ಕರಾಚಿ: ‘ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಸಿ ಅದರಿಂದ ಬರುವ ಆದಾಯವನ್ನು ಎರಡೂ ದೇಶಗಳ ಕೋವಿಡ್–19 ಪರಿಹಾರ ನಿಧಿಗೆ ಸಮನಾಗಿ ನೀಡಬೇಕೆಂದು ಶೋಯಬ್ ಅಖ್ತರ್ ನೀಡಿದ್ದ ಸಲಹೆಗೆ ಭಾರತದ ಹಿರಿಯ ಆಟಗಾರ ಕಪಿಲ್ ದೇವ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದನ್ನು ಕೇಳಿ ಅಚ್ಚರಿಯ ಜೊತೆಗೆ ಬೇಸರವೂ ಆಯಿತು’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹಿದ್ ಅಫ್ರಿದಿ ನುಡಿದಿದ್ದಾರೆ.
‘ಕೊರೊನಾ ವೈರಾಣುವಿನಿಂದಇಡೀ ಜಗತ್ತೇ ನರಳುತ್ತಿದೆ. ಇಂತಹ ಸಮಯದಲ್ಲಿ ನಾವೆಲ್ಲಾ ಏಕತೆಯನ್ನು ಪ್ರದರ್ಶಿಸಬೇಕು. ಶೋಯಬ್ ಹೇಳಿದ್ದರಲ್ಲಿ ನನಗೇನೂ ತಪ್ಪು ಕಾಣಲಿಲ್ಲ. ನಮಗೆ ಹಣದ ಅವಶ್ಯಕತೆಯಿಲ್ಲ. ಕೋವಿಡ್ ಪರಿಹಾರ ನಿಧಿಗೆ ಬಿಸಿಸಿಐ ₹51 ಕೋಟಿ ಕೊಟ್ಟಿದೆ. ಅಗತ್ಯಬಿದ್ದರೆ ಇನ್ನಷ್ಟು ಹಣ ನೀಡುವ ಸಾಮರ್ಥ್ಯ ಮಂಡಳಿಗಿದೆ ಎಂದು ಕಪಿಲ್ ಹೇಳಿದ್ದು ಎಳ್ಳಷ್ಟು ಸರಿಯಲ್ಲ. ಅವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಅವರು ಪ್ರಬುದ್ಧತೆಯಿಂದ ಮಾತನಾಡಬೇಕಿತ್ತು’ ಎಂದು ಶಾಹಿದ್ ಹೇಳಿದ್ದಾರೆ.
‘ಕ್ರೀಡೆಯು ಬಾಂಧವ್ಯ ಬೆಸೆಯುವ ಸೇತುವೆಯಾಗಿದೆ. ನನ್ನ ಒಡೆತನದ ಸ್ವಯಂ ಸೇವಾ ಸಂಸ್ಥೆಗೆ ನೆರವು ನೀಡುವಂತೆ ಭಾರತದ ಯುವರಾಜ್ ಸಿಂಗ್ ಮತ್ತು ಹರಭಜನ್ ಸಿಂಗ್ ಅವರು ಮನವಿ ಮಾಡಿದ್ದರು. ಅದಕ್ಕಾಗಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದು ಎಳ್ಳಷ್ಟು ಸರಿಯಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.