ಮಂಡ್ಯ ಜಿಲ್ಲೆಯ ಗುತ್ತಲು ಗ್ರಾಮದ ಶ್ರೀ ಅರಕೇಶ್ವರಸ್ವಾಮಿ ರಥೋತ್ಸವ ಇತ್ತೀಚೆಗೆ ಸಂಪನ್ನಗೊಂಡಿತು. ಮರುದಿನ ಮುಂಜಾನೆ ವಾಯುವಿಹಾರಕ್ಕೆ ಹೋದ ನನಗೆ ಕಂಡುಬಂದಿದ್ದು ಎಲ್ಲೆಲ್ಲೂ ಕಸದರಾಶಿ. ಮಜ್ಜಿಗೆ, ಪಾನಕ ಕುಡಿದ ಸಾವಿರಾರು ಪ್ಲಾಸ್ಟಿಕ್ ಲೋಟಗಳು ಅಕ್ಕಪಕ್ಕದ ಜಮೀನಿನ ಮಣ್ಣು ಸೇರಿದ್ದವು. ಅಲ್ಲಿಂದ ಮುಂದೆ ಊರೊಳಗೆ ಬಂದೆ. ಸಿಂಗಾರಗೊಂಡಿದ್ದ ರಥವು ಭಕ್ತರ ಬಾಳೆಹಣ್ಣುಗಳ ಭಕ್ತಿಯ ಹೊಡೆತದಿಂದಾಗಿ ಕಳೆಗುಂದಿತ್ತು. ರಥದ ಸುತ್ತ ಸಾವಿರಾರು ಬಾಳೆಹಣ್ಣುಗಳು ಬಿದ್ದು ಮಣ್ಣಿನಲ್ಲಿ ಅಪ್ಪಚ್ಚಿಯಾಗಿದ್ದವು. ಕೊಳೆತ ವಾಸನೆ ಆರಂಭಗೊಂಡಿತ್ತು. ಇನ್ನೆರಡು ದಿನಗಳಲ್ಲಿ ಅವನ್ನು ತೆರವುಗೊಳಿಸದಿದ್ದಲ್ಲಿ ಸಾಂಕ್ರಾಮಿಕ ರೋಗ ನಿಶ್ಚಿತ ಎಂಬ ಭಯ ಕಾಡಿತು.
ನಾಗರಿಕತೆ ಬೆಳೆದು ವಿಜ್ಞಾನ ದೇದೀಪ್ಯಮಾನವಾಗಿ ಕಣ್ಣರಳಿಸಿದ್ದರೂ ಜನರ ಮನೋಭಾವ ಬದಲಾಗುತ್ತಿಲ್ಲ. ರಥೋತ್ಸವಗಳಲ್ಲಿ ಬಾಳೆಹಣ್ಣುಗಳನ್ನು ಭಕ್ತಿಪರವಶರಾಗಿ ತೂರುವ ರೂಢಿ ನಿಂತಿಲ್ಲ. ಹೀಗೆ ಬಾಳೆಹಣ್ಣನ್ನು ತೂರಿ ಮಣ್ಣುಪಾಲು ಮಾಡುವ ಬದಲು ಹೊಸದೊಂದು ಸಂಪ್ರದಾಯ ಸೃಜಿಸಿ, ಅದೇ ಬಾಳೆಹಣ್ಣುಗಳನ್ನು ಸಂಗ್ರಹಿಸಿ ಶಾಲೆಗಳು ಹಾಗೂ ಅನಾಥಾಲಯಗಳಿಗೆ ತಲುಪಿಸಿದರೆ, ಅಪೌಷ್ಟಿಕತೆಯಿಂದ ನರಳುವ ಮಕ್ಕಳು ತಿಂದು ದೃಢವಾಗುತ್ತಾರಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.