ADVERTISEMENT

ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ

ಪೊಲೀಸ್‌ ಇಲಾಖೆ ಶಿಸ್ತಿಗೆ ಹೆಸರುವಾಸಿ. ಆ ಶಿಸ್ತು ಮಾನವೀಯ ಸಂಬಂಧಗಳನ್ನು ನಿರ್ಲಕ್ಷಿಸಲಿಕ್ಕೆ ಕಾರಣ ಆಗಬಾರದು. ಅತಿಥಿಗಳನ್ನು ಕನಿಷ್ಠ ಗೌರವದಿಂದ ಗೌರವಿಸುವಷ್ಟು ಸೌಜನ್ಯ ಅಗತ್ಯ.

ಡಾ.ಲಕ್ಷ್ಮಣ ವಿ.ಎ.
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
_
_   

ಆ ಬೆಳಗು (ಅ. 15) ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣ ಒಂದು ವಿಶಿಷ್ಟ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಬಿಳಿ ಕಚ್ಚೆ ಧೋತರ ಮತ್ತು ಗಾಂಧಿ ಟೊಪ್ಪಿಗೆ ಧರಿಸಿದ ಅಪ್ಪಂದಿರು, ಇಳಕಲ್ ಸೀರೆ ತೊಟ್ಟ ಅಪ್ಪಟ ಉತ್ತರ ಕರ್ನಾಟಕದ ದಿರಿಸಿನಲ್ಲಿ ಅವ್ವಂದಿರು– ಅಕ್ಕಂದಿರು ದೂರದ ಕಲಬುರಗಿ, ವಿಜಯಪುರ, ಬೆಳಗಾವಿ, ರಾಯಚೂರು, ಚಾಮರಾಜನಗರ, ಕೊಳ್ಳೇಗಾಲ ಭಾಗಗಳಿಂದ ಬಂದು ಆ ದಿನ ತಮ್ಮ ಮಕ್ಕಳ ‘ನಿರ್ಗಮನ ಪಥಸಂಚಲನ’ವನ್ನು ಕಣ್ಣಾರೆ ಕಾಣುವ ತವಕದಲ್ಲಿದ್ದರು.

ಕಡೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಾಡಿನ ನಾನಾ ಭಾಗದ ಒಟ್ಟು 488 ಭಾವಿ ಪೊಲೀಸರಿಗೆ ಅಂದು ತರಬೇತಿಯ ಅಂತಿಮ ದಿನ. ಪ್ರಶಿಕ್ಷಣಾರ್ಥಿಗಳೆಲ್ಲ ಹತ್ತು ತಿಂಗಳ ಕಠಿಣ ತರಬೇತಿಯನ್ನು ಪೂರೈಸಿ, ಕೊನೆಯ ದಿನದ ಆಕರ್ಷಕ ಪಥಸಂಚಲನದ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸುವ ಕ್ಷಣ. ನಾನೂ ಕೂಡ ಪಥಸಂಚಲನಕ್ಕೆ ಹಾಜರಾಗಲು ಕುಟುಂಬದೊಂದಿಗೆ ಹೋಗಿದ್ದೆ. ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಯ ಕಡೆಯಿಂದ ಕನಿಷ್ಠ 10 ಜನರ ಲೆಕ್ಕ ಹಾಕಿದರೆ, ಅಂದಾಜು 5 ಸಾವಿರ ಜನಪ್ರವಾಹ ಆ ಚಿಕ್ಕ ಪಟ್ಟಣದಲ್ಲಿತ್ತು.

ನಗರದ ವಸತಿಗೃಹಗಳು ತುಂಬಿ ತುಳುಕುತ್ತಿದ್ದವು. ಕೆಲವು ಲಾಡ್ಜ್‌ಗಳಲ್ಲಿ ರೂಮುಗಳು ಖಾಲಿ ಇದ್ದರೂ, ಬಡವರ ಕೈಗೆಟುಕದ ದುಬಾರಿ ಬೆಲೆ ಅವುಗಳದು. ಕಡೂರಿಗೆ ಬಂದ ಬಹುತೇಕರು ಹಿಂದುಳಿದ ಜಿಲ್ಲೆಯ ಕಡು ಬಡ ಕುಟುಂಬದವರು. ವಸತಿ ವ್ಯವಸ್ಥೆ ಮಾಡಿಕೊಳ್ಳಲು ಆಗದವರು ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಗುಂಪಾಗಿ ಕುಳಿತ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲೂ ಜಾಗ ಸಾಲದೆ ರಾತ್ರಿ ಮುಚ್ಚಿದ ಅಂಗಡಿ ಮುಗ್ಗಟ್ಟುಗಳ ಮುಂದೆ ತಮ್ಮ ಊರಿನಿಂದ ತಂದ ರೊಟ್ಟಿ ಬುತ್ತಿಯನ್ನು ಬಿಚ್ಚಿ ಊಟ ಮಾಡುತ್ತಿದ್ದರು. ಪುಟ್ಟ ಮಕ್ಕಳು ಅವರ ಮಡಿಲಿನಲ್ಲಿಯೇ ನಿದ್ದೆಗೆ ಜಾರಿದ್ದವು. ಕತ್ತಲೆ ಮರೆಯಲ್ಲೇ ಹಸುಗೂಸಿಗೆ ತಾಯಿಯೊಬ್ಬಳು ಮೊಲೆಯೂಡಿಸುತ್ತಿದ್ದಳು.

ADVERTISEMENT

ಕಡೂರು–ಶಿವಮೊಗ್ಗ ಹೆದ್ದಾರಿ ಬದಿಯ ಪೊಲೀಸ್ ತರಬೇತಿ ಕೇಂದ್ರಕ್ಕೆ ಈ ಪೋಷಕರೆಲ್ಲ ಬೆಳಿಗ್ಗೆಯೇ ಬಂದಿದ್ದರು. ಸಾರ್ವಜನಿಕ ಶೌಚಾಲಯಗಳಲ್ಲಿ ಸ್ನಾನ–ಶೌಚ ಮುಗಿಸಿ, ಗೂಡಂಗಡಿಗಳಲ್ಲಿ ಚಹಾ ಕುಡಿದು, ಹಬ್ಬವೆಂಬಂತೆ ಸಂಭ್ರಮಿಸುತ್ತ ನೆರೆದಿದ್ದರು. ಸರಿಯಾಗಿ ಎಂಟು ಗಂಟೆಗೆ ಶುರುವಾದ ನಿರ್ಗಮನ ಪಥಸಂಚಲನ ಅತಿ ಶಿಸ್ತುಬದ್ಧವಾಗಿ ನಡೆದು ಜನಮನ ಸೂರೆಗೊಂಡಿತು. ಹಿಂದಿನ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕವಾಯತು ಮೈದಾನದಲ್ಲಿ ತುಂಬಿಕೊಂಡಿದ್ದ ನೀರನ್ನು, ರಾತ್ರಿಯಿಡೀ ಎಚ್ಚರವಿದ್ದ ಪ್ರಶಿಕ್ಷಣಾರ್ಥಿಗಳೇ ತೆರವುಗೊಳಿಸಿದ್ದರು. ಆದರೂ, ಬೆಳಗಿನ ಕಾರ್ಯಕ್ರಮದಲ್ಲಿ ಕೀ ಕೊಟ್ಟ ಗೊಂಬೆಗಳ ಹಾಗೆ, ಸಾಲಿನ ಶಿಸ್ತು ಒಂದಿಂಚೂ ಕದಲದೇ ನಿಂತ ಯುವಕರ ಕೆಚ್ಚು ಮೆಚ್ಚುವಂತಹದ್ದಾಗಿತ್ತು.

ಮೂರೂವರೆ ಗಂಟೆಗಳ ಪಥಸಂಚಲನ ಕಣ್ತುಂಬಿಕೊಂಡ ಪೋಷಕರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆಯಿತ್ತು. ಆದರದು ಅಸ್ತವ್ಯಸ್ತವಾಗಿತ್ತು. ಅಲ್ಲಿದ್ದ ಸೀಮಿತ ಊಟದ ಕೌಂಟರ್‌ಗಳಲ್ಲಿ ಊಟ ಬಡಿಸುವವರಿರಲಿಲ್ಲ. ಅತಿಥಿಗಳೆನಿಸಿಕೊಂಡ ಪೋಷಕರೇ ತಟ್ಟೆಗೆ ಅನ್ನ–ಸಾಂಬಾರು ಬಡಿಸಿಕೊಂಡು ಉಂಡರು. ಕುಡಿಯುವ ನೀರು ‍ಪಡೆಯಲು ಬೆವರು ಹರಿಸಿದರು.

ಶಿಸ್ತನ್ನೇ ತಮ್ಮ ಧ್ಯೇಯವಾಗಿಸಿಕೊಂಡ ಮತ್ತು ಅಂತಹದ್ದೇ ಶಿಸ್ತನ್ನು ಸಾರ್ವಜನಿಕರಿಂದಲೂ ನಿರೀಕ್ಷಿಸುವ ಇಲಾಖೆ ಅತಿಥಿಗಳನ್ನು ನಡೆಸಿಕೊಂಡ ಕ್ರಮ ಅದಕ್ಕೆ ಶೋಭೆ ತರುವಂತಿರಲಿಲ್ಲ. ಕಾರ್ಯಕ್ರಮದ ಜವಾಬ್ದಾರಿ ಹೊತ್ತ ಮೇಲಧಿಕಾರಿಗಳು ದೂರದ ಊರುಗಳಿಂದ ಬರುವವರ ಬಗ್ಗೆ ಯೋಚಿಸಬೇಕಾಗಿತ್ತು. ಹಿರಿಯ ಪೋಲಿಸ್ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದೊಡ್ಡವರ ಕಣ್ಣುಗಳಿಗೆ ಸಣ್ಣವರ ಸಂಕಟಗಳು ಕಾಣಿಸಲಿಲ್ಲವೇನೊ? ನಾಡಿನ ಮೂಲೆ ಮೂಲೆಗಳಿಂದ ಬಸ್ಸು–ರೈಲುಗಳ ಮೂಲಕ ಬಂದು, ಎಲ್ಲೋ ರಸ್ತೆ ಬದಿ ಉಂಡು, ಇನ್ನೆಲ್ಲೋ ಮಲಗಿದ ಪೋಷಕರಿಗೆ ಬೆಳಗಿನ ತಿಂಡಿಯೂ ಸರಿಯಾಗಿ ಸಿಗದೆ ಹೋದುದಕ್ಕೆ ಏನು ಹೇಳುವುದು? ಆ ತರಬೇತಿ ಕೇಂದ್ರದ ಸುತ್ತಮುತ್ತ, ದುಡ್ಡು ಕೊಟ್ಟು ಊಟ–ತಿಂಡಿ ಪಡೆಯೋಣವೆಂದರೂ ಒಂದೇ ಒಂದು ಹೋಟೆಲ್‌ ಕೂಡ ಇರಲಿಲ್ಲ.

ದೂರದೂರುಗಳಿಂದ ಬಂದವರಿಗೆ ಕನಿಷ್ಠ ಕಲ್ಯಾಣ ಮಂಟಪಗಳಲ್ಲಾದರೂ ವಾಸ್ತವ್ಯ ಕಲ್ಪಿಸುವುದು ಪೊಲೀಸ್‌ ಇಲಾಖೆಗೆ ದೊಡ್ಡ ಸಂಗತಿಯಾಗಿರಲಿಲ್ಲ. ಎಷ್ಟೋ ಕುಟುಂಬಗಳ ಎಷ್ಟೋ ದಿನಗಳ ಕನಸು ಮಕ್ಕಳ ಮೂಲಕ ಸಾಕಾರಗೊಂಡ ಗಳಿಗೆಯನ್ನು ಸ್ಮರಣೀಯಗೊಳಿಸುವ ಅವಕಾಶವನ್ನು ಇಲಾಖೆ ಬಿಟ್ಟುಕೊಟ್ಟಿತು.

ಕಡೂರಿನಲ್ಲಿ ನಡೆದ ಘಟನೆಯನ್ನು ನೆಪವಾಗಿಟ್ಟುಕೊಂಡು ನೋಡಿದರೆ, ಸೇನಾ ನೇಮಕಾತಿ ಸಂದರ್ಭದಲ್ಲೂ ವ್ಯವಸ್ಥೆಯ ಬಗ್ಗೆ ನಿರಾಶೆ ಹುಟ್ಟಿಸುವಂತಹ ಚಿತ್ರಣಗಳನ್ನು ಕಾಣುತ್ತೇವೆ. ದೇಶದ ಭಾವೀ ಯೋಧರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ಎನ್ನುವಂಥ ಸುದ್ದಿಗಳು ಕಳವಳ ಹುಟ್ಟಿಸುತ್ತವೆ. ಇಂತಹ ಪ್ರಕರಣಗಳು ಮರುಕಳಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.