ಕ್ರಿಕೆಟ್
(ಸಾಂಕೇತಿಕ ಚಿತ್ರ)
ಅಬುಧಾಬಿ: ಅನುಭವಿ ಸ್ಪಿನ್ನರ್ ವನಿಂದು ಹಸರಂಗ ನೇತೃತ್ವದಲ್ಲಿ ಶ್ರೀಲಂಕಾದ ಬೌಲರ್ಗಳು, ಏಷ್ಯಾ ಕಪ್ ‘ಬಿ’ ಗುಂಪಿನ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡವನ್ನು 5 ವಿಕೆಟ್ಗೆ 139 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು.
ಗಾಯದಿಂದ ಚೇತರಿಸಿ ತಂಡಕ್ಕೆ ಪುನರಾಗಮನ ಮಾಡಿದ ಹಸರಂಗ 25 ರನ್ನಿಗೆ 2 ವಿಕೆಟ್ ಪಡೆದರೆ, ವೇಗಿಗಳಾದ ನುವಾನ್ ತುಷಾರ (17ಕ್ಕೆ1), ದುಷ್ಮಂತ ಚಮೀರ (17ಕ್ಕೆ1) ಅವರೂ ಪರಿಣಾಮಕಾರಿಯಾದರು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬಾಂಗ್ಲಾ ತಂಡ ರನ್ ಖಾತೆ ತೆರಯುವ ಮೊದಲೇ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಆರಂಭಿಕರಾದ ತಂಜಿದ್ ಹಸನ್ (0) ಮತ್ತು ಪರ್ವೇಜ್ ಹುಸೇನ್ ಎಮೋನ್ (0) 10 ಎಸೆತಗಳಾಗುವಷ್ಟರಲ್ಲಿ ಮರಳಿದ್ದರು.
ಒಂದು ಹಂತದಲ್ಲಿ ತಂಡವು 53 ರನ್ಗಳಾಗುವಷ್ಟರಲ್ಲಿ ನಾಯಕ ಲಿಟನ್ ದಾಸ್ (28) ಅವರನ್ನೂ ಸೇರಿ (9.5 ಓವರ್) 5 ವಿಕೆಟ್ ಕಳೆದುಕೊಂಡು ಕುಸಿತ ಅನುಭವಿತ್ತು. ಆದರೆ ಜೇಕರ್ ಅಲಿ (ಅಜೇಯ 41, 34ಎ) ಮತ್ತು ಶಮೀಮ್ ಹುಸೇನ್ (ಅಜೇಯ 42, 34ಎ, 4x3, 6x1) ಮುರಿಯದ ಆರನೇ ವಿಕೆಟ್ಗೆ 86 ರನ್ ಸೇರಿಸಿ ತಂಡದ ನೆರವಿಗೆ ನಿಂತರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರುಗಳಲ್ಲಿ 5ಕ್ಕೆ 139 (ಲಿಟನ್ ದಾಸ್ 28, ಜೇಕರ್ ಅಲಿ ಔಟಾಗದೇ 41, ಶಮೀಮ್ ಹುಸೇನ್ ಔಟಾಗದೇ 42; ವನಿಂದು ಹಸರಂಗ 25ಕ್ಕೆ2) ವಿರುದ್ಧ ಶ್ರೀಲಂಕಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.