ದಿನಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಸುದ್ದಿಯೊಂದು ಸರ್ಕಾರಿ ಅಧಿಕಾರಿಯೊಬ್ಬರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ. ದೀರ್ಘಕಾಲದಿಂದ ಗೈರುಹಾಜರಾಗಿದ್ದ ಕಾರಣಕ್ಕೆ ವಜಾಗೊಂಡಿದ್ದ ಚಾಲಕರೊಬ್ಬರನ್ನು, ಅವರ ಪುಟಾಣಿ ಮಗಳು ವಿವರಿಸಿದ ಮನೆಯ ಕಷ್ಟದ ಪರಿಸ್ಥಿತಿ ಕೇಳಿ ಮನಕರಗಿದಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಕೆಲಸಕ್ಕೆ ಪುನರ್ನೇಮಕ ಮಾಡಿಕೊಂಡಿದ್ದಾರೆ. ಅವರ ಈ ನಡೆ ಶ್ಲಾಘನೀಯ.
ನೌಕರನ ಅಶಿಸ್ತನ್ನು ಮಾನವೀಯ ದೃಷ್ಟಿಯಿಂದ ಕ್ಷಮಿಸಿ, ಅವರನ್ನು ಮರುನೇಮಕ ಮಾಡಿದ್ದು ಸರ್ಕಾರಿ ಅಧಿಕಾರಿಗಳು ಹೇಗೆ ಪರಿಸ್ಥಿತಿಗೆ ತಕ್ಕಂತೆ ತಮ್ಮ ವಿವೇಚನಾ ಶಕ್ತಿಯನ್ನು ಬಳಸಿ, ಕ್ಷಮಾದಾನಕ್ಕೆ ಅನುವು ಮಾಡಿಕೊಡಬಹುದು ಎಂಬುದಕ್ಕೆ ನಿದರ್ಶನವಾಗಿದೆ. ವಜಾದಂತಹ ಕಠಿಣ ಕ್ರಮ ಎಲ್ಲ ಸಂದರ್ಭದಲ್ಲೂ ಸಮರ್ಥನೀಯವಲ್ಲ ಎಂದು ಮನಗಂಡು ತಮ್ಮ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡ ಅಧಿಕಾರಿಯ ನಡೆ ಮೆಚ್ಚುವಂತಹುದು. ಅಧಿಕಾರದ ಬಲದಿಂದ ಅಧೀನ ಸರ್ಕಾರಿ ನೌಕರರನ್ನು ವಿನಾಕಾರಣ ದಮನ ಮಾಡುವ ಮೇಲಧಿಕಾರಿಗಳು ಈ ಪ್ರಕರಣವನ್ನು ನೋಡಿಯಾದರೂ ಕಣ್ತೆರೆಯಲಿ.
- ಬಿ.ಕೆ.ಮಂಜುನಾಥ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.