ಅಮಾನತು
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಸ್.ಎ. ಶ್ರೀನಿವಾಸನ್ ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದ ನಂತರ ಉಭಯ ತಂಡಗಳ ಇಬ್ಬರು ಆಟಗಾರರು ಕೈಕೈ ಮಿಲಾಯಿಸಿದ ಘಟನೆ ನಡೆಯಿತು.
ಧಾರವಾಡ ವಲಯ ಮತ್ತು ಮಂಗಳೂರು ವಲಯ ತಂಡಗಳ ನಡುವಣ ಈ ಪಂದ್ಯವು ಡ್ರಾದಲ್ಲಿ ಮುಕ್ತಾಯವಾಯಿತು. ಮಂಗಳೂರು ತಂಡವು ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು. ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಹಸ್ತಲಾಘವ ನೀಡುವ ಹಂತದಲ್ಲಿ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಈ ಜಟಾಪಟಿಯಲ್ಲಿ ಧಾರವಾಡ ವಲಯದ ಆಟಗಾರ ಬ್ಯಾಟ್ನಿಂದ ಇನ್ನೊಂದು ತಂಡದ ಆಟಗಾರನ ಮೇಲೆ ಹಲ್ಲೆ ಮಾಡಲು ಯತ್ನಿಸಿದ. ಉಳಿದ ಆಟಗಾರರು ಮಧ್ಯಪ್ರವೇಶಿಸಿ ತಡೆದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಪದಾಧಿಕಾರಿಗಳು ಈ ಕುರಿತು ಸಭೆ ನಡೆಸಿದರು. ಆಟಗಾರರನ್ನು ವಿಚಾರಣೆ ನಡೆಸಿದರು. ಧಾರವಾಡದ ಆಟಗಾರನ ಮೇಲೆ ಒಂದು ಪಂದ್ಯದ ನಿಷೇಧ ಹಾಕಲಾಗಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮೂಲಗಳು ತಿಳಿಸಿವೆ. ಆದರೆ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.