ಟೀಮ್ ಇಂಡಿಯಾ
(ಚಿತ್ರ ಕೃಪೆ: X/@BCCI)
ದುಬೈ: ಪಾಕಿಸ್ತಾನ ಜೊತೆಗಿನ ದ್ವಿಪಕ್ಷೀಯ ಬಾಂಧವ್ಯ ಕಡಿದುಕೊಂಡಿರುವ ಹಿನ್ನೆಲೆಯಲ್ಲಿ ಆ ದೇಶದೊಂದಿಗೆ ಯಾವುದೇ ರೀತಿಯ ಕ್ರೀಡೆ ನಡೆಯಬಾರದು ಎಂಬ ಕೂಗು ಬಲವಾಗಿ ಕೇಳಿ ಬರುತ್ತಿವೆ.
ಈ ನಡುವೆ ಏಷ್ಯಾ ಕಪ್ ಟೂರ್ನಿಯಲ್ಲಿ ಸೆಪ್ಟೆಂಬರ್ 15ರಂದು ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಿಗದಿಯಾಗಿದೆ.
ಈ ಸಂಬಂಧ ಎದುರಾದ ಪ್ರಶ್ನೆಗಳಿಗೆ ಉತ್ತರಿಸಿರುವ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್, 'ಸರ್ಕಾರದ ನಿರ್ಧಾರಕ್ಕೆ ಬಿಸಿಸಿಐ ಸಹಮತ ಸೂಚಿಸಿರುವುದರಿಂದ ನಮ್ಮ ಗಮನ ಕ್ರಿಕೆಟ್ ಪಂದ್ಯದತ್ತ ಆಗಿದೆ' ಎಂದು ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ 'ಆಪರೇಷನ್ ಸಿಂಧೂರ' ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದ ಭಾರತ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ತದಾನಂತರ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು.
ಈ ಎಲ್ಲ ಘಟನೆಯ ಬಳಿಕ ಇದೇ ಮೊದಲ ಬಾರಿಗೆ ಇತ್ತಂಡಗಳು ಏಷ್ಯಾ ಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ.
'ಸರ್ಕಾರದ ನಿರ್ಧಾರಕ್ಕೆ ಬಿಸಿಸಿಐ ಬದ್ಧವಾಗಿದೆ. ಅಲ್ಲದೆ ನಮ್ಮ ಗಮನ ಪಂದ್ಯದ ಮೇಲೆ ಆಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಸದಾ ಪೈಪೋಟಿಯಿಂದ ಕೂಡಿರಲಿದ್ದು, ಆಸಕ್ತಿದಾಯಕವಾಗಿರುತ್ತದೆ' ಎಂದು ಹೇಳಿದ್ದಾರೆ.
'ಬಾಹ್ಯ ವಿಚಾರಗಳತ್ತ ಆಟಗಾರರು ಗಮನ ಕೊಡುತ್ತಿಲ್ಲ. ಪಂದ್ಯದ ಮೇಲೆ ಗಮನ ಹರಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.