ADVERTISEMENT

ಟಾಸ್‌ನಿಂದ ಟ್ರೋಫಿಯವರೆಗೆ; ಏಷ್ಯಾ ಕಪ್‌ ಫೈನಲ್‌ನಲ್ಲಿ ನಡೆದ ಹೈಡ್ರಾಮಗಳಿವು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2025, 6:30 IST
Last Updated 29 ಸೆಪ್ಟೆಂಬರ್ 2025, 6:30 IST
   

ದುಬೈ: ಭಾರತ ಮತ್ತು ಪಾಕಿಸ್ತಾನ ನಡುವೆ ಭಾನುವಾರ(ಸೆ.28) ನಡೆದ ಏಷ್ಯಾ ಕಪ್‌ 17ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ 9ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಆಪರೇಷನ್‌ ಸಿಂಧೂರ ನಂತರ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಉಲ್ವಣಗೊಂಡಿತ್ತು. ಕ್ರಿಕೆಟ್‌ ಅಂಗಳದಲ್ಲೂ ಇದು ಕಾಣಿಸಿಕೊಂಡಿತ್ತು. ಲೀಗ್‌ ಪಂದ್ಯದ ವೇಳೆ ಭಾರತದ ಆಟಗಾರರು ಪಾಕ್‌ ಆಟಗಾರರೊಂದಿಗೆ ಹಸ್ತಲಾಘವಕ್ಕೆ ನಿರಾಕರಿಸಿದ್ದರು. ಸೂಪರ್‌ –4 ಪಂದ್ಯದಲ್ಲಿ ಪಾಕ್‌ ಆಟಗಾರರು ಮಾಡಿದ ಅನುಚಿತ ವರ್ತನೆಯು ಭಾರತೀಯರನ್ನು ಕೆರಳಿಸಿತ್ತು. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕ್ರಿಕೆಟ್‌ ಅಂಗಳದ ನಾಟಕೀಯ ಬೆಳವಣಿಗೆಗಳಿಗೆ ಏಷ್ಯಾ ಕಪ್‌ ಫೈನಲ್‌ ಪಂದ್ಯ ಕೂಡ ಸಾಕ್ಷಿಯಾಯಿತು.

ಪಂದ್ಯದ ಟಾಸ್‌ನಿಂದ ಪ್ರಶಸ್ತಿ ಸ್ವೀಕಾರ ಸಮಾರಂಭದವರೆಗೆ ಉಭಯ ತಂಡಗಳು ಹಲವು ಹೈಡ್ರಾಮಗಳಿಗೆ ಕಾರಣವಾದವು.

ADVERTISEMENT

ಟಾಸ್‌ ವೇಳೆ ಭಾರತ – ಪಾಕ್‌ ನಾಯಕರ ಜೊತೆ ಉಭಯ ದೇಶಗಳ ವೀಕ್ಷಕ ವಿವರಣೆಗಾರ

ಏಷ್ಯಾ ಕಪ್‌ ಫೈನಲ್‌ ಪಂದ್ಯವು ಕ್ರಿಕೆಟ್‌ ಇತಿಹಾಸದ ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಪಂದ್ಯದ ಟಾಸ್‌ ವೇಳೆ ಇಬ್ಬರು ವೀಕ್ಷಕ ವಿವರಣೆಗಾರರು ಕಾಣಿಸಿಕೊಂಡರು. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು(ಪಿಸಿಬಿ) ತಟಸ್ಥ ವೀಕ್ಷಕ ವಿವರಣೆಗಾರಬೇಕು ಎಂದು ಮನವಿ ಮಾಡಿದ್ದರಿಂದ, ಭಾರತದ ರವಿ ಶಾಸ್ತ್ರಿ ಹಾಗೂ ಪಾಕಿಸ್ತಾನದ ವಕಾರ್‌ ಯೂನಿಸ್‌ ಅವರಿಬ್ಬರೂ ಟಾಸ್‌ ವೇಳೆ ಬಂದಿದ್ದರು. ಪಾಕ್‌ ವಿರುದ್ಧದ ಕಳೆದೆರಡು ಪಂದ್ಯಗಳಲ್ಲಿ ರವಿ ಶಾಸ್ತ್ರಿ ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದರು.

ಟಾಸ್‌ ನಂತರ ರವಿ ಶಾಸ್ತ್ರಿ ಅವರ ಪ್ರಶ್ನೆಗೆ ಪಾಕ್‌ ನಾಯಕ ಸಲ್ಮಾನ್ ಅಲಿ ಅಘಾ ಅವರು ಉತ್ತಮ ನೀಡಲು ನಿರಾಕರಿಸಿದರು. ನಂತರ ವಕಾರ್‌ ಯೂನಿಸ್‌ ಅವರು ಪಾಕ್‌ ನಾಯಕನಿಗೆ ಪ್ರಶ್ನೆಗಳನ್ನು ಕೇಳಿದರು. ಫೈನಲ್‌ ಪಂದ್ಯದ ಟಾಸ್‌ ವೇಳೆಯೂ ಉಭಯ ತಂಡಗಳ ನಾಯಕರು ಹಸ್ತಲಾಘವ ಮಾಡಲಿಲ್ಲ.

ವಿಕೆಟ್‌ ಅಲ್ಲ ವಿಮಾನ ಉರುಳಿ ಬಿದ್ದಿದೆ.. ಪಾಕ್‌ ಆಟಗಾರನಿಗೆ ಬೂಮ್ರಾ ತಿರುಗೇಟು

ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್‌ –4 ಪಂದ್ಯದಲ್ಲಿ ಪಾಕ್‌ ವೇಗಿ ಹ್ಯಾರಿಸ್‌ ರವೂಫ್‌ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳೆಡೆ ವಿಮಾನ ಉರುಳಿ ಬೀಳುವಂತೆ ಸನ್ನೆ ಮಾಡಿದ್ದರು. ಅವರ ಅನುಚಿತ ವರ್ತನೆಗೆ ದಂಡವನ್ನು ಕೂಡ ವಿಧಿಸಲಾಗಿತ್ತು. ಫೈನಲ್‌ ಪಂದ್ಯದಲ್ಲಿ ಹ್ಯಾರಿಸ್‌ ರವೂಫ್‌ ಅವರನ್ನು ಯಾರ್ಕರ್‌ ಮೂಲಕ ಕ್ಲೀನ್‌ ಬೌಲ್ಡ್‌ ಮಾಡಿದ ಬೂಮ್ರಾ, ವಿಮಾನ ಉರುಳಿ ಬೀಳುವ ಸನ್ನೆಯ ಮೂಲಕವೇ ಸಂಭ್ರಮಾಚರಣೆ ಮಾಡುವ ಪಾಕ್‌ ಆಟಗಾರನಿಗೆ ತಿರುಗೇಟು ನೀಡಿದರು.

ರನ್ನರ್‌ಅಪ್‌ ಚೆಕ್‌ ಬಿಸಾಡಿದ ಪಾಕ್‌ ನಾಯಕ

ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಅವರು ಪಂದ್ಯದ ನಂತರದ ಕಾರ್ಯಕ್ರಮದಲ್ಲಿ ರನ್ನರ್‌ಅಪ್‌ ಚೆಕ್‌ ಪಡೆದುಕೊಂಡ ನಂತರ, ಅದನ್ನು ಬಿಸಾಡಿದ ಘಟನೆ ನಡೆಯಿತು. ಎಸಿಸಿ ಪರವಾಗಿ ಅಮಿನುಲ್ ಇಸ್ಲಾಂ ಅವರು ಪಾಕ್‌ ನಾಯಕನಿಗೆ ಚೆಕ್‌ ವಿತರಿಸಿದರು. ಆದರೆ, ಚೆಕ್‌ ಪಡೆದುಕೊಂಡು ವೇದಿಕೆಯಿಂದ ತೆರಳುವಾಗಲೇ ಪಾಕ್‌ ನಾಯಕ, ಚೆಕ್‌ ಅನ್ನು ತಿರಸ್ಕಾರದಿಂದ ಬಿಸಾಡಿದರು. ಇದನ್ನು ನೋಡುತ್ತಲೇ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ಒಮ್ಮೆಲೇ ಉದ್ಗಾರ ಮಾಡಿದರು.

ಪಂದ್ಯ ಗೆದ್ದರೂ, ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ

ಭಾರತ ತಂಡವು ಏಷ್ಯಾ ಕಪ್‌ನ ಫೈನಲ್‌ ಪಂದ್ಯದಲ್ಲಿ ಗೆದ್ದರು ಕೂಡ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತು. ಇದಕ್ಕೆ ಕಾರಣವಾಗಿದ್ದು, ಪ್ರಶಸ್ತಿ ವಿತರಿಸುತ್ತಿದ್ದ ಎಸಿಸಿ ಅಧ್ಯಕ್ಷ ಮೊಹಸೀನ್ ನಖ್ವಿ. ಪಾಕ್‌ ಸಚಿವ ಹಾಗೂ ಪಿಸಿಬಿ ಅಧ್ಯಕ್ಷರಾಗಿರುವ ನಖ್ವಿ, ಎಸಿಸಿ ಚುಕ್ಕಾಣಿಯನ್ನು ಕೂಡ ಹಿಡಿದಿದ್ದಾರೆ. ಭಾರತ ವಿರೋಧಿ ನಿಲುವನ್ನು ಹೊಂದಿರುವ ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಲು ಭಾರತೀಯ ಆಟಗಾರರು ನಿರಾಕರಿಸಿದರು. ಟ್ರೋಫಿಯನ್ನು ನಖ್ವಿ ಅವರೇ ತೆಗೆದುಕೊಂಡು ಹೋದರು. ಹಾಗಾಗಿ ಫೈನಲ್‌ ಪಂದ್ಯ ಗೆದ್ದರೂ, ಟ್ರೋಫಿ ಇಲ್ಲದೇ ಭಾರತವು ಸಂಭ್ರಮಾಚರಣೆ ನಡೆಸಬೇಕಾಯಿತು.

ಫೈನಲ್‌ ಬಳಿಕವೂ ಪಂದ್ಯದಲ್ಲಿನ ನಾಟಕೀಯ ಬೆಳವಣಿಗೆಗಳ ಕುರಿತು ಭಾರೀ ಚರ್ಚೆಗಳಾಗುತ್ತಿವೆ. ಪಂದ್ಯದ ವೇಳೆ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಉಭಯ ತಂಡಗಳ ಆಟಗಾರರ ಮೇಲೆ ದಂಡ ವಿಧಿಸುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.