ADVERTISEMENT

ವಾಚಕರ ವಾಣಿ | ಅಲ್ಪವಿದ್ಯೆಯ ಮಹಾಗರ್ವಿಗಳು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST

ಸಂಸದೆ ಕನಿಮೊಳಿ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ತಮಗೆ ಹಿಂದಿ ಗೊತ್ತಿಲ್ಲ ಎಂದದ್ದಕ್ಕೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೊಬ್ಬರು ‘ನೀವು ಭಾರತೀಯಳಲ್ಲವೇ’ ಎಂದು ಪ್ರಶ್ನಿಸಿದ್ದನ್ನು ಕೇಳಿ ಬೇಸರವಾಯಿತು. ದಕ್ಷಿಣದ ರಾಜ್ಯಗಳ ವಿಷಯದಲ್ಲಿ ಉತ್ತರ ಭಾರತದವರ ಧಿಮಾಕಿನ ಧೋರಣೆ ಹೊಸದೇನಲ್ಲ.

ಉತ್ತರ ಭಾರತದ ನನ್ನ ಸಹೋದ್ಯೋಗಿಯೊಬ್ಬ ‘ನಾವೆಲ್ಲ ಇಲ್ಲಿಗೆ ಬರದೇ ಹೋಗಿದ್ದರೆ ಬೆಂಗಳೂರು ಹೀಗೆ ಅಂತರರಾಷ್ಟ್ರೀಯ ಮಟ್ಟದ ಕೀರ್ತಿ ಸಂಪಾದಿಸುತ್ತಿರಲಿಲ್ಲ’ ಎನ್ನುತ್ತ, ನಾವೇನೂ ಕನ್ನಡಿಗರಿಗೆ ಕೃತಜ್ಞರಾಗಿ ಇರಬೇಕಿಲ್ಲ ಎಂಬ ಧೋರಣೆಯಲ್ಲಿ ಮಾತನಾಡಿದ್ದ. ಇಂಥವರು ತಾವಿಲ್ಲಿ ಬಂದು ಸೇರಿಕೊಂಡಿದ್ದರಿಂದಲೇ ಬೆಳ್ಳಂದೂರು ಕೆರೆಯ ನೊರೆಯು ಗೂಗಲ್ ಅರ್ಥ್‌ನಲ್ಲಿ ಗೋಚರಿಸುವಷ್ಟು ‘ಕೀರ್ತಿ’ ಸಂಪಾದಿಸಿದೆ ಎಂಬುದನ್ನು ಅರಿತಿರಬೇಕಾಗುತ್ತದೆ. ಆದರೆ ಅಲ್ಪವಿದ್ಯೆಯ ಮಹಾಗರ್ವಿಗಳಿಂದ ಇಂತಹ ಆತ್ಮಾವಲೋಕನ
ವನ್ನು ನಿರೀಕ್ಷಿಸಲಾಗದು. ಕರ್ನಾಟಕದ ಯಾವುದೇ ಭಾಗದಲ್ಲಿ ಉದ್ಯೋಗ ಮಾಡುವವರು ಕಡ್ಡಾಯವಾಗಿ ಕನ್ನಡ ಕಲಿತಿರಲೇಬೇಕು ಎಂದು ಕಾನೂನು ನಿಯಮಾವಳಿ ರೂಪಿಸುವ ಅಧಿಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕಿದೆ. ಆದರೆ ಪ್ರಾಧಿಕಾರ ಆ ದಿಸೆಯಲ್ಲಿ ಗಂಭೀರವಾದ ಪ್ರಯತ್ನಕ್ಕೆ ಮುಂದಾಗಿಲ್ಲ. ಕನ್ನಡ ಕಲಿಯದೇ ಇಲ್ಲಿ ವಾಸಿಸಲು ಸಾಧ್ಯವಿಲ್ಲ ಎಂಬ ವಾತಾವರಣ ರೂಪಿಸದ ವಿನಾ ಕನ್ನಡಕ್ಕೆ ಉಳಿಗಾಲವಿಲ್ಲ. ಕನಿಮೊಳಿ ಅವರಂತಹ ವಿಐಪಿಗಳಿಗೇ ಈ ಪಾಡಾದರೆ, ಸಾಮಾನ್ಯರು ದಿನನಿತ್ಯ ಅನುಭವಿಸುವಂತಹ ಕಿರುಕುಳವನ್ನು ಹೇಗೆಂದು ವರ್ಣಿಸುವುದು?

-ಹೇಮಾ ಸಿಂಗಿಪಾಳ್ಯ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.