ADVERTISEMENT

ಸಂಗತ | ಅಭಿಮಾನದ ಹುಚ್ಚು; ಅನಾಹುತ ಹೆಚ್ಚು

ಅತಿರೇಕವು ಗೆಲುವಿನ ಸಂಭ್ರಮವನ್ನು ನುಂಗಿಹಾಕಿದೆ

ಐ.ಸೇಸುನಾಥನ್
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
   

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್) ಕ್ರಿಕೆಟ್‌ ಫೈನಲ್‌ನಲ್ಲಿ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣವು ಭಾರತೀಯ ಕ್ರಿಕೆಟ್ ಚರಿತ್ರೆಗೆ ಕಪ್ಪುಚುಕ್ಕೆಯಾಗಿದೆ. ದೇಶದಲ್ಲಿ ಈಗ ಸಿನಿಮಾ ತಾರೆಯರಿಗಿಂತ ಕ್ರಿಕೆಟ್ ಆಟಗಾರರಿಗೆ ಅಭಿಮಾನಿಗಳು ಹೆಚ್ಚು. ದೇಶ ಕಾಯುವ ಸೈನಿಕರು, ಜೀವ ರಕ್ಷಿಸುವ ವೈದ್ಯರು, ಅಕ್ಷರ ಕಲಿಸುವ ಶಿಕ್ಷಕರು, ಸಮಾಜ ಸೇವಕರಿಗಿಂತ ಕ್ರಿಕೆಟಿಗರಿಗೆ ಯುವಪೀಳಿಗೆಯು ಅಭಿಮಾನದ ಮಳೆ ಸುರಿಸುವುದು ವ್ಯವಸ್ಥೆಯ ವ್ಯಂಗ್ಯ.

ಆರ್‌ಸಿಬಿ ತಂಡ ಫೈನಲ್‌ ಗೆದ್ದ ರಾತ್ರಿಯೇ ಅಭಿಮಾನಿಗಳಿಂದ ಬೆಂಗಳೂರು ಮಾತ್ರವಲ್ಲದೆ ಹಳ್ಳಿ ಹಳ್ಳಿಯಲ್ಲೂ ಸಂಭ್ರಮಾಚರಣೆ ನಡೆಯಿತು. ರಾತ್ರಿ ಮಲಗಿದ್ದ ಜನರಿಗೆ ಪಟಾಕಿ ಶಬ್ದ ನಿದ್ದೆಗೆಡಿಸಿತು. ರಾತ್ರಿಯ ಪ್ರಶಾಂತ ವಾತಾವರಣಕ್ಕೆ ಶಬ್ದ ಮಾಲಿನ್ಯದ ಜೊತೆಗೆ ವಾಯುಮಾಲಿನ್ಯವೂ ಸೇರ್ಪಡೆಯಾಯಿತು.

ಮೈಸೂರಿನಲ್ಲಿ ನಾವು ವಾಸವಿರುವ ಬಡಾವಣೆಯಲ್ಲಿ ಯುವಕರು ಆರ್‌ಸಿಬಿ ಪರ ಜೈಕಾರ ಕೂಗುತ್ತಾ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ತಮ್ಮ ಜೊತೆಗೆ ಸೇರಿಕೊಂಡು ಸಂಭ್ರಮಿಸುವಂತೆ ಮಲಗಿದ್ದವರನ್ನೂ ಕೂಗಿ ಕರೆಯುತ್ತಿದ್ದರು. ರಾತ್ರಿ ಎರಡು ಗಂಟೆವರೆಗೂ ಇದು ಮುಂದುವರಿಯಿತು. ಬಳಿಕ ಪೊಲೀಸರು ಬಂದು ಧ್ವನಿವರ್ಧಕದಲ್ಲಿ ‘ಎಲ್ಲರನ್ನೂ ಎಳೆದುಕೊಂಡು ಹೋಗಿ ಒಳಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದ ಬಳಿಕ ಎಲ್ಲರೂ ಮನೆಯತ್ತ ಹೆಜ್ಜೆ ಹಾಕಿದರು.

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಭಿಮಾನಿಗಳ ಕುಣಿತಕ್ಕೆ ರೈಲಿನ ಬೋಗಿಗಳು ಅಲುಗಾಡುವ ಅನುಭವವಾಯಿತು ಎಂಬುದಾಗಿ ಸಹ ಪ್ರಯಾಣಿಕರು ಹೇಳಿದ್ದಾರೆ. ಕೆಲವರು ಅಂದು ರಾತ್ರಿ ಬಸ್‌‌ಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ‘ಆರ್‌ಸಿಬಿ... ಆರ್‌ಸಿಬಿ...’ ಎಂದು ಕೂಗಾಡಿದ್ದಾಗಿ ವರದಿಯಾಗಿದೆ. ದ್ವಿಚಕ್ರ ವಾಹನಗಳಲ್ಲಿ ಮೆರವಣಿಗೆ ಹೊರಟ ಕೆಲವು ಯುವಕರು ರಸ್ತೆಯಲ್ಲಿರುವ ಬ್ಯಾರಿಕೇಡ್‌ಗಳನ್ನು ಬೈಕ್ ಜೊತೆಗೆ ಎಳೆದೊಯ್ಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆರ್‌ಸಿಬಿ ಅಭಿಮಾನಿಗಳು ಬೇರೆ ತಂಡದ ಲಾಂಛನವಿರುವ ಅಭಿಮಾನಿಯೊಬ್ಬನ ಮೇಲಂಗಿಯನ್ನು ಬಲವಂತವಾಗಿ ಕಿತ್ತು ಹರಿದು ಹಾಕಿ, ಅದರ ಮೇಲೆ ವಾಹನಗಳನ್ನು ಚಲಾಯಿಸಿದ ಮತ್ತೊಂದು ದೃಶ್ಯವೂ ಹರಿದಾಡುತ್ತಿದೆ. ಚಿತ್ರದುರ್ಗದಲ್ಲಿ ವಿರಾಟ್‌ ಕೊಹ್ಲಿ ಪೋಸ್ಟರ್‌ಗೆ ಮೇಕೆಯೊಂದನ್ನು ಬಲಿ ನೀಡಿ ರಕ್ತಾಭಿಷೇಕ ಮಾಡಿದ ಅಭಿಮಾನಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈ ಮತ್ತು ಚೆನ್ನೈ ತಂಡ ತಲಾ ಐದು ಬಾರಿ ಗೆದ್ದಿದ್ದರೂ ಇಂತಹ ಹುಚ್ಚಾಟವು ಈ ಹಿಂದೆ ಎಂದೂ ನಡೆದಿರಲಿಲ್ಲ. ಅಭಿಮಾನಿಗಳ ಅತಿರೇಕದ ವರ್ತನೆಯು ಕಾಲ್ತುಳಿತಕ್ಕೆ ಕಾರಣವಾಗಿ ಗೆಲುವಿನ ಸಂಭ್ರಮವನ್ನು ನುಂಗಿಹಾಕಿದೆ. ಒಂದು ಕಾಲದಲ್ಲಿ ಕ್ರಿಕೆಟ್‌ಗೆ ‘ಮೂರ್ಖರ ಆಟ’ ಎಂಬ ಬಿರುದು ಇತ್ತು. ಈಗ ಕ್ರಿಕೆಟ್ ನೋಡದವರು, ಅದರ ಬಗ್ಗೆ ಮಾತನಾಡದವರು ಮೂರ್ಖರು ಎಂಬಂತಾಗಿದೆ.

ಎಷ್ಟೋ ಮನೆಗಳಲ್ಲಿ ಗಂಡ ಒಂದು ಕಡೆ, ಹೆಂಡತಿ ಒಂದು ಕಡೆ, ಮಕ್ಕಳು ಇನ್ನೊಂದು ಕಡೆ ಕುಳಿತು ಮೊಬೈಲ್‌ ಫೋನ್‌ನಲ್ಲಿ ಐಪಿಎಲ್ ಪಂದ್ಯಾವಳಿ ವೀಕ್ಷಿಸುವುದನ್ನು ಕಾಣಬಹುದಾಗಿದೆ. ಇದನ್ನು ಅಭಿಮಾನ ಎನ್ನಬೇಕೋ, ಹುಚ್ಚು ಎನ್ನಬೇಕೋ ತಿಳಿಯದು. ಕ್ರಿಕೆಟ್ ಅಭಿಮಾನಿಗಳಲ್ಲಿ ಬಹುತೇಕರು ಯುವಜನರಾಗಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಿದೆ. 

ತಂದೆ, ತಾಯಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೆಲವು ಯುವಕರು ಕ್ರಿಕೆಟ್ ವೀಕ್ಷಣೆ, ಬೆಟ್ಟಿಂಗ್ ಮತ್ತು ಸಂಭ್ರಮಾಚರಣೆಗೆ ಖರ್ಚು ಮಾಡುತ್ತಾ ಕಾಲ ದೂಡುತ್ತಾರೆ. ಕಳೆದ ವರ್ಷ ತನ್ನ ಮೂವರು ಪುತ್ರಿಯರ ಶಾಲಾ ಶುಲ್ಕ ಕಟ್ಟದೆ ₹64 ಸಾವಿರಕ್ಕೆ ಟಿಕೆಟ್ ಖರೀದಿಸಿ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣಕ್ಕೆ ಹೋಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದ ಬೇಜವಾಬ್ದಾರಿ ತಂದೆಯ ಬಗ್ಗೆ ವರದಿಯಾಗಿತ್ತು.

ಪ್ರಸ್ತುತ ದೇಶದಲ್ಲಿ ಕ್ರಿಕೆಟ್ ಬರೀ ಆಟವಾಗಿ ಉಳಿದಿಲ್ಲ; ಅದು ಒಂದು ಹೆಮ್ಮರವಾಗಿ ಬೆಳೆದಿದೆ. ಕ್ರಿಕೆಟ್ ಆಟವಾಡುವ ಇತರೆ ರಾಷ್ಟ್ರಗಳಿಗಿಂತ ನಮ್ಮಲ್ಲಿ ಈ ಕ್ರೀಡೆ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ.

‘ಹನ್ನೊಂದು ಜನ ಮೂರ್ಖರು ಆಟವಾಡುತ್ತಿದ್ದಾರೆ. ಅದನ್ನು ಹನ್ನೊಂದು ಸಾವಿರ ಮೂರ್ಖರು ನೋಡುತ್ತಿದ್ದಾರೆ’ ಎಂದು ಹೇಳಿದ ಐರಿಷ್‌ ನಾಟಕಕಾರ ಜಾರ್ಜ್ ಬರ್ನಾರ್ಡ್ ಶಾ ಇಂದು ಬದುಕಿದ್ದರೆ, ‘ಹನ್ನೊಂದು ಜನ ಮೂರ್ಖರು ಆಟವಾಡುತ್ತಿದ್ದಾರೆ; ಅದನ್ನು ಹಲವು ಕೋಟಿ ಮೂರ್ಖರು ನೋಡುತ್ತಿದ್ದಾರೆ’ ಎಂದು ಹೇಳುತ್ತಿದ್ದರು.  

‌ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಹೆಸರಿನಲ್ಲಿ ಬೆಟ್ಟಿಂಗ್‌ ದಂಧೆ ವಿಪರೀತಕ್ಕೆ ಹೋಗಿದೆ. ಪಂದ್ಯದಿಂದ ಪಂದ್ಯಕ್ಕೆ ಪ್ರಾಯೋಕತ್ವದ ಸಂಖ್ಯೆ ಹೆಚ್ಚುತ್ತಿದ್ದು, ಪ್ರಾಂಚೈಸಿಗಳ ಬೊಕ್ಕಸ ತುಂಬುತ್ತಿದೆ. ಪ್ರಾಂಚೈಸಿ ಪರ ಆಡುವ ಆಟಗಾರರು ಕೋಟ್ಯಧಿಪತಿಗಳಾಗುತ್ತಾರೆ. ಪಂದ್ಯಾವಳಿಗಳಿಗೆ ಪ್ರಾಯೋಜಕತ್ವ ಒದಗಿಸುವ ಕಂಪನಿಗಳಿಗೆ ಜಾಹೀರಾತು ಮೂಲಕ ಕೋಟಿಗಟ್ಟಲೆ ಲಾಭವಾಗುತ್ತದೆ. ನೋಡುವ ಪ್ರೇಕ್ಷಕರಿಗೆ ಹಣ, ಸಮಯ ವ್ಯರ್ಥವಾಗುತ್ತದೆ.  

ಕ್ರಿಕೆಟ್ ಆಟದ ವಿಜೃಂಭಣೆಯಿಂದಾಗಿ ಅನೇಕ ದೇಶೀಯ ಕ್ರೀಡೆಗಳು ಪ್ರೋತ್ಸಾಹವಿಲ್ಲದೆ ನೇಪಥ್ಯಕ್ಕೆ ಸರಿದಿವೆ. ವೀಕ್ಷಕರ ಕೊರತೆಯಿಂದ ಅಂತಹ ಆಟಗಳಿಗೆ ಪ್ರಾಯೋಜಕತ್ವವೂ ಲಭಿಸುವುದಿಲ್ಲ.

ಯುವಜನರು ಅಂಧಾಭಿಮಾನ ಬಿಡಬೇಕು. ಕ್ರಿಕೆಟ್‌ ಉನ್ಮಾದದಿಂದ ಹೊರಬರಬೇಕು. ವಿದ್ಯಾಭ್ಯಾಸ, ವ್ಯಕ್ತಿತ್ವ ವಿಕಸನ, ಹಣ ಸಂಪಾದನೆ ಕಡೆಗೆ ಗಮನಹರಿಸಬೇಕು. ಕ್ರಿಕೆಟ್ ವೀಕ್ಷಣೆಯು ಬಿಡುವಿನ ಕಾಲದ ಮನರಂಜನೆಯ ಅಂಶವಾಗಬೇಕಷ್ಟೇ. ಅದು ಊಟಕ್ಕೆ ಉಪ್ಪಿನಕಾಯಿಯಂತೆ ಇರಬೇಕು. ಉಪ್ಪಿನಕಾಯಿಯೇ ಊಟವಾಗಲಾರದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.