ನವದೆಹಲಿ: ಇಂಗ್ಲೆಂಡ್ನ ಹಿರಿಯ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೊರೊನಾ ಸೋಂಕು ಕುರಿತು ಭಾರತದಲ್ಲಿ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ‘ಪ್ರತ್ಯೇಕವಾಸ’ದ ಕುರಿತು ಸರ್ಕಾರ ನೀಡಿರುವ ನಿರ್ದೇಶನಗಳನ್ನು ಪಾಲಿಸುವಂತೆ ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಸಹ ಆಟಗಾರನಾಗಿದ್ದ ಶ್ರೀವತ್ಸ ಗೋಸ್ವಾಮಿ ನೆರವಿನೊಂದಿಗೆ ಪೀಟರ್ಸನ್, ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
‘ಭಾರತಕ್ಕೆ ಶುಭಾಶಯಗಳು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರು ಒಂದುಗೂಡಿದ್ದಾರೆ. ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು. ಕೆಲವು ದಿನಗಳ ಕಾಲ ಮನೆಯಲ್ಲೇ ಇರಿ. ಇದು ಜಾಣರಾಗುವ ಸಮಯ’ ಎಂದು 39 ವರ್ಷದ ಆಟಗಾರ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ತನಗೆ ಹಿಂದಿ ಕಲಿಸಿದ ಶ್ರೇಯವು ವಿಕೆಟ್ ಕೀಪರ್ ಬ್ಯಾಟ್ಸಮನ್ ಗೋಸ್ವಾಮಿಗೆ ಸಲ್ಲಬೇಕು ಎಂದು ಪೀಟರಸನ್ ಹೇಳಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಇವರಿಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದರು.
ಈ ತಿಂಗಳ ಆರಂಭದಲ್ಲಿ ಘೇಂಡಾ ಮೃಗಗಳ ಸಂರಕ್ಷಣೆಯ ಕುರಿತು ಸಾಕ್ಷ್ಯಚಿತ್ರದ ಶೂಟಿಂಗ್ಗಾಗಿಪೀಟರ್ಸನ್, ಅಸ್ಸಾಂನಲ್ಲಿರುವ ಕಾಜೀರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿಕೊಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.