ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಅಂತ್ಯಸಂಸ್ಕಾರ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆಯ ಅಡಿಯಲ್ಲಿ ಕೆಲಸದ ವೇಳೆ ಕಾರ್ಮಿಕರು ಆಕಾಲಿಕವಾಗಿ ಸಾವಿಗೆ ತುತ್ತಾದರೆ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಮತ್ತು ಪರಿಹಾರ ಧನವನ್ನು ನೀಡಲಾಗುತ್ತದೆ. ಈ ಯೋಜನೆಯಿಂದ ಸಿಗುವ ಲಾಭಗಳೇನು? ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
ರಾಜ್ಯ ಸರ್ಕಾರವು ಹೇಳಿರುವಂತೆ 2025ರ ಜುಲೈ 16ರ ನಂತರ ಮೃತಪಟ್ಟ ಕಾರ್ಮಿಕರ ಅಂತ್ಯಕ್ರಿಯೆಗೆ ₹4 ಸಾವಿರ ಹಾಗೂ ಪರಿಹಾರ ಧನ ₹1.46 ಲಕ್ಷ ಸೇರಿದಂತೆ ಆ ಕುಟುಂಬಕ್ಕೆ ಒಟ್ಟು ₹1.50 ಲಕ್ಷ ಸಿಗಲಿದೆ. ಒಂದು ವೇಳೆ ಕಾರ್ಮಿಕನ ಮರಣವು ಮೇಲೆ ತಿಳಿಸಿದ ದಿನಾಂಕಕ್ಕಿಂತ ಮೊದಲು ಸಂಭವಿಸಿದ್ದರೆ ಪರಿಹಾರದ ಹಣ ₹75 ಸಾವಿರ ದೊರೆಯಲಿದೆ.
ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು?
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು.
ಮೃತ ಕಾರ್ಮಿಕ ಯಾರ ಹೆಸರನ್ನು ನಾಮಿನಿಯಾಗಿ ನೀಡಿರುತ್ತಾರೋ ಅವರು ಈ ಸೌಲಭ್ಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಕಾರ್ಮಿಕನ ಮರಣ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಮರಣದ ಸಮಯದಲ್ಲಿ ಅವರ ನೋಂದಣಿಯು ಸಕ್ರಿಯವಾಗಿರಬೇಕು.
ಕಾರ್ಮಿಕನು 2025ರ ಜುಲೈ 16ರ ನಂತರದಲ್ಲಿ ಮೃತ ಹೊಂದಿದ್ದರೆ ಪರಿಷ್ಕೃತ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಈ ಹಿಂದಿನ ದಿನಾಂಕಗಳಲ್ಲಿ ಮರಣ ಹೊಂದಿದಲ್ಲಿ ಅರ್ಜಿದಾರರು ಹಳೆಯ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅಗತ್ಯವಿರುವ ದಾಖಲೆಗಳು ಯಾವುವು?
ಉದ್ಯೋಗದಾತರ ಪ್ರಮಾಣಪತ್ರ
ಬ್ಯಾಂಕ್ ಖಾತೆ ಪುಸ್ತಕ (ಫಲಾನುಭವಿ ಅಥವಾ ನಾಮಿನಿಯದ್ದು).
ರೇಷನ್ ಕಾರ್ಡ್
ಕಾರ್ಮಿಕ ಗುರುತಿನ ಚೀಟಿ.
ಆಧಾರ್ ಕಾರ್ಡ್
ಮರಣ ಪ್ರಮಾಣಪತ್ರ.
ಭಾವಚಿತ್ರ
ಉದ್ಯೋಗ ಪ್ರಮಾಣಪತ್ರ
ನೋಂದಣಿ ಹೇಗೆ?
‘KBOCWWB‘ ಅಧಿಕೃತ ಅಂತರ್ಜಾಲ ತಾಣ https://kbocwwb.karnataka.gov.in/login ಗೆ ಭೇಟಿ ನೀಡಬೇಕು. ಬಳಿಕ ’ನೋಂದಣಿ’ಯನ್ನು ಆಯ್ಕೆ ಮಾಡಿ.
ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ, OTP ಮೂಲಕ ಪರಿಶೀಲನೆ ಪಡೆದುಕೊಳ್ಳಿ.
ನಂತರ ’ನೋಂದಣಿ’ ಆಯ್ಕೆ ಮಾಡಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿದರೆ ನೋಂದಾಣಿಯಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
ಅರ್ಜಿದಾರನು ಫಾರ್ಮ್ ಹದಿನೆಂಟು ಅನ್ನು ಭರ್ತಿ ಮಾಡಿ ಇಲಾಖೆಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಮೃತರ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಗುರುತಿನ ಚೀಟಿ ಅಥವಾ ಕಾರ್ಮಿಕರ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
ಈ ಸೌಲಭ್ಯವನ್ನು ಮೃತರಾದ ಸಮಯದಿಂದ 1 ವರ್ಷದವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.