ADVERTISEMENT

ಚುರುಮುರಿ: ಹೋಗದಿರಿ...

ಲಿಂಗರಾಜು ಡಿ.ಎಸ್
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
   

ಹಾಸನಾಂಬೆ ಗುಡಿ ಬಾಗಿಲು ಹಾಕಿದ ಮಾರನೇಗೆ ಹೋಗಿ ಗುಡಿ ಅಂಗಳದೇಲಿ ಕುಂತುದ್ದೆ. ಗುಡಿ ಒಳಗಿಂದ ದೊಡ್ಡ ಕುಂಕುಮ ಹಚ್ಚಿಕ್ಯಂದು ದೇವತೆಗಳಂಗಿದ್ದ ಏಳು ಜನ ಹೆಣ್ಮಕ್ಕಳು, ಇಬ್ಬರು ಗಣುಸ್ರು ತೇಲಿಕ್ಯಂದು ಬಂದಂಗೆ ಆಚೆಗೆ ಕಡೆದ್ರು. ಅಯ್ಯೋ ನನ್ನಪ್ಪನೇ ಏನಿದು ಮಾಯಕ ಅಂತ ಬಾಯಮ್ಯಾಗೆ ಬೆರಳಿಟ್ಟೆ. ನನ್ನ ಮುಂದ್ಲಿಂದ ಅವರೆಲ್ಲಾ ಹೋಗುವಾಗ ‘ಅವ್ವೈ ಗುಡಿ ಒಳಗಿಂದ ಈಥರಕೆ ಬಂದ್ರಲ್ಲ ತಾಯಿ, ಯಾರು ನೀವು?’ ಅಂತಂದೆ.

‘ಲೇ ಯಾರ ಕಣ್ಣಿಗೂ ಕಾಣದೇ ಇರೋ ನಾವು ಇವನ ಕಣ್ಣಿಗೆ ಕಂಡುದ್ದೀವಲ್ಲ. ಲೋ ಮಗಾ, ನಾನು ಹಾಸನಾಂಬೆ. ಇವರು ಸಪ್ತ ಮಾತೃಕೆಯರು ಕನಪ್ಪಾ. ಇವರು ಸಿದ್ದೇಶ್ವರ, ಗಣೇಶ ದೇವರು’ ಅಂದರು.

‘ಅಡ್ಡಬಿದ್ದೆ ಕವ್ವಾ. ಜನ ನಿಮ್ಮನ್ನ ನೋಡಕ್ಕೆ ಅಂತ ತೆಂಕಲು, ಮೂಡ್ಲಿಂದ ಬಂದಿದ್ರು. ಅದೇಟೋ ಜನಕ್ಕೆ ನಿಮ್ಮ ದರ್ಸನವೇ ಆಗ್ನಿಲ್ಲವಂತೆ’ ಅಂದೆ.

ADVERTISEMENT

‘ಜನಕ್ಕೆ ದರ್ಸನ ಕೊಟ್ಟು ಅವರ ಆಸೆ ಈಡೇರಿಸಬೇಕು ದಿಟ. ಈ ರಾಜಕೀಯದೋವು ಅಧಿಕಾರದ ಆಸೆಗೆ ಜನಕ್ಕೇ ಅಲ್ಲ, ನಮಗೂ ಅಡ್ಡಗ್ಯಾನ ಮಾಡಿಬುಡ್ತವೆ ಕನೋ’ ಹಾಸನವ್ವ ಸಿಟ್ಟು ಮಾಡಿಕ್ಯತ್ತು.

‘ನಮ್ಮ ತಲೆ ಮ್ಯಾಲೇ ಕೈಇಟ್ಟು ಸುಳ್ಳನ್ನೇ ಸತ್ಯ ಅಂತ ಪ್ರಮಾಣ ಮಾಡ್ತವೆ ಕಯ್ಯಾ. ನಮ್ಮುನ್ನೂ ಬಾಳಗೆಡಿಸಿಬುಟ್ಟಾರು ಅಂತ ಗಾಬರಿಯಾಗಿ ಇಲ್ಲಿಂದ ಹೊಂಟೋಗಮು ಅಂತಿದ್ದೀವಿ’ ಅಂದ ಚಾಮುಂಡವ್ವನ ಮಾತು ಕೇಳಿ ನನಗೆ ಗಾಬರಿಯಾತು.

‘ಅವ್ವೈ, ಭಕ್ತರನ್ನ ನಿಮ್ಮ ಮಡಿಲಿಗೆ ಹಾಕ್ಕ್ಯಂದು ಇತ–ಪರ ನೋಡದೆಲೆ ಹೊಂಟೋದ್ರೆ ಅದು ನ್ಯಾಯವಾ ನಮ್ಮವ್ವ. ನಾವು ಕಷ್ಟ ಬಂದಾಗ ಯಾರತಕ್ಕೋಗನೆ?’ ಅಂತಂದೆ. ಹಾಸನವ್ವ ಉಳಿದೋರ ಜೊತೆ ಮಾತಾಡಿಕ್ಯಂದು ಬತ್ತಿನಿರು ಅಂತ ಹೋತು.

‘ದಿಟ ಕಲ ಮಗ. ಜನಕ್ಕೆ ಒಳ್ಳೇದಾಗಬಕು. ಇಲ್ಲೇ ಇರ್ತೀವಿ ಬುಡು’ ಅಂತಂದು ಎಲ್ಲಾರೂ ಗುಡಿ ಒಳಿಕ್ಕೋದರು. ನಾನು ನಿಸೂರಾದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.