್ತವೆ. ಭೂ ಒಡೆಯನಾಗಬೇಕೆಂದು ಹಾತೊರೆಯುವ ಮನುಷ್ಯ ಭೂಮಿಗೆ ಕೊಡುವ ಕೊಡುಗೆ ಅಷ್ಟಕ್ಕಷ್ಟೇ’.
‘ಎಲ್ಲವನ್ನೂ ಭಸ್ಮ ಮಾಡುವ ಭಸ್ಮಾಸುರ ಮನಃಸ್ಥಿತಿಯ ಯುದ್ಧೋತ್ಪಾದಕರಿಗೆ ಇಂತಹ ಮಾತು ರುಚಿಸುವುದಿಲ್ಲ’.
‘ತೊಡೆ ತಟ್ಟಿದವರು, ಮೀಸೆ ತಿರುವಿ ಮೆರೆದ ಪರಾಕ್ರಮಿಗಳು ಮಣ್ಣಲ್ಲಿ ಮಣ್ಣಾಗಿಹೋದರು. ಎಷ್ಟೇ ನಾಶ ಮಾಡಿದರೂ ಭೂಮಿ ಮರುಹುಟ್ಟು ಪಡೆಯುತ್ತದೆ. ಯುದ್ಧಗಳಿಗೆ ಭೂಮಿ ತಲೆಕೆಡಿಸಿಕೊಳ್ಳುವುದಿಲ್ಲ... ಎಲ್ಲವನ್ನೂ ಹೊತ್ತು ತಿರುಗುವ ಭೂಮಿಗೆ ಯಾವತ್ತೂ ತಲೆ ತಿರುಗಿಲ್ಲ, ತಲೆ ತಿರುಗಿ ಮೆರೆದು ಹೋದವರು ಮಾತ್ರ ಭೂಮಿಗೆ ಹಿಂತಿರುಗಿಲ್ಲ’ ಎಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.