‘ಪರಿಶಿಷ್ಟರ 17,000 ಹೆಕ್ಟೇರ್ ಒತ್ತುವರಿ ಭೂಮಿ ಸಕ್ರಮ’
ಬೆಂಗಳೂರು, ಮೇ 20– ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಬುಡಕಟ್ಟು ಜನಾಂಗದವರು ಒತ್ತುವರಿ ಮಾಡಿಕೊಂಡಿರುವ 17,000 ಹೆಕ್ಟೇರ್ ಅರಣ್ಯ ಭೂಮಿಯನ್ನು ಸಕ್ರಮಗೊಳಿಸಲು ಕೋರಿ ರಾಜ್ಯ ಸರ್ಕಾರ ಕಳುಹಿಸಿದ್ದ ಉದ್ದೇಶಿತ ಸೂಚನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ.ಸಿ.ನಾಣಯ್ಯ ಅವರು ಸಚಿವ ಸಂಪುಟ ಸಭೆಯ ನಂತರ ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಒತ್ತುವರಿ 1978ರ ಅವಧಿಗೂ ಮುಂಚಿನ ಒತ್ತುವರಿ; ಸಕ್ರಮದ ವ್ಯಾಪ್ತಿಗೆ ಬರುತ್ತದೆ. ಇದರಿಂದ 20,000 ಬಡ ಕುಟುಂಬಗಳು ಪ್ರಯೋಜನ ಪಡೆಯಲಿವೆ’ ಎಂದು ಅವರು ಹೇಳಿದರು.
ಪ್ರಧಾನಿ ‘ವಿವಾದಾತ್ಮಕ’ ಭಾಷಣಕ್ಕೆ ವ್ಯಾಪಕ ಟೀಕೆ
ನವದೆಹಲಿ, ಮೇ 20 (ಪಿಟಿಐ, ಯುಎನ್ಐ)– ದೇಶದಲ್ಲಿ ಕೆಲವು ರಾಜಕೀಯ ಪಕ್ಷಗಳು ತತ್ವರಹಿತ ರಾಜಕೀಯ ನಡೆಸಿವೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿರುವ ಆರೋಪವನ್ನು ತೃತೀಯ ರಂಗದ ನಾಯಕರು ಇಂದು ಕಟುವಾಗಿ ಟೀಕಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಅವಕಾಶವನ್ನು ವಿರೋಧ ಪಕ್ಷಗಳನ್ನು ಟೀಕಿಸಲು ವಾಜಪೇಯಿ ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.
ವಾಜಪೇಯಿ ಅವರು ನಿನ್ನೆ ದೂರದರ್ಶನ ಮತ್ತು ಆಕಾಶವಾಣಿಗಳ ಮೂಲಕ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ‘ವಿಭಜನಾತ್ಮಕ, ವಿವಾದಾತ್ಮಕ’ ಎಂದು ತೃತೀಯ ರಂಗದ ನಾಯಕರು ವರ್ಣಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.