ADVERTISEMENT

ಸಂಗತ: ದೇಶ ಸೋಲುವಾಗ ಪ್ರಧಾನಿ ಗೆಲ್ಲುವರೆ?

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
   
ಅಮೆರಿಕದೊಂದಿನ ‘ವ್ಯಾಪಾರ ಒಪ್ಪಂದ’ವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿದೆ.

ಭಾರತದ ಸಂವಿಧಾನವು ಭಾರತವನ್ನು ಸಾರ್ವಭೌಮ ರಾಷ್ಟ್ರವೆಂದು ಘೋಷಿಸಿದೆ. ನಮ್ಮ ದೇಶದ ಎಲ್ಲ ತೀರ್ಮಾನ ಗಳನ್ನೂ ನಾವೇ ಚುನಾಯಿಸಿ ಕಳಿಸಿದ ಸರ್ಕಾರವು ನಮ್ಮ ಪರವಾಗಿ ತೆಗೆದುಕೊಳ್ಳಬೇಕು. ಅದೂ ಸಹ ಕೆಳಮನೆ ಮತ್ತು ಮೇಲ್ಮನೆಗಳ ಬಹುಮತದ ಒಪ್ಪಿಗೆಯ ಮೇರೆಗೆ. ಭಾರತೀಯರು ಭಾರತದ ಸಂವಿಧಾನದ ಮೂಲಕ ಒಕ್ಕೂಟ ಸರ್ಕಾರ ಮತ್ತು ರಾಜ್ಯಗಳ ಸರ್ಕಾರಗಳಿಗಲ್ಲದೇ ಬೇರೆ ಯಾರಿಗೂ ಈ ಅಧಿಕಾರವನ್ನು ನೀಡಿಲ್ಲ. ಸತ್ಯ ಹೀಗಿರುವಾಗ, ಭಾರತದೊಂದಿಗೆ ಭಾರತಕ್ಕೇ ಹಾನಿಯುಂಟು ಮಾಡುವ ಸುಂಕ ನೀತಿಯನ್ನು ಹಾಗೂ ವ್ಯಾಪಾರ ಒಪ್ಪಂದವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸುವುದು ಎಷ್ಟು ಸರಿ?

ಫೆಬ್ರುವರಿ 2ರಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಟ್ರಂಪ್‌ ಅವರು ಕೆಲವು ಘೋಷಣೆಗಳನ್ನು ಮಾಡಿದ್ದಾರೆ. ಅವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ, ತತ್‌ಕ್ಷಣದಿಂದ ಜಾರಿಗೆ ಬರುವಂತೆ ಕೆಲವು ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಆ ಒಪ್ಪಂದಗಳೇನೆಂದರೆ, ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಅಮೆರಿಕ–ವೆನೆಜುವೆಲಾದಿಂದ ತೈಲ ಖರೀದಿಮಾಡುತ್ತದೆ. ಅದಕ್ಕೆ ಬದಲಾಗಿ ಭಾರತದ ಉತ್ಪನ್ನಗಳ ಮೇಲೆ ಅಮೆರಿಕದಲ್ಲಿ ವಿಧಿಸುವ ಸುಂಕದ ಪ್ರಮಾಣವನ್ನು ಶೇ 18ಕ್ಕೆ ಇಳಿಸ ಲಾಗುತ್ತದೆ. ಅಷ್ಟೇ ಅಲ್ಲ, ಭಾರತವು ಅಮೆರಿಕದ ಸರಕುಗಳ ಮೇಲೆ ಶೂನ್ಯ ಸುಂಕ ವಿಧಿಸುತ್ತದೆ! ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ 500 ಬಿಲಿಯನ್‌ ಡಾಲರ್‌ (₹45 ಲಕ್ಷ ಕೋಟಿ) ಮೊತ್ತದ ಇಂಧನ, ತಂತ್ರಜ್ಞಾನ, ಕೃಷಿ ಉತ್ಪನ್ನ ಮತ್ತು ಕಲ್ಲಿದ್ದಲು ಖರೀದಿಸಲು ಭಾರತ ಒಪ್ಪಿದೆ ಎಂದು ಹೇಳಲಾಗಿದೆ. 

ಇಲ್ಲಿ ಏಳುವ ಸಾಮಾನ್ಯ ಪ್ರಶ್ನೆ ಏನೆಂದರೆ, ಈ ಒಪ್ಪಂದದಿಂದ ಭಾರತಕ್ಕೆ ಯಾವ ರೀತಿಯ ಲಾಭವಾಗಲಿದೆ? ಸ್ವಲ್ಪಮಟ್ಟಿಗಿನ ಸುಂಕ ಇಳಿಸಿಕೊಳ್ಳಲು ಭಾರತ ಅಗಾಧ ನಷ್ಟಕ್ಕೊಳಗಾಗುವುದಲ್ಲದೆ, ತನ್ನ ಸಾರ್ವಭೌಮತ್ವದೊಂದಿಗೆ ರಾಜಿ ಮಾಡಿಕೊಳ್ಳಬೇಕೆ? ನಮ್ಮ ದೇಶ ಯಾರೊಂದಿಗೆ ಏನನ್ನು ಯಾವಾಗ ಖರೀದಿ ಮಾಡಬೇಕು ಎಂಬುದನ್ನು ಅಮೆರಿಕದ ಅಧ್ಯಕ್ಷರು ಹೇಗೆ ತೀರ್ಮಾನಿಸಲು ಸಾಧ್ಯ? ಅದಕ್ಕೆ ಭಾರತ ಸರ್ಕಾರವೇಕೆ ಒಪ್ಪಿಕೊಳ್ಳಬೇಕು? ಎಲ್ಲಿ ತೈಲ ಬೆಲೆ ಕಡಿಮೆ ಇರುತ್ತದೆಯೋ ಅಲ್ಲಿ ಖರೀದಿ ಮಾಡಿದರೆ ಭಾರತೀಯರಿಗೆ ಒಳಿತಲ್ಲವೇ?

ADVERTISEMENT

ನಮ್ಮ ದೇಶವು ಅಮೆರಿಕದ ಉತ್ಪನ್ನಗಳಿಗೆ ಶೂನ್ಯ ಸುಂಕ ವಿಧಿಸುವಾಗ, ಅಮೆರಿಕ ಕೂಡ ಭಾರತದ ಉತ್ಪನ್ನಗಳಿಗೆ ಶೂನ್ಯ ಸುಂಕವನ್ನೇ ವಿಧಿಸುವುದು ನ್ಯಾಯಯುತ. ಶೇ 18ರಷ್ಟು ಸುಂಕವನ್ನು ಭಾರತ ಸರ್ಕಾರ ಒಪ್ಪಿಕೊಳ್ಳುವ ಅವಶ್ಯಕತೆ ಇಲ್ಲ. ಟ್ರಂಪ್‌ ಘೋಷಿಸಿರುವಂತೆ ಅಮೆರಿಕದ ಉತ್ಪನ್ನಗಳನ್ನು ಅಷ್ಟೊಂದು ಪ್ರಮಾಣದಲ್ಲಿ ಖರೀದಿ ಮಾಡಿದರೆ ‘ಮೇಕ್‌ ಇನ್‌ ಇಂಡಿಯಾ’ ಬರೀ ಘೋಷಣೆಯಾಗಿಯೇ ಉಳಿಯುತ್ತದೆ. ನಮ್ಮ ರೈತರು ಬೀದಿಪಾಲಾಗುತ್ತಾರೆ. ಕಲ್ಲಿದ್ದಲಿನ ಗಣಿಗಾರಿಕೆ ಹಾಗೂ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ನೀಡುತ್ತಿರುವ ಸರ್ಕಾರದ ಸಹಕಾರ ಸಂಪೂರ್ಣ ನೆಲಕಚ್ಚುತ್ತದೆ.

ಮೇಲ್ನೋಟಕ್ಕೆ ಟ್ರಂಪ್‌ ಘೋಷಿತ ಒಪ್ಪಂದವು ಹಲವು ಅನುಮಾನ ಗಳಿಗೆ ಎಡೆ ಮಾಡಿಕೊಡುತ್ತಿದೆ. ಇಲ್ಲಿಯವರೆಗೆ ಭಾರತ ಸರ್ಕಾರದಿಂದ ಸಮರ್ಪಕ ಸ್ಪಷ್ಟೀಕರಣ ಬರದಿರುವುದು ಸಹ ಇಲ್ಲೇನೋ ನಡೆದಿದೆ ಎಂಬುದನ್ನು ಸೂಚಿಸುತ್ತಿದೆ. ನಮ್ಮ ಪ್ರಧಾನಿಯವರು ಅಮೆರಿಕ ಸುಂಕ ಕಡಿತಗೊಳಿಸಿದ್ದರ ಬಗ್ಗೆ ಪ್ರಸ್ತಾಪಿಸಿ ಟ್ರಂಪ್‌ಗೆ ಧನ್ಯವಾದ ಹೇಳಿ ಟ್ವೀಟ್‌ ಮಾಡಿದ್ದಾರೆ ಅಷ್ಟೆ. ಆದರೆ, ಟ್ರಂಪ್‌ ಘೋಷಣೆಗಳನ್ನು ಅಲ್ಲಗೆಳೆದಿಲ್ಲ. ಈ ನಡುವೆ ‘ಮೇಕ್‌ ಅಮೆರಿಕ ಗ್ರೇಟ್‌ ಎಗೈನ್‌’ಗಾಗಿ ಟ್ರಂಪ್‌ ಭಾರತವನ್ನು ಬಗ್ಗಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಭಾರತದ ಮಾಧ್ಯಮಗಳು ಭಾರತೀಯರಿಗಾಗಿರುವ ಮಹಾಸೋಲನ್ನು ಪ್ರಧಾನಿಯವರ ದಿಗ್ವಿಜಯವೆಂದು ಸಂಭ್ರಮಿಸುತ್ತಿವೆ. ಭಾರತೀಯರು ಸೋಲುವಾಗ ಪ್ರಧಾನಿಯವರು ಗೆಲ್ಲಲು ಹೇಗೆ ಸಾಧ್ಯ?

ಈ ಹಿಂದೆಯೂ ಟ್ರಂಪ್‌ ಏಕಾಏಕಿ ಭಾರತದ ಉತ್ಪನ್ನಗಳ ಮೇಲೆ ಸುಂಕ ಸಮರ ಸಾರಿದಾಗ ಭಾರತ ಸರ್ಕಾರವು ಅದನ್ನು ‘ಅಸಮರ್ಥನೀಯ, ಅನ್ಯಾಯ ಮತ್ತು ವಿಚಾರಹೀನ’ ಎಂದು ಹೇಳಿತ್ತು. ಆದರೆ, ಈಗ ಭಾರತಕ್ಕೆ ಅತ್ಯಂತ ನಷ್ಟ ಉಂಟುಮಾಡುವ ಒಪ್ಪಂದಕ್ಕೆ ತಲೆದೂಗುತ್ತಿದೆ. ಇಂತಹ ವ್ಯಕ್ತಿಗೇಕೆ ‘ನಮಸ್ತೆ ಟ್ರಂಪ್’ ಎಂದು ಎತ್ತಿ ಮೆರೆಸಿದೆವು ಎನ್ನುವುದು ತಿಳಿಯುತ್ತಿಲ್ಲ. 

140 ಕೋಟಿ ಭಾರತೀಯರ ಸಾರ್ವಭೌಮತ್ವವನ್ನು 35ಕೋಟಿ ಅಮೆರಿಕದವರು ನಿರ್ಧರಿಸುವುದೆಂದರೆ, ನಮ್ಮ ಪ್ರಜಾಪ್ರಭುತ್ವವನ್ನು ನಾವೆಲ್ಲಿಗೆ ತಂದು ನಿಲ್ಲಿಸಿದ್ದೇವೆ ಎಂಬು ದನ್ನು ಅರ್ಥಮಾಡಿಕೊಳ್ಳಬೇಕಿದೆ. ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ದೇಶದೊಂದಿಗೆ ಅಮೆರಿಕ ಅಧ್ಯಕ್ಷ ನಡೆಸುತ್ತಿರುವ ಹುಡುಗಾಟಕ್ಕೆ ಇದುವರೆಗೆ ಭಾರತದಿಂದ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿರುವುದಾಗಿ ಟ್ರಂಪ್‌ ಪದೇ ಪದೇ ಘೋಷಿಸಿಕೊಳ್ಳುತ್ತಿದ್ದರೂ ಭಾರತ ಸರ್ಕಾರ ದಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ. ಆದರೆ, ವ್ಯಾಪಾರ ಒಪ್ಪಂದದ ಕುರಿತು ಭಾರತ ಸರ್ಕಾರ ಸ್ಪಷ್ಟೀಕರಣ ನೀಡಲೇಬೇಕಿದೆ. ರಾಜಕೀಯ ತಂತ್ರಗಾರಿಕೆಯ ನೆಪವೊಡ್ಡಿ ಭಾರತೀಯರು ಕಷ್ಟಪಟ್ಟು ಪಡೆದುಕೊಂಡಿರುವ ಸಾರ್ವಭೌಮತ್ವವನ್ನು ಮತ್ತೆ ಕಳೆದುಕೊಳ್ಳಲು ಇಷ್ಟಪಡುವು ದಿಲ್ಲ. ಭಾರತ ವಿಶ್ವಗುರು ಆಗದಿದ್ದರೂ ಸರಿಯೇ, ಕಷ್ಟಪಟ್ಟು ಪಡೆದುಕೊಂಡಿರುವ ಸ್ವರಾಜ್ಯದಲ್ಲಾಗುವ ಕಿಂಚಿತ್ತು ಕದಲಿಕೆಯನ್ನೂ ಭಾರತೀಯರು ಸಹಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.