ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಯ ಹೆಚ್ಚಿನ ಮಕ್ಕಳು ಕನ್ನಡ ವಿಷಯದಲ್ಲಿ ಫೇಲಾಗಿದ್ದರು. ಟೀಚರ್ಸ್ ಮೀಟಿಂಗ್ನಲ್ಲಿ ಕನ್ನಡ ಮೇಷ್ಟ್ರು ಅಪ್ಸೆಟ್ ಆಗಿದ್ದರು.
‘ಯಾಕ್ರೀ ಹೀಗಾಯ್ತು?’ ಹೆಡ್ ಮೇಷ್ಟ್ರು ಕೇಳಿದರು. ಕನ್ನಡ ಮೇಷ್ಟ್ರು ಉತ್ತರಿಸದೆ ನಿರಾಶೆಯ ನಿಟ್ಟುಸಿರುಬಿಟ್ಟರು.
‘ಇಂಗ್ಲಿಷ್, ಹಿಂದಿಯಲ್ಲಿ ಎಲ್ಲಾ ಮಕ್ಕಳು ಪಾಸಾಗಿದ್ದಾರೆ. ಕನ್ನಡ ಮಕ್ಕಳಿಗೆ ಮದರ್ ಟಂಗ್ಗಿಂತ ಅದರ್ ಟಂಗ್ ಮೋಹ ಜಾಸ್ತಿಯಾಯ್ತೆ? ಸವಿಗನ್ನಡ ‘ಹೆವಿಗನ್ನಡ’ ಆಯ್ತೆ?’ ಹೆಡ್ ಮೇಷ್ಟ್ರಿಗೆ ಚಿಂತೆಯಾಗಿತ್ತು.
‘ಪಾಠ ಹೇಳುವ ವಿಚಾರದಲ್ಲಿ ಕನ್ನಡ ಮೇಷ್ಟ್ರು ಫೇಲಾಗಿದ್ದಾರೆ’ ಇಂಗ್ಲಿಷ್ ಟೀಚರ್ ಕಿಚಾಯಿಸಿದರು.
‘ಸುಮ್ನೆ ಕೂತ್ಕೊಳ್ರೀ, ಇಂಗ್ಲಿಷ್ನಲ್ಲಿ ಇರೋದು 26 ಅಕ್ಷರ. ಇಂಗ್ಲಿಷಿನಲ್ಲಿ ಸ್ವರ, ವ್ಯಂಜನವಿಲ್ಲ, ಹ್ರಸ್ವ ಸ್ವರ, ದೀರ್ಘ ಸ್ವರ, ಒತ್ತಕ್ಷರ ಇಲ್ಲ, ಯಾವ ಅಕ್ಷರಕ್ಕೂ ತಲೆಕಟ್ಟು, ದೀರ್ಘ, ಕೊಂಬು, ಒಟ್ರುಸುಳಿ, ಏತ್ವ, ಏತ್ವಂದೀರ್ಘ, ಓತ್ವ, ಐತ್ವ ಇಲ್ಲ, ಸಂಧಿ, ಸಮಾಸ, ಛಂದಸ್ಸು ಇಲ್ಲ. ಎ ಫಾರ್ ಆ್ಯಪಲ್, ಪಿ ಫಾರ್ ಪೀಪಲ್ ಅನ್ನುವಷ್ಟು ಸರಳವಲ್ಲಾರೀ ಕನ್ನಡ...’ ಕನ್ನಡ ಮೇಷ್ಟ್ರು ಸಿಟ್ಟಾಗೇ ಹೇಳಿದರು.
‘ಏನೇ ಆಗಲಿ ಮಕ್ಕಳು ಕನ್ನಡದಲ್ಲಿ ಪಾಸಾಗಲೇಬೇಕು, ಇಲ್ಲಾಂದ್ರೆ ಶಾಲೆಯೇ ಫೇಲಾಗಿಬಿಡುತ್ತದೆ’ ಎಚ್ಚರಿಸಿದರು ಎಚ್ಚೆಂ.
‘ಕನ್ನಡ ಕಬ್ಬಿಣದ ಕಡಲೆ ಆಗಬಾರದು. ಕನ್ನಡ ಸಿಲೆಬಸ್ ಅನ್ನು ಸರಳಗೊಳಿಸಬೇಕು, ಕನ್ನಡಕ್ಕೆ ಕೃಪಾಂಕ ಕೊಟ್ಟು ಕನ್ನಡ ಮಕ್ಕಳನ್ನು ಕಾಪಾಡಬೇಕು ಅಂತ ಇಲಾಖೆಗೆ ಮನವಿ ಮಾಡೋಣ’ ಸೈನ್ಸ್ ಟೀಚರ್ ಸಲಹೆ.
‘ಮಕ್ಕಳ ಜೊತೆಗೆ ಟೀಚರ್ಗಳೂ ಕನ್ನಡ ಅಧ್ಯಯನ ಮಾಡಬೇಕು. ಸಮಾಜ ಮೇಷ್ಟ್ರು ‘ಸಾಮ್ರಾಜ್ಯ’ವನ್ನು ತಪ್ಪಾಗಿ ‘ಸಾಂಬ್ರಾಜ್ಯ’ ಎಂದು ಬರೆದಿದ್ರು, ಶಾಲೆಗೆ ವಿಸಿಟ್ ಬಂದ ಇಲಾಖೆ ಅಧಿಕಾರಿ ‘ಸಾಂಬ್ರಾಜ್ಯ’ಕ್ಕೆ ರೆಡ್ ಇಂಕ್ನಲ್ಲಿ ರೌಂಡ್ ಮಾರ್ಕ್ ಹಾಕಿದ್ರು’ ಎಂದು ಹೇಳಿ ಎಚ್ಚೆಂ ಸಭೆ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.