ಢಾಕ: ವಿಶ್ವಕಪ್ಗಾಗಿ ಮಶ್ರಫೆ ಮೊರ್ತಜಾ ನಾಯಕತ್ವದಲ್ಲಿ 15 ಜನರ ತಂಡವನ್ನುಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಮಂಗಳವಾರ ಪ್ರಕಟಿಸಿದೆ.
ಹಿಂದಿನವಿಶ್ವಕಪ್ನಲ್ಲಿ ಆಡಿದ್ದಆಲ್ರೌಂಡರ್ ಶಕೀಬ್ ಅಲ್ ಹಸನ್, ಮೊರ್ತಜಾ, ತಮೀಮ್ ಇಕ್ಬಾಲ್ ಮತ್ತು ಮುಶ್ಫಿಕರ್ ರಹೀಂ ಅವರೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವಮೊಹಮ್ಮದುಲ್ಲ ರಿಯಾದ್ ಅವರನ್ನೂ ಆಯ್ಕೆ ಸಮಿತಿ ಪರಿಗಣಿಸಿದ್ದು ವಿಶ್ವಕಪ್ ವೇಳೆಗೆ ಗುಣಮುಖರಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ 428 ರನ್ ಗಳಿಸಿ, 12 ವಿಕೆಟ್ ಪಡೆದಿದ್ದ ಆಲ್ರೌಂಡರ್ ಮೊಸಾಡೆಕ್ ಹುಸೇನ್ ಅವರಿಗೂ ಸ್ಥಾನ ನೀಡಲಾಗಿದೆ.ಗಾಯಗೊಂಡಿರುವ ತಸ್ಕಿನ್ ಅಹ್ಮದ್ ಬದಲು ದೇಶಿ ಕ್ರಿಕೆಟ್ನಲ್ಲಿ ಸಾಧನೆ ಮಾಡಿರುವ ಅಬು ಜಾಯೇದ್ಗೆ ಅವಕಾಶ ನೀಡಲಾಗಿದೆ.
ಈ ವರ್ಷದ ಆರಂಭದಿಂದಲೂ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಬಹುತೇಕ ಆಟಗಾರರು ಚೇತರಿಸಿಕೊಂಡಿದ್ದು, ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವರು ಎಂದುಆಯ್ಕೆ ಸಮಿತಿ ಮುಖ್ಯಸ್ಥ ಮಿನ್ಹಜುಲ್ ಅಬೆದಿನ್ ಹೇಳಿದ್ದಾರೆ.
ವಿಶ್ವಕಪ್ಗೂ ಮೊದಲು ಐರ್ಲೆಂಡ್ನಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾಗವಹಿಸಲಿದ್ದು,ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಎದುರು ಸೆಣಸಲಿದೆ. ಇದಕ್ಕಾಗಿ 17 ಜನರ ತಂಡ ರಚಿಸಲಾಗಿದೆ.
ವಿಶ್ವಕಪ್ ತಂಡ: ಮಶ್ರಫೆ ಮೊರ್ತಜಾ (ನಾಯಕ), ತಮೀಮ್ ಇಕ್ಬಾಲ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮೊಹಮ್ಮದುಲ್ಲ ರಿಯಾದ್, ಶಕೀಬ್ ಅಲ್ ಹಸನ್, ಮೊಹಮದ್ ಮಿಥುನ್, ಶಬೀರ್ ರೆಹಮಾನ್, ಮೊಸಾಡೆಕ್ ಹುಸೇನ್, ಮೊಹಮ್ಮದ್ ಸೈಫುದ್ದೀನ್, ಮೆಹದಿ ಹಸನ್, ರುಬೆಲ್ ಹುಸೇನ್, ಮುಸ್ತಾಫಿಜುರ್ ರೆಹಮಾನ್, ಅಬು ಜಾಯೆದ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.