ADVERTISEMENT

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಘೋಷಿಸಿ ಟ್ರೋಲ್‌ಗೆ ಗುರಿಯಾದ ಜಯ್ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2021, 13:35 IST
Last Updated 9 ಸೆಪ್ಟೆಂಬರ್ 2021, 13:35 IST
ಜಯ್ ಶಾ
ಜಯ್ ಶಾ   

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗಾಗಿ ಭಾರತ ಕ್ರಿಕೆಟ್ ತಂಡವನ್ನು ಘೋಷಿಸಿದ ವಿಡಿಯೊ ಟ್ರೋಲಿಗರಿಗೆ ಭರ್ಜರಿ ಆಹಾರವಾಗಿದೆ. ವಿಡಿಯೊದಲ್ಲಿ ಜಯ್‌ ಶಾ ಪ್ರತಿ ಆಂಗ್ಲಪದವನ್ನು ಬಿಡಿಸಿ, ಬಿಡಿಸಿ ಓದುತ್ತಿರುವುದನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

ಜಯ್ ಶಾ ಭಾರತ ತಂಡದ ಆಟಗಾರರನ್ನು ಘೋಷಿಸುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಜಯ್ ಶಾ ಆಂಗ್ಲ ಭಾಷೆಯನ್ನು ಉಚ್ಛರಿಸುತ್ತಿರುವ ಶೈಲಿಯುವ್ಯಾಪಕ ಟ್ರೋಲ್‌ಗೆ ಗುರಿಯಾಗಿದೆ.

ಪರದೆ ಮೇಲಿನ ವಾಕ್ಯಗಳನ್ನು ಬಿಡಿಸಿ ಓದಲು ಜಯ್ ಶಾ ಪ್ರಯತ್ನಿಸುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷವು ಇದಕ್ಕೆ ರಾಜಕೀಯ ಬಣ್ಣ ಬಳಿದಿದೆ.

ಯಾವ ಯೋಗ್ಯತೆಯ ಆಧಾರದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರಿಗೆ ಬಿಸಿಸಿಐ ಕಾರ್ಯದರ್ಶಿ ಪದವಿ ನೀಡಲಾಗಿದೆ ಎಂದು ಪ್ರಶ್ನಿಸಿದೆ.

ಈ ಕುರಿತು ಕಾಂಗ್ರೆಸ್ ವಕ್ತಾರೆ ಡಾ. ರಾಗಿಣಿ ನಾಯಕ್, ವಿಶ್ವದ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ಕ್ರಿಕೆಟ್ ಮಂಡಳಿ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದಾರೆ.

ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಕೂಡಾ ಜಯ್ ಶಾ ಅವರ ಶೈಲಿಯನ್ನು ವ್ಯಂಗ್ಯವಾಡಿದ್ದಾರೆ. 'ಎಂತಹ ಮುಗ್ಧ ಹುಡುಗ! ಆತ ಬಿಸಿಸಿಐ ಬಾಸ್. ಅವರ ಹೆಸರು ಜಯ್ ಶಾ. ನಿಸ್ಸಂಶವಾಗಿಯೂ ಬಿಜೆಪಿಯಲ್ಲಿ ಯಾವುದೇ ಕುಟುಂಬ ರಾಜಕಾರಣವಿಲ್ಲ ಅಥವಾ ಬಿಸಿಸಿಐನಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.