ವಾಚಕರ ವಾಣಿ
‘ಚೈತ್ರದ ಕವಿ’ಯ ಸಮಗ್ರ ಮರುಮುದ್ರಿಸಿ
2009ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕವಿ ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಸಾಹಿತ್ಯವನ್ನು ಒಂಬತ್ತು ಸಂಪುಟಗಳಲ್ಲಿ ಪ್ರಕಟಿಸಿದೆ. ಕವಿಯ ಜನ್ಮ ಶತಮಾನೋತ್ಸವದ ನಿಮಿತ್ತ ಸಮಗ್ರ ಸಂಪುಟವನ್ನು ಮರುಮುದ್ರಿಸಬೇಕಿದೆ. ಜಿಎಸ್ಎಸ್ ಕಾವ್ಯ, ವಿಚಾರ, ವಿಮರ್ಶೆ ಎಷ್ಟು ಪ್ರಸ್ತುತ ಎಂಬುದನ್ನು ಚರ್ಚೆಗೊಳ ಪಡಿಸಬೇಕು. ಜಿಎಸ್ಎಸ್ ಪ್ರತಿಷ್ಠಾನಕ್ಕೆ ಸದಸ್ಯರ ನೇಮಕದಲ್ಲಿ ರಾಜ್ಯದ ಇತರೆ ಭಾಗದ ಸಾಹಿತ್ಯ ಚಿಂತಕರನ್ನು ಕಡೆಗಣಿಸಲಾಗಿದೆ. ಪ್ರತಿಷ್ಠಾನ ಕೇವಲ ಹಿರಿಯ ಸಾಹಿತಿಗಳಿಗೆ ಸೀಮಿತವಾಗಿದ್ದು, ಕಿರಿಯರನ್ನು ನಿರ್ಲಕ್ಷಿಸಲಾಗಿದೆ. ಪ್ರತಿಷ್ಠಾನದ ದಿಕ್ಕುದೆಸೆಗಳಿಗೆ ಹಿರಿಯರ ಅನುಭವದ ಜೊತೆಗೆ, ಕಿರಿಯರ ಉತ್ಸಾಹವೂ ಒಗ್ಗೂಡ ಬೇಕಲ್ಲವೆ?
– ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ
***
ಸ್ವಾಸ್ಥ್ಯಕ್ಕಿಂತ ಮಿಗಿಲಾದ ಪ್ರಚಾರ ಉಂಟೆ?
ರಾಜ್ಯದಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಸರ್ಕಾರಿ ಬಸ್ಗಳ ಮೇಲೆ ಅಂಟಿಸಿರುವ ಪಾನ್ಮಸಾಲ ಮತ್ತು ಗುಟ್ಕಾ ಜಾಹೀರಾತು ತೆರವುಗೊಳಿಸುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬೆಳವಣಿಗೆ ಶ್ಲಾಘನೀಯ; ಸಮಾಜದ ಆರೋಗ್ಯ ಮತ್ತು ಮೌಲ್ಯಗಳ ರಕ್ಷಣೆಯತ್ತ ಯುವಜನ ಸಾಗುವ ಜಾಗೃತಿಯ ಸಂಕೇತ. ಸರ್ಕಾರಿ ಬಸ್ಗಳು ಸಾರ್ವಜನಿಕರ ಪ್ರಯಾಣದ ಅವಿಭಾಜ್ಯ ಅಂಗ. ಇವುಗಳ ಮೇಲೆ ಹಾನಿಕಾರಕ ಪದಾರ್ಥಗಳ ಜಾಹೀರಾತು ಕಾಣಿಸಿಕೊಳ್ಳುವುದು ಯುವಜನತೆಗೆ ತಪ್ಪುಸಂದೇಶ ನೀಡುತ್ತದೆ. ಪಾನ್ಮಸಾಲ ಮತ್ತು ಗುಟ್ಕಾ ಸೇವನೆಯಿಂದ ಉಂಟಾಗುವ ಆರೋಗ್ಯ ಹಾನಿಗಳು ಎಲ್ಲರಿಗೂ ತಿಳಿದಿರುವ ವಿಷಯ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಗಳು ಬಸ್ಗಳ ಮೇಲೆ ಸಮಾಜಕ್ಕೆ ತಪ್ಪುಸಂದೇಶ ನೀಡುವಂತಹ ಜಾಹೀರಾತು ಪ್ರಕಟಿಸದಂತೆ ಎಚ್ಚರವಹಿಸಬೇಕಿದೆ.
– ಪ್ರವೀಣ ನಾಗಪ್ಪ ಯಲವಿಗಿ, ಮುಂಡಗೋಡ
***
‘ನಮ್ಮ ಮೆಟ್ರೊ’ದ ಹಕ್ಕು ಮತ್ತು ಬಾಧ್ಯತೆ
‘ನಮ್ಮ ಮೆಟ್ರೊ’ ಸೇವೆಯು ಬಿಎಂಆರ್ಸಿಎಲ್ನ ಜೇಬು ತುಂಬಿಸುವುದಕ್ಕೆ ಸೀಮಿತ ಆಗಿದೆ. ಪ್ರಯಾಣಿಕರ ಹಿತವನ್ನು ಮರೆತಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆ ಯೊಂದು ಲಾಭವನ್ನೇ ಸೇವೆಯ ಧ್ಯೇಯವಾಗಿ ಹೊಂದಿರುವುದು ದುರದೃಷ್ಟಕರ. ಜನರ ಅಸಹಾಯಕತೆಯೇ ಈ ಸಂಸ್ಥೆಗೆ ಬಂಡವಾಳ. ಹೀಗಿದ್ದಾಗ ಪ್ರಯಾಣಿಕರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವೇ? ಬೆಂಗಳೂರಿನ ರಸ್ತೆಗಳ ದಯನೀಯ ಪರಿಸ್ಥಿತಿಗೆ ‘ನಮ್ಮ ಮೆಟ್ರೊ’ ಕಾಮಗಾರಿ ಮುಖ್ಯ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಆದರೆ, ತಮ್ಮಿಂದ ಮಾತ್ರ ತ್ವರಿತಗತಿ ಪ್ರಯಾಣ ಸಾಧ್ಯ ಎಂದು ಬೀಗುವುದು ಕುಚೋದ್ಯ. ಬಿಎಂಆರ್ಸಿಎಲ್ ತನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ಕುಂಟುನೆಪ ಹೇಳುವುದನ್ನು ರಾಜ್ಯ ಸರ್ಕಾರ ಬಿಡಬೇಕು. ಪ್ರಯಾಣಿಕಸ್ನೇಹಿ ಅಲ್ಲದ ಅಧಿಕಾರಿ ಗಳನ್ನು ಅಲ್ಲಿಂದ ಎತ್ತಂಗಡಿ ಮಾಡಲಿ; ಇಲ್ಲವೇ ಮೆಟ್ರೊವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿ.
– ಶ್ರೀಕಂಠ, ಬೆಂಗಳೂರು
***
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು?
ಪ್ರಸ್ತುತ ಭ್ರಷ್ಟಾಚಾರವು ಎಲ್ಲಾ ರಾಜಕೀಯ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ವಾಗಿದೆ. ಅದರ ನಿರ್ಮೂಲನೆ ಬಗ್ಗೆ ಯಾರೊಬ್ಬರಿಗೂ ಕಾಳಜಿ ಇಲ್ಲ. ಮತ್ತೊಂದೆಡೆ, ಸದನದಲ್ಲಿ ಶಾಸಕರು ಕೈಮಿಲಾಯಿಸುವ ಹಂತಕ್ಕಿಳಿದಿರುವುದು ವಿಪರ್ಯಾಸ. ಚಿಂತನೆಗಳು, ಅರ್ಥಪೂರ್ಣ ಚರ್ಚೆಗಳು ಮಾಯವಾಗಿವೆ. ವಿರೋಧಿಸುವುದೇ ತಮ್ಮ ಕೆಲಸವೆಂದು ವಿಪಕ್ಷಗಳು ಭಾವಿಸಿವೆ. ಗಿರಿರಾಜ ಕೋಳಿಯನ್ನು ಪಕ್ಷದ ಯಾವ ಕಾರ್ಯಕರ್ತರಿಗೆ ನೀಡಬೇಕು, ಕಾಮಗಾರಿಯ ಗುತ್ತಿಗೆಯನ್ನು ಯಾರಿಗೆ ನೀಡಬೇಕು, ಯಾವ ಅಧಿಕಾರಿಯನ್ನು ತನ್ನ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳ ಬೇಕು, ತನ್ನ ಜಾತಿಯವರಿಗೆ ಯಾವ ಹುದ್ದೆ ನೀಡಬೇಕು, ಕಾರ್ಯಕ್ರಮದ ವೇದಿಕೆ ಮೇಲೆ ಯಾರು ಇರಬೇಕು; ಯಾರು ಇರಬಾರದು – ಇಂತಹ ಸ್ವಾರ್ಥದಲ್ಲೇ ಜನಪ್ರತಿನಿಧಿಗಳು ಮುಳುಗಿದ್ದಾರೆ. ಸರ್ಕಾರಿ ಅಧಿಕಾರಿಗಳು ವಶೀಲಿಬಾಜಿಯಲ್ಲಿ ತೊಡಗಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು?
– ಗೋವಿಂದ್ ಎಸ್. ಭಟ್, ಶಿರಸಿ
***
ಚಿರತೆ ಹಾವಳಿ ತಡೆಗೆ ಸರ್ಕಾರದ ನಿರ್ಲಕ್ಷ್ಯ
ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬನಶಂಕರಿ ಆರನೇ ಹಂತದ ಎರಡನೇ ಬಡಾವಣೆಯಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಈ ಬಡಾವಣೆಯ ನಿವಾಸಿಗಳು ಆತಂಕದಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ. ಸ್ಥಳೀಯರ ಆತಂಕ ನಿವಾರಿಸುವಂತೆ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘವು ಶಾಸಕರಿಗೆ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿದೆ. ಆದರೆ, ಪ್ರತಿಸ್ಪಂದನ ಶೂನ್ಯ. ಚಿರತೆ ಸೆರೆಗೆ ಬೋನು ಅಳವಡಿಸದಿರುವುದು ಆಶ್ಚರ್ಯದ ಸಂಗತಿ. ಅಮಾಯಕರ ಮೇಲೆ ಚಿರತೆ ದಾಳಿ ಮಾಡಿ ಸಾವು–ನೋವು ಸಂಭವಿಸಿದಾಗ ಇಲಾಖೆಯು ಎಚ್ಚತ್ತುಕೊಳ್ಳುವುದರಲ್ಲಿ ಅರ್ಥವಿಲ್ಲ.
– ಗೋಪಿ ರಾವ್, ಬೆಂಗಳೂರು