ADVERTISEMENT

‘ಹೊಂಜು‘ ಕವಿದ ತಾಣಗಳಲ್ಲಿ ಪಂದ್ಯಗಳೇಕೆ: ಬಿಸಿಸಿಐ ವೇಳಾಪಟ್ಟಿ ಬಗ್ಗೆ ಅಸಮಾಧಾನ

ಪಿಟಿಐ
Published 18 ಡಿಸೆಂಬರ್ 2025, 15:50 IST
Last Updated 18 ಡಿಸೆಂಬರ್ 2025, 15:50 IST
<div class="paragraphs"><p>ಲಖನೌನ ಏಕನಾ ಕ್ರೀಡಾಂಗಣದಲ್ಲಿ ಮುಸುಕಿದ್ದ ಹೊಂಜಿನಲ್ಲಿ ಮುಖಗವಸು ಧರಿಸಿ ಅಭ್ಯಾಸ ಮಾಡಿದ ಭಾರತ ತಂಡದ ಹಾರ್ದಿಕ್ ಪಾಂಡ್ಯ&nbsp;</p></div>

ಲಖನೌನ ಏಕನಾ ಕ್ರೀಡಾಂಗಣದಲ್ಲಿ ಮುಸುಕಿದ್ದ ಹೊಂಜಿನಲ್ಲಿ ಮುಖಗವಸು ಧರಿಸಿ ಅಭ್ಯಾಸ ಮಾಡಿದ ಭಾರತ ತಂಡದ ಹಾರ್ದಿಕ್ ಪಾಂಡ್ಯ 

   

–ಪಿಟಿಐ ಚಿತ್ರ

ಬೆಂಗಳೂರು: ಭಾರತದಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದು ‘ಹೊಂಜು’ ಸಮಸ್ಯೆಯಿಂದ ರದ್ದಾಗಿದೆ. 

ADVERTISEMENT

ಲಖನೌನಲ್ಲಿರುವ ಏಕನಾ ಕ್ರೀಡಾಂಗಣದಲ್ಲಿ ಬುಧವಾರ ದಟ್ಟ ಹೊಂಜಿನಿಂದಾಗಿ (ಹೊಗೆ ಮತ್ತು ಮಂಜು ಸೇರಿದ ವಾತಾವರಣ) ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಪಂದ್ಯವು ರದ್ದಾಯಿತು. ಅಂಪೈರ್‌ಗಳು ಐದಾರು ಬಾರಿ  ಕ್ರೀಡಾಂಗಣವನ್ನು ಪರಿಶೀಲಿಸಿದರು. ದಟ್ಟ ಹೊಂಜಿನಲ್ಲಿ ಚೆಂಡಿನ ಚಲನೆಯನ್ನು ಗುರುತಿಸಲು ಸಾಧ್ಯವೇ ಇಲ್ಲ ಎಂದು ಖಚಿತಪಡಿಸಿಕೊಂಡ ಅವರು ರಾತ್ರಿ 10 ಗಂಟೆಗೆ ಪಂದ್ಯ ರದ್ದು ಮಾಡಿದರು. ಕ್ರೀಡಾಂಗಣದಲ್ಲಿ ಸೇರಿದ್ದ ಕ್ರಿಕೆಟ್‌ಪ್ರೇಮಿಗಳು  ಆಯೋಜಕರಿಗೆ ಹಿಡಿಶಾಪ ಹಾಕುತ್ತ ಹೊಂಜಿನಲ್ಲಿ ಮರೆಯಾದರು. ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಹಲವಾರು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಈ ಹಿಂದೆಯೂ ಕೆಲವು ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಇಂತಹದೇ ಹವಾಮಾನ ವೈಪರಿತ್ಯ ಕಾಡಿದ ನಿದರ್ಶನಗಳಿವೆ. 2017ರ ನವೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್‌ ಪಂದ್ಯಕ್ಕೂ ಹವಾಮಾನ ವೈಪರಿತ್ಯ ಕಾಡಿತ್ತು. ಲಂಕಾ ತಂಡದ ಕೆಲವು ಆಟಗಾರರು  ಉಸಿರಾಟದ ತೊಂದರೆಯಿಂದಾಗಿ ಅಸ್ವಸ್ಥಗೊಂಡಿದ್ದರು. ಮೈದಾನದಲ್ಲಿಯೇ ವಾಂತಿ ಮಾಡಿಕೊಂಡಿದ್ದರು. 2019ರಲ್ಲಿ ದೆಹಲಿಯಲ್ಲಿ ಭಾರತ ಮತ್ತು ಬಾಂಗ್ಲಾ ತಂಡಗಳು ಇಂತಹದೇ ಕೆಟ್ಟ ವಾತಾವರಣದಲ್ಲಿ ಟಿ20 ಪಂದ್ಯ ಆಡಿದ್ದವು. ದೇಶದ ರಾಜಧಾನಿಯಲ್ಲಿ 2023ರ ನವೆಂಬರ್‌ 6ರಂದು ಆಯೋಜನೆಯಾಗಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಕ್ಕೂ ವಾಯುಮಾಲಿನ್ಯದ ಬಿಸಿ ತಟ್ಟಿತ್ತು. ಅಪಾಯದ ಮಟ್ಟ ಮೀರಿದ ಮಾಲಿನ್ಯದಿಂದಾಗಿ   ಬಾಂಗ್ಲಾ ಮತ್ತು ಶ್ರೀಲಂಕಾ ತಂಡಗಳು ನೆಟ್ಸ್‌ ಅಭ್ಯಾಸವನ್ನು ರದ್ದುಗೊಳಿಸಿದ್ದವು. 

ಇಷ್ಟಾದರೂ ಬಿಸಿಸಿಐ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಗಳ ವೇಳಾಪಟ್ಟಿಯನ್ನು ಸಿದ್ಧಗೊಳಿಸುವಾಗ ಉತ್ತರ ಭಾರತದ ತಾಣಗಳಿಗೆ ಹೆಚ್ಚು ಪಂದ್ಯಗಳನ್ನು ನೀಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳಿಗೆ ರಾಯಪುರ, ನವ ಚಂಡೀಗಡ, ಧರ್ಮಶಾಲಾ ಮತ್ತು ಲಖನೌಗಳಲ್ಲಿ ಪಂದ್ಯ ಆಯೋಜಿಸಲಾಗಿದೆ. ಇವೆಲ್ಲವೂ ಉತ್ತರ ಭಾರತದಲ್ಲಿವೆ. ವೇಳಾಪಟ್ಟಿಯನ್ನು ಸಿದ್ಧಗೊಳಿಸುವಲ್ಲಿ ಬಿಸಿಸಿಐ ಅಸಮರ್ಥತೆಯನ್ನು ಇದು ತೋರಿಸುತ್ತದೆ.

ಅಷ್ಟಕ್ಕೂ ಉತ್ತರ ಭಾರತದಲ್ಲಿ ಡಿಸೆಂಬರ್‌ ತಿಂಗಳಲ್ಲಿ ಇಂತಹ ಹವಾಮಾನ ಸರ್ವೇಸಾಮಾನ್ಯ. ಹೊಗೆ, ಮಂಜು ಮತ್ತು ವಿಪರೀತ ಚಳಿಯಿಂದಾಗಿ ಇಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವುದು ಹೊಸದೇನಲ್ಲ. ಅದನ್ನು ಕಂಡುಹಿಡಿಯಲು ಹವಾಮಾನ ಪರಿಣತರೇ ಆಗಬೇಕೆಂದಿಲ್ಲ. ಲಖನೌನಲ್ಲಿ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) 400ರಷ್ಟು ಅಪಾಯ ಮಟ್ಟವನ್ನು ದಾಟಿತ್ತೆನ್ನಲಾಗಿದೆ.  

ಭಾರತದ ದಕ್ಷಿಣ ಅಥವಾ ಪೂರ್ವ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಬಹುದಿತ್ತು. ಮುಂದಿನ ತಿಂಗಳು ಭಾರತಕ್ಕೆ ಬರಲಿರುವ ನ್ಯೂಜಿಲೆಂಡ್ ತಂಡದ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಡೆಯಲಿವೆ. ಅವುಗಳೆಲ್ಲವೂ ಪೂರ್ವ ಮತ್ತು ದಕ್ಷಿಣದ ನಗರಗಳಲ್ಲಿ ಆಯೋಜನೆಗೊಂಡಿವೆ. ದಕ್ಷಿಣ ಆಫ್ರಿಕಾ ಎದುರಿನ ಸರಣಿಯ ಪಂದ್ಯಗಳನ್ನೂ ಅದೇ ರೀತಿ ಮಾಡಿದ್ದರೆ ಸೂಕ್ತವಾಗಿರುತ್ತಿತ್ತು. ರೊಟೇಷನ್ ಪದ್ಧತಿಗೆ ಅಂಟಿಕೊಂಡಿರುವ ಮಂಡಳಿಯು ಹವಾಮಾನ ವೈಪರಿತ್ಯದ ವಿಷಯವನ್ನು ಲಘುವಾಗಿ ಪರಿಗಣಿಸುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.