ADVERTISEMENT

Asia Cup | ಬಲಿಷ್ಠ ಭಾರತದೆದುರು ಪಾಕ್‌ಗೆ ‘ಸತ್ವಪರೀಕ್ಷೆ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 23:40 IST
Last Updated 13 ಸೆಪ್ಟೆಂಬರ್ 2025, 23:40 IST
   

ುಬೈ: ಪಂದ್ಯ ಏಕಪಕ್ಷೀಯವಾಗಲಿ ಅಥವಾ ಹೋರಾಟದಿಂದ ಕೂಡಿರಲಿ, ಅತಿಯಾದ ಪ್ರಚಾರ ಇರಲಿ, ಇಲ್ಲದಿರಲಿ ಈ ಕಟ್ಟಾ ಎದುರಾಳಿಗಳ ಪಂದ್ಯ ಕುತೂಹಲಕ್ಕೆ ಕಾರಣವಾಗುತ್ತದೆ. ಹಿಂದೊಂದು ಕಾಲದಲ್ಲಿ ಇದ್ದಂತೆ ಈಗ ಎರಡೂ ತಂಡಗಳ ಶಕ್ತಿ ಒಂದೇ ಸಮ ಇಲ್ಲದಿರಬಹುದು, ಆದರೆ ಭಾರತ– ಪಾಕಿಸ್ತಾನ ನಡುವಣ ಸೆಣಸಾಟ ಪ್ರತಿ ಸಲ ಕ್ರಿಕೆಟ್‌ ಆಸಕ್ತರ  ಗಮನ ಸೆಳೆಯುತ್ತದೆ. 

ಶಾರ್ಜಾದ ಮರಳುಗಾಡು, ಈ ಎರಡು ತಂಡಗಳ ನಡುವಣ 1984ರ ಏಷ್ಯಾ ಕಪ್‌ನಿಂದ ಆರಂಭವಾಗಿ ಹಲವು ರೋಚಕ ಸೆಣಸಾಟಗಳಿಗೆ ಸಾಕ್ಷಿಯಾಗಿದೆ. ಕಿಕ್ಕಿರಿದ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯಗಳು ಸಂಚಲನ ಮೂಡಿಸುತ್ತಿದ್ದವು. ಎದೆಬಡಿತ ಹೆಚ್ಚಿಸುವಂತೆ ಅಲ್ಪ  ಅಂತರದಲ್ಲಿ ಫಲಿತಾಂಶಗಳು ನಿರ್ಧಾರವಾಗುತ್ತಿದ್ದವು. ಜಾವೆದ್‌ ಮಿಯಾಂದಾದ್‌ 1986ರ ಆಸ್ಟ್ರೇಲೇಷ್ಯಾ ಕಪ್‌ನಲ್ಲಿ ಚೇತನ್‌ ಶರ್ಮಾ ಅವರ ಕೊನೆಯ ಎಸೆತವನ್ನು ಸಿಕ್ಸರ್‌ಗಟ್ಟಿ ಪಾಕಿಸ್ತಾನಕ್ಕೆ ಜಯತಂದು ಕೊಟ್ಟಿದ್ದು ಅಚ್ಚಳಿಯದೇ ನೆನಪಿನಲ್ಲುಳಿಯುವ ಪಂದ್ಯ.

ಭಾರತ ತಂಡವು ಭಾನುವಾರ ಏಷ್ಯಾ ಕಪ್‌ ‘ಎ’ ಗುಂಪಿನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ಸಾಕಷ್ಟು ಮುಂದೆ ಸಾಗಿದೆ. 2009ರ ವಿಶ್ವ ಚಾಂಪಿಯನ್ ಪಾಕ್ ತಂಡ ಇದಕ್ಕೆ ಪ್ರತಿಕ್ರಿಯೆ ನೀಡಲು ಸಮಯ ತೆಗೆದುಕೊಂಡಿತು. ನ್ಯೂಜಿಲೆಂಡ್‌ನ ಮೈಕ್‌ ಹೆಸ್ಸನ್ ಹೆಡ್‌ ಕೋಚ್‌ ಅಗಿ ಹೊಣೆವಹಿಸಿಕೊಂಡ ಬಳಿಕ ಚುಟುಕು ಕ್ರಿಕೆಟ್‌ನ ದೃಷ್ಟಿಕೋನ ಬದಲಾಯಿಸಿದ್ದು, ತಂಡದಲ್ಲಿ ತೀವ್ರ ಬದಲಾವಣೆಗಳನ್ನು ತಂದಿದೆ.

ADVERTISEMENT

ಬಹು ತಂಡಗಳು ಪಾಲ್ಗೊಳ್ಳುವ ಯಾವುದೇ ಕ್ರಿಕೆಟ್‌ ಮೇಳವಿರಲಿ, ಭಾರತ– ಪಾಕಿಸ್ತಾನ ನಡುವಣ ಮುಖಾಮುಖಿ ಎಂದೆಂದೂ ಕುತೂಹಲದಿಂದ ನಿರೀಕ್ಷಿಸುವ ಪಂದ್ಯ ಎನಿಸುತ್ತದೆ. ಭಾನುವಾರದ ಸೆಣಸಾಟವೂ ಇದಕ್ಕೆ ಹೊರತಾಗಿಲ್ಲ. 

ಟೀಕಾಪ್ರಹಾರ:

ಏಪ್ರಿಲ್ 22ರ ಪಹಲ್ಗಾಮ್‌ ಹತ್ಯಾಕಾಂಡದ ನಂತರ ಮೊದಲ ಬಾರಿ ಈ ಎರಡು ತಂಡಗಳು ಎದುರಾಗಿವೆ. ಪಾಕಿಸ್ತಾನ ವಿರುದ್ಧ ಪಂದ್ಯ ಬಹಿಷ್ಕರಿಸದ ಕಾರಣ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ವಿವಿಧ ವಲಯಗಳಿಂದ ಟೀಕಾಪ್ರಹಾರಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ, ಸರ್ಕಾರದ ನೀತಿಯನ್ನು ಅನುಸರಿಸಿದೆ. ಖಂಡ ಮತ್ತು ಐಸಿಸಿ ಕೂಟಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಕೇಂದ್ರ ಹಸಿರು ನಿಶಾನೆ ತೋರಿದ್ದು, ದ್ವಿಪಕ್ಷೀಯ ಸರಣಿಗಳಿಗೆ ನಿಷೇಧ ಹೇರಿದೆ.

14 ತಿಂಗಳ ಹಿಂದೆ– ರೋಹಿತ್ ಶರ್ಮಾ ಮತ್ತು  ವಿರಾಟ್‌ ಕೊಹ್ಲಿ ಅವರು ಚುಟುಕು ಮಾದರಿಗೆ ವಿದಾಯ ಹೇಳಿದಾಗಲೇ ಭಾರತ ಟಿ20 ತಂಡದಲ್ಲಿ ಪರಿವರ್ತನೆಯ ಯುಗ ಆರಂಭವಾಗಿತ್ತು. ಪಾಕಿಸ್ತಾನ ಈಗ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಮಾಜಿ ನಾಯಕರು ಹಾಗೂ ಪ್ರಮುಖ ಬ್ಯಾಟರ್‌ಗಳಾದ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್‌ ಅವರನ್ನು ಹೊರಗಿಟ್ಟು ಸಲ್ಮಾನ್ ಆಘಾ ಅವರಿಗೆ ಕಪ್ತಾನ ಪಟ್ಟ ವಹಿಸಿದೆ. ಭರವಸೆಯ ಯುವಮುಖಗಳಿಗೆ ಮಣೆಹಾಕಿದೆ. ಭಾರತ ವಿರುದ್ಧದ 13 ಟಿ20 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಸೋತಿದ್ದ ತಂಡದ ಆಟಗಾರರಲ್ಲಿ ಬಹುತೇಕರು ಈಗ ಹೊರಗಿದ್ದಾರೆ.

ಪಾಕಿಸ್ತಾನ ತಂಡದ ಬಹುತೇಕ ಮಂದಿ ಇನ್ನೂ ಬೇರೂರುವ ಹಂತದಲ್ಲಿದ್ದಾರೆ. ಹೀಗಾಗಿ ಆ ತಂಡದ ಸಾಮರ್ಥ್ಯ ನಿಗೂಢವಾಗಿದೆ. ಆದರೆ ಭಾರತ ತಂಡವು ತನ್ನ ಆಟಗಾರರ ಸಾಮರ್ಥ್ಯದ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಎದುರಾಳಿಗಳ ಬಗ್ಗೆ ಚಿತ್ತಹರಿಸುವ ಬದಲು ತಮ್ಮಿಂದೇನು ಮಾಡಬಹುದು ಎಂಬುದರ ಕಡೆಗಷ್ಟೇ ಅವರು ಗಮನವಿಡುತ್ತಿದ್ದಾರೆ. ಭಾರತ ತನ್ನ ಪೂರ್ಣ ಸಾಮರ್ಥ್ಯದ ಸಮೀಪ ಆಡಿದರೂ, ಆ ತಂಡವನ್ನು ತಡೆದುನಿಲ್ಲಿಸುವುದು ಪಾಕಿಸ್ತಾನಕ್ಕೆ ವಾಸ್ತವದಲ್ಲಿ ಅಸಾಧ್ಯ. ಹೀಗಾಗಿ ನಿರೀಕ್ಷೆಯ ಭಾರದ ಕಡೆಯಿಂದ ಹೊರಬಂದು ಆಟದ ಕಡೆಗಷ್ಟೇ ಭಾರತ ಗಮನಹರಿಸಬೇಕಾಗಿದೆ.

ಉಭಯ ತಂಡಗಳು ‘ಎ’ ಗುಂಪಿನ ತಮ್ಮ ಮೊದಲ ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿವೆ. ಭಾರತ 9 ವಿಕೆಟ್‌ಗಳಿಂದ ಯುಎಇ ತಂಡವನ್ನು ಸದೆಬಡಿದರೆ, ಪಾಕಿಸ್ತಾನ ತಂಡ ಶುಕ್ರವಾರ ಒಮಾನ್ ತಂಡವನ್ನು 93 ರನ್‌ಗಳಿಂದ ಬಗ್ಗುಬಡಿದಿದೆ. ಎರಡೂ ತಂಡಗಳಿಗೆ ಸತ್ವಪರೀಕ್ಷೆ ಎದುರಾಗಿಲ್ಲ. ಪಾಕಿಸ್ತಾನಕ್ಕೆ ಹೆಚ್ಚು ತಾಲೀಮು ಸಿಕ್ಕಿದೆ. ಸ್ಪಿನ್‌ಸ್ನೇಹಿ ಶಾರ್ಜಾದ ಪಿಚ್‌ನಲ್ಲಿ ಪಾಕಿಸ್ತಾನ ತಂಡ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಅಫ್ಗಾನಿಸ್ತಾನ ತಂಡವನ್ನು ಸೋಲಿಸಿತ್ತು.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದ ತಾಜಾ ಪಿಚ್‌ ತಂಡಗಳನ್ನು ಸ್ವಾಗತಿಸಿದೆ. ಇಲ್ಲಿ ಪಾಕಿಸ್ತಾನ, ಭಾರತ ವಿರುದ್ಧ ಆಡಿದ ಕೊನೆಯ ಮೂರು ಟಿ20 ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿದೆ. ಭಾನುವಾರದ ಪಂದ್ಯ ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.