ಕಾವೇರಿ ವನ್ಯಧಾಮದಲ್ಲಿ ತೋಳವೊಂದು ಕ್ಯಾಮೆರಾ ಟ್ರ್ಯಾಪ್ನಲ್ಲಿ ಪತ್ತೆಯಾಗಿರುವುದು (ವಾ.ವಾ., ಮೇ 10) ಆಶಾದಾಯಕ ಸುದ್ದಿ. ಲಾಕ್ಡೌನ್ ದೆಸೆಯಿಂದ ಮನುಷ್ಯನ ಓಡಾಟದ ಗದ್ದಲವಿಲ್ಲದೆ ಅನೇಕ ಪ್ರಾಣಿ– ಪಕ್ಷಿಗಳು ನಿರ್ಭಯವಾಗಿ ಓಡಾಡುತ್ತಿವೆ.
ನಾವು ಬಾಲ್ಯದಲ್ಲಿದ್ದಾಗ ಹೊಲಗಳಲ್ಲಿ ಹಿರಿಯರು ಕೆಲಸ ಮಾಡುವ ವೇಳೆ ತೋಳ, ಕಪ್ಪಲು ನರಿಗಳು ಸದ್ದಿಲ್ಲದೆ ಬಂದು ಮೇಕೆ-ಕುರಿ-ಕೋಳಿಗಳನ್ನು ಲಪಟಾಯಿಸುತ್ತಿದ್ದದ್ದು ಸಾಮಾನ್ಯ ಸಂಗತಿಯಾಗಿತ್ತು. ಆ ಪ್ರಾಣಿಗಳೇನಾದರೂ ಗಾಬರಿಯಿಂದ ಸದ್ದು ಮಾಡಿದರೆ ಮನೆಯವರು, ಆಳುಗಳೆಲ್ಲ ಒಟ್ಟಾಗಿ ಕಿರುಚುತ್ತಾ ಅವುಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದದ್ದು ಈಗ ನೆನಪು ಮಾತ್ರ. ಬೇಟೆ ತಪ್ಪಿದ ದಿನ ರಾತ್ರಿಯ ವೇಳೆಯಲ್ಲಿ ಬಂದು ತೋಟದ ಮನೆಯ ಸುತ್ತ ಹೊಂಚು ಹಾಕಿ ಹೋಗಿದ್ದನ್ನು, ಬೆಳಿಗ್ಗೆ ಎದ್ದಾಗ ಹಿರಿಯರು ಅವುಗಳ ಹೆಜ್ಜೆ ಗುರುತುಗಳನ್ನು ತೋರಿಸಿ ಹೇಳುತ್ತಿದ್ದರು.
ಈಗ ಹೆಚ್ಚಿನ ಹೊಲಗಳು ಮಾಯ, ತೋಟಗಳು ಮಾಯ, ತೋಳ- ನರಿಗಳೂ ಮಾಯ. ಹಲವೆಡೆ ನೀಲಗಿರಿಯೆಂಬ ವಿಷವೃಕ್ಷದ ತೋಪುಗಳು ಜೀವವೈವಿಧ್ಯವನ್ನೆಲ್ಲಾ ಹಾಳು ಮಾಡಿ, ಭೂಮಿಯನ್ನು ಬರಡು ಮಾಡಿ ನಾಗರಿಕ ಜಗತ್ತನ್ನು ಅಣಕಿಸುತ್ತಿವೆ.⇒ಮಣ್ಣೆ ಮೋಹನ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.