ನವದೆಹಲಿ: ಭಾರತ ಏಕದಿನ ಮತ್ತು ಟಿ20 ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ,ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು 'ತಂಡದ ಮುಂದಾಳು' ಎಂದು ಕರೆದಿದ್ದಾರೆ.
ಕಳೆದ ತಿಂಗಳು ಟಿ20 ತಂಡದ ಹೊಣೆ ಹೊತ್ತಿರುವ ರೋಹಿತ್, ಬುಧವಾರ (ಡಿ 8) ಏಕದಿನ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. ಈ ಎರಡೂ ಮಾದರಿಯ ನಾಯಕತ್ವದಿಂದ ಕೆಳಗಿಳಿದಿರುವ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ.
'ಬ್ಯಾಕ್ಸ್ಟೇಜ್ ವಿತ್ ಬೋರಿಯಾ' ಯುಟ್ಯೂಬ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರೋಹಿತ್,'ಗುಣಮಟ್ಟದ ಬ್ಯಾಟರ್ ಕೊಹ್ಲಿ ತಂಡಕ್ಕೆ ಅವಶ್ಯಕ. ಟಿ20 ಮಾದರಿಯಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಗಳಿಸುವುದು ನಂಬಲಸಾಧ್ಯವಾದ ವಿಚಾರ. ಖಂಡಿತವಾಗಿಯೂ ಅವರು ತಮ್ಮ ಅನುಭವದ ಜೊತೆಗೆ, ತಂಡವನ್ನು ಸಾಕಷ್ಟು ಬಾರಿ ಕಠಿಣ ಸನ್ನಿವೇಶಗಳಿಂದ ಪಾರು ಮಾಡಿದ್ದಾರೆ' ಎಂದು ಹೇಳಿದ್ದಾರೆ.
'ಗುಣಮಟ್ಟ ಮತ್ತು ಅವರಂತೆ ಬ್ಯಾಟಿಂಗ್ ನಿರ್ವಹಿಸುವುದು ಅಗತ್ಯ. ಜೊತೆಗೆ ಅವರು ಈಗಲೂ ತಂಡದ ಮುಂದಾಳು. ಎಲ್ಲ ಅಂಶವನ್ನು ಒಟ್ಟುಗೂಡಿಸಿ ನೋಡಿದರೆ, ಅವರು ತಂಡದಲ್ಲಿ ಇಲ್ಲದಿರುವುದನ್ನು ನೀವು ಬಯಸುವುದಿಲ್ಲ. ಅವರಲ್ಲಿನ ಸತ್ವವನ್ನು ನೀವು ಮರೆಯಲಾರಿರಿ. ಅವರ ಉಪಸ್ಥಿತಿಯು ತಂಡಕ್ಕೆ ಅತ್ಯಂತ ಮುಖ್ಯವಾದದ್ದು' ಎಂದಿದ್ದಾರೆ.
ನಾಯಕತ್ವದ ಬಗ್ಗೆಯೂ ಮಾತನಾಡಿರುವ 34 ವರ್ಷದ ಆಟಗಾರ,'ನಾಯಕನಾಗಿ ಉತ್ತಮ ಆಟಗಾರರು ಆಡುತ್ತಿದ್ದಾರೆಯೇ, ತಂಡದ ಸಂಯೋಜನೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತಾಂತ್ರಿಕ ಅಂಶಗಳತ್ತಲೂ ಗಮನಹರಿಸಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವನ್ನೂ ಓದಿ
*ಏಕದಿನ ತಂಡದ ನಾಯಕತ್ವ ಬದಲಾವಣೆಗೆ ಕಾರಣ ತಿಳಿಸಿದ ಸೌರವ್ ಗಂಗೂಲಿ
*ಏಕದಿನ ತಂಡದ ನಾಯಕತ್ವ ರೋಹಿತ್ಗೆ: ಕೊಹ್ಲಿ ಪರ ನಿಲ್ಲುವಂತೆ ಗಂಗೂಲಿಗೆ ತಜ್ಞರ ಸಲಹೆ
*ವಿರಾಟ್ ಕೊಹ್ಲಿ ಸಾಧನೆಗೆ ಶ್ಲಾಘಿಸಿದ ಬಿಸಿಸಿಐ: ಕೃತಜ್ಞತೆ ಸಲ್ಲಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.