ADVERTISEMENT

ವಾಚಕರ ವಾಣಿ | ವ್ಯಕ್ತಿಪೂಜೆ ಕಂಡದ್ದು ಆಶ್ಚರ್ಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 19:30 IST
Last Updated 14 ಆಗಸ್ಟ್ 2020, 19:30 IST

ಟಿ.ಎನ್‌. ವಾಸುದೇವಮೂರ್ತಿ ಅವರ ‘ವ್ಯಕ್ತಿಪೂಜೆ ಮತ್ತು ಸಾಹಿತ್ಯ ಪ್ರವರ್ಧನೆ’ ಎಂಬ ಲೇಖನಕ್ಕೆ (ಪ್ರ.ವಾ., ಆ. 14) ಈ ಪ್ರತಿಕ್ರಿಯೆ. ಚಿಂತಕ ಕಿ.ರಂ. ನಾಗರಾಜ ಅವರೇ ವ್ಯಕ್ತಿ ಪೂಜೆ ನಿರಾಕರಿಸಿದ್ದರು ಎಂಬ ಮಾತು ನಿಜ. ಕಿ.ರಂ. ನೆನಪಲ್ಲಿ ಈಚೆಗೆ ಆನ್‌ಲೈನ್‌ ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಈ ಲೇಖನ ರೂಪಿತವಾಗಿದೆ ಎಂದು ಭಾವಿಸುವೆ. ಕೆಲವು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅವರು, ‘ಕಾವ್ಯ ವಾಚನದಂತಹ ಸಾಹಿತ್ಯಕ ಕಾರ್ಯಕ್ರಮಗಳು ಸಭಿಕರಿಲ್ಲದೆ ಭಣಗುಟ್ಟುತ್ತಿವೆ’ ಎಂಬುದಕ್ಕೆ ತಾತ್ವಿಕ ಕಾರಣ ಇಲ್ಲ. ಕಾವ್ಯ ಯಾವತ್ತೂ ಬಹುಜನರನ್ನು ತಲುಪುವ ಪ್ರಕಾರ ಅಲ್ಲ. ಅದಕ್ಕೆ ಭಾರಿ ಚಪ್ಪಾಳೆ ತಟ್ಟುವ ಜನರೂ ಬೇಕಾಗಿಲ್ಲ.

ಕಿ.ರಂ. ನೆನಪಲ್ಲಿ ‘ಕವಿಪುಂಗವರು ಪ್ರತಿವರ್ಷ ಒಂದೆಡೆ ಸೇರುತ್ತಾರೆ’ ಎಂಬ ಮಾತು ವ್ಯಂಗ್ಯದಿಂದ ಕೂಡಿದೆ.ಕಿ.ರಂ. ಈ ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ಗುರುವಲ್ಲದ ಗುರು. ಅವರ ಕಾವ್ಯದ ಅದಮ್ಯ ಪ್ರೀತಿಗೆ, ವಿಶ್ಲೇಷಣೆಗೆ ತಲೆದೂಗದವರೇ ಇಲ್ಲ. ಈಚಿನ ವರ್ಷಗಳಲ್ಲಿ ಭರವಸೆಯ ಕಾವ್ಯ ಟಿಸಿಲೊಡೆಯಲು ಕಿ.ರಂ. ಅವರ ಕೊಡುಗೆಯೂ ಅಪಾರ. ಅಂಥ ಹುಚ್ಚಿನ ಕೆಲವು ಕವಿಗಳು, ಸಾಹಿತ್ಯಾಸಕ್ತರು ಒಂದೆಡೆ ಸೇರಿ ಕಾವ್ಯದ ಓದು, ಚರ್ಚೆ ಮಾಡುತ್ತಿದ್ದಾರೆ. ಹಿಂದೆ ಅವರ ನೆನಪಲ್ಲಿ ಅಹೋರಾತ್ರಿ ಹಲವು ಕಾರ್ಯಕ್ರಮ ನಡೆಯುತ್ತಿದ್ದವು. ಅಲ್ಲೆಲ್ಲೂ ಅವರ ಫೋಟೊ, ಹಾರ, ತುರಾಯಿ, ಊದುಬತ್ತಿ ಇರುತ್ತಿರಲಿಲ್ಲ.

ಯುವಕವಿಗಳು ನಾಡಿನ ಮೂಲೆ ಮೂಲೆಯಿಂದ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಈ ಸಲ ಕೊರೊನಾ ಕಾರಣಕ್ಕೆ ಆನ್‌ಲೈನ್ ಕಾರ್ಯಕ್ರಮ ರೂಪಿಸಲಾಗಿತ್ತು. ಎಷ್ಟೋ ಯುವ ಕವಿಗಳು ಅರ್ಥಪೂರ್ಣ ಕವಿತೆ ವಾಚಿಸಿದ್ದಾರೆ. ಅದರಲ್ಲಿ ಕೆಲವು ಜೊಳ್ಳು ಇದ್ದರೂ ಅದು ಗೌಣ. ಆದರೆ ಅಲ್ಲೆಲ್ಲೂ ಅವರ ಗುಣಗಾನ ಕಾಣಲಿಲ್ಲ. ವಾಸುದೇವಮೂರ್ತಿ ಅವರಿಗೆ ಇಲ್ಲಿ ವ್ಯಕ್ತಿಪೂಜೆ ಕಂಡದ್ದು ಆಶ್ಚರ್ಯ. ಅವರ ಬರಹ ಅನೇಕ ಕಡೆ ಗೊಂದಲದಿಂದ ಕೂಡಿದೆ. ಅವರೂ ಕಿ.ರಂ. ಶಿಷ್ಯರೇ. ಇದು, ಪೂರ್ವಗ್ರಹ ಪೀಡಿತ ಬರಹ ಅಲ್ಲದಿದ್ದರೆ, ಕಿ.ರಂ. ಶಿಷ್ಯರ ಉಪಯುಕ್ತ ಕೆಲಸವನ್ನು ಅವರು ಮೆಚ್ಚಬಹುದಿತ್ತು. ರಚನಾತ್ಮಕ ಟೀಕೆಗೆ ನಮ್ಮ ಸ್ವಾಗತವೂ ಇದೆ.

-ಆರ್‌.ಜಿ. ಹಳ್ಳಿ ನಾಗರಾಜ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.