
ಓಶೋ
ಮುಲ್ಲಾ ನಸರುದ್ದೀನನ ಮಗ ಶಾಲೆಗೆ ಬಂದ. ಭೂಗೋಳದ ಪಾಠ ಆರಂಭವಾಯಿತು. ಗುರುಗಳು ಪಾಠವನ್ನು ಆರಂಭಿಸಿದರು. ಭೂಮಿಯ ಆಕಾರ, ರಚನೆ ಮುಂತಾದ ಹಲವು ವಿವರಗಳ ಪಾಠ ನಡೆಯಿತು. ಅಂದಿನ ಪಾಠವನ್ನು ನಿಲ್ಲಿಸಿ ಗುರುಗಳು ಕೊನೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳಲು ಆರಂಭಿಸಿದರು. ಒಬೊಬ್ಬರನ್ನಾಗಿ ಕೇಳುತ್ತ ಕೇಳುತ್ತ ಬಂದರು. ಈಗ ಮುಲ್ಲಾ ನಸರುದ್ದೀನನ ಮಗನ ಸರದಿ. ’ಭೂಮಿಯ ಆಕಾರ ಹೇಗಿದೆ’ ಎಂದು ಅವನನ್ನು ಕೇಳಿದರು, ಗುರುಗಳು.
ಮುಲ್ಲಾನ ಮಗ ಮೌನವಾಗಿ ಕಂಬದಂತೆ ನಿಂತುಬಿಟ್ಟ! ಅವನಿಂದ ಮಾತನ್ನು ಹೊರಡಿಸಲು, ಅವನನ್ನು ಹುರುದುಂಬಿಸಲು ಗುರುಗಳೇ ಹೇಳಿದರು: ’ಭೂಮಿ ಚಪ್ಪಟೆಯಾಗಿದೆ ಅಲ್ವೇನೊ?’
‘ಇಲ್ಲ’ ಎಂದು ಹೇಳಿದ ಮುಲ್ಲಾಸುತ.
ಗುರುಗಳಿಗೆ ಹುಡುಗನ ಬಗ್ಗೆ ಸ್ವಲ್ಪ ಭರವಸೆ ಮೂಡಿತು. ‘ಉತ್ತರ ಗೊತ್ತಿದೆ ಇವನಿಗೆ; ಹೇಳುವಲ್ಲಿ ಸ್ವಲ್ಪ ಭಯವೋ ಸಂಕೋಚವೋ ಇರಬಹುದು’ ಎಂದು ಅವರಿಗೆ ಅನಿಸಿತು.
'ಭೂಮಿ ಗುಂಡಗಿದೆ ಅಲ್ವಾ?’ ಎಂದು ಗುರುಗಳು ಉದ್ಗರಿಸಿದರು.
‘ಇಲ್ಲ’ ಎಂದು ಮತ್ತೆ ಉಸುರಿದ ಮುಲ್ಲಾನ ತನಯ.
ಈಗ ಗುರುಗಳಿಗೆ ಸ್ವಲ್ಪ ತಲೆಬಿಸಿಯಾಯಿತು; ಗೊಂದಲವಾಯಿತು. 'ಅಲ್ಲಯ್ಯ! ಭೂಮಿ ಚಪ್ಪಟೆಯಾಗಿರಬಹುದು ಅಥವಾ ಗುಂಡಾಗಿರಬಹುದು. ಆದರೆ ನೀನು ಎರಡಕ್ಕೂ ಇಲ್ಲ ಅಂತ್ಲೇ ಹೇಳ್ತಿದಿಯಾ! ನಿನ್ನ ತಲೆಯಲ್ಲಿ ಬೇರೆ ಯಾವ ಆಕಾರ ಇದೆಯೋ?’ ಎಂದು ತುಸು ಗದರಿಯೇ ಕೇಳಿದರು ಗುರುಗಳು.
ಮುಲ್ಲಾನ ಮಗ ಮೆಲುದನಿಯಲ್ಲಿಯೇ ಹೇಳಿದ: ’ಸರ್! ನಮ್ಮ ತಂದೆ ಹೇಳ್ತಿರ್ತಾರೆ, ಈ ಭೂಲೋಕ ವಕ್ರವಕ್ರವಾಗಿದೆಯಂತೆ!’
* * *
ನಾವು ಮಕ್ಕಳಿಗೆ ಏನನ್ನು ಕಲಿಸುತ್ತಿದ್ದೇವೆ – ಎಂಬುದಕ್ಕೆ ಒಂದು ಉದಾಹರಣೆಯಾಗಿ ನಿಲ್ಲುತ್ತದೆ, ಈ ಕಥೆ. ನಾವು ಅವರ ತಲೆಗಳಲ್ಲಿ ಜಗತ್ತಿನ ಬಗ್ಗೆ ಕಸವನ್ನೇ ತುಂಬುತ್ತಿದ್ದೇವೆ; ಎಂದರೆ, ಜಗತ್ತಿನಲ್ಲಿರುವ ಕೆಟ್ಟತನದ ಕಡೆಗೆ ಮಾತ್ರವೇ ನಮ್ಮ ದೃಷ್ಟಿ. ಹೀಗಾಗಿ ನಮಗೆ ಎಲ್ಲೆಲ್ಲೂ ಕಾಣುವುದು ಬರೀ ಕೊಳಕು, ಕಸ, ಕೆಡಕು. ನಾವು ನೋಡಿದ್ದನ್ನು ಮಾತ್ರವೇ ಇತರರಿಗೂ ಹೇಳಲು ಸಾಧ್ಯ. ನಾವು ಕಂಡ ಕಸವನ್ನು, ನಾವು ಉಂಡ ಕೊಳಕನ್ನು ನಮ್ಮ ಮಕ್ಕಳಿಗೂ ವರ್ಗಾಯಿಸುತ್ತಿದ್ದೇವೆ. ಆದರೆ ಮಕ್ಕಳ ಮನಸ್ಸು ಶುಭ್ರವಾಗಿರುತ್ತದೆ, ಶುದ್ಧವಾಗಿರುತ್ತದೆ; ಅದು ಯಾವುದನ್ನೂ ಚೆನ್ನಾಗಿ ಹೀರಿಕೊಳ್ಳಲು ಸಮರ್ಥವಾಗಿರುತ್ತದೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ನಮ್ಮ ಕೊಳಕುತನಗಳನ್ನೇ ಆ ಎಳೆಯ ಮನಸ್ಸುಗಳಲ್ಲಿ ತುಂಬಿಸಿಬಿಟ್ಟರೆ, ಆಗ ಅವರಿಗೆ ಜಗತ್ತಿನಲ್ಲಿ ಕೊಳಕುತನ ಬಿಟ್ಟು ಇನ್ನೊಂದು ಕಾಣದು; ನಮ್ಮಲ್ಲಿರುವ ವಕ್ರವನ್ನು ನಾವು ಮಕ್ಕಳಲ್ಲೂ ಹೇರುತ್ತಿದ್ದೇವೆ; ಬಂಗಾರವನ್ನು ಕಬ್ಬಿಣವನ್ನಾಗಿಸುವ ರಸವಿದ್ಯೆ, ಅಲ್ಲ ‘ಕಸವಿದ್ಯೆ’ ನಮ್ಮದಾಗಿದೆಯೆನ್ನಿ!
ನಮ್ಮ ಮನಸ್ಸು ಒಳಿತು–ಕೆಡಕುಗಳನ್ನು ಮೀರಿದ ಸ್ಥಿತಿಯನ್ನು ಮುಟ್ಟಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಓಶೋ ಈ ಕಥೆಯನ್ನು ಬಳಸಿಕೊಂಡಿದ್ದಾರೆ.
ನಮ್ಮ ಆಲೋಚನೆಗಳು ವಕ್ರವಾಗಿದ್ದಾಗ ನಮಗೆ ಕಾಣುವುದೆಲ್ಲವೂ ವಕ್ರವಾಗಿಯೇ ಕಾಣುತ್ತದೆ. ನೀರು ತುಂಬಿದ ಗಾಜಿನ ಲೋಟದಲ್ಲಿ ನಾವು ನೇರವಾದ ಕೊಲನ್ನು ಇಟ್ಟರೂ ಅದು ನಮಗೆ ವಕ್ರವಾಗಿಯೇ ಕಾಣುತ್ತದೆ. ಹೀಗೆಯೇ ನಮ್ಮ ಮನಸ್ಸು ವಕ್ರತನದಲ್ಲಿದ್ದಾಗ ನೇರ ಇರುವ ವಸ್ತುಗಳೂ ನಮಗೆ ವಕ್ರವಾಗಿಯೇ ಕಾಣುವುದು. ಇಂತ ದೃಷ್ಟಿದೋಷದಿಂದ ನಾವು ಹೊರಗೆ ಬರಬೇಕು.
ಈ ವಕ್ರತೆಗೆ ಕಾರಣವೇ ನಮ್ಮ ಮನಸ್ಸು ಮತ್ತು ಬುದ್ಧಿ. ಇವುಗಳ ಆಟಕ್ಕೆ ಸಿಲುಕಿದರೆ ಆಗ ಜಗತ್ತು ನಮ್ಮ ಪಾಲಿಗೆ ನೇರವಾಗಿ ಕಾಣದು; ಎಲ್ಲೆಲ್ಲೂ ವಕ್ರವೇ ಕಾಣುವುದು. ಮನಸ್ಸು ಮತ್ತು ಬುದ್ಧಿ – ಎರಡನ್ನೂ ಸೇರಿಸಿ ಇಂಗ್ಲಿಷಿನಲ್ಲಿ ‘ಮೈಂಡ್’ ಎನ್ನಬಹುದು. ಈ ‘ಮೈಂಡ್’ ಹಿಡಿತದಿಂದ ತಪ್ಪಿಸಿಕೊಂಡರೆ ಆಗ ನಮ್ಮ ಅನುಭವ ಹೇಗಿರುತ್ತದೆ ಎಂದು ಓಶೋ ವಿವರಿಸುತ್ತಾರೆ. ಈ ಮೈಂಡ್ನ ಸ್ವಭಾವವೇ ಜಗತ್ತನ್ನು ಒಡೆದ ಬಿಂಬದಂತೆ ಚೂರುಚೂರಾಗಿ ಕಾಣಿಸುವುದು; ಪ್ರತಿ ಸಂಗತಿಯಲ್ಲೂ ಅನುಭವದಲ್ಲೂ ಗಡಿಗಳನ್ನು ಎಬ್ಬಿಸುವುದು. ನಾವು ‘ಮೈಂಡ್’ನಿಂದ ಮುಕ್ತರಾದರೆ ಮಾತ್ರ ಜಗತ್ತು ಒಂದಾಗಿ ಕಾಣುತ್ತದೆ. ಇಂಥ ಸ್ಥಿತಿಯಲ್ಲಿ ಜಗತ್ತು ಅದೃಶ್ಯವಾಗಿಬಿಡುತ್ತದೆ; ಆಗ ಎಲ್ಲ ವಸ್ತುಗಳೂ ನಮ್ಮಿಂದ ಮರೆಯಾಗಿರುತ್ತವೆ. ಎಲ್ಲ ಗಡಿಗಳೂ ಮರೆಯಾಗಿ ಒಂದು ವಸ್ತು ಇನ್ನೊಂದರಲ್ಲಿ ಸೇರಲು ತವಕಿಸುತ್ತವೆ. ಮರ ಕಲ್ಲಾಗುತ್ತದೆ; ಕಲ್ಲು ಸೂರ್ಯನಾಗುತ್ತದೆ; ಸೂರ್ಯ ನಕ್ಷತ್ರವಾಗುತ್ತದೆ; ನಕ್ಷತ್ರ ಹೆಣ್ಣಾಗುತ್ತದೆ; ಆ ಹೆಣ್ಣು ನೀವು ಪ್ರೀತಿಸುವ ನಲ್ಲೆಯೇ ಆಗಿರುತ್ತಾಳೆ. ಹೀಗೆ ಪ್ರತಿಯೊಂದೂ ಇನ್ನೊಂದರಲ್ಲಿ ಒಂದಾಗಲು ಹಂಬಲಿಸುತ್ತಿರುತ್ತದೆ. ನೀವು ಕೂಡ ಇವುಗಳಿಂದ ಪ್ರತ್ಯೇಕ ಆಗಿರುವುದಿಲ್ಲ; ಅವೇ ನೀವು, ನೀವೇ ಅವು. ಪ್ರತಿಯೊಂದು ವಸ್ತು–ವ್ಯಕ್ತಿಗಳ ಹೃದಯದಲ್ಲಿ ನೀವು ಮಿಡಿಯುತ್ತಿರುತ್ತೀರಿ. ಇದೇ ವಿಶ್ವ, ಬ್ರಹ್ಮಾಂಡ. ಅದು ನೀವೇ ಆಗಿರುತ್ತೀರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.