ADVERTISEMENT

ರಣಜಿ ಟ್ರೋಫಿ ಫೈನಲ್‌: ಪೂಜಾರಗೆ ಸ್ಥಾನ, ಜಡೇಜಗೆ ಅವಕಾಶವಿಲ್ಲ

ಪಿಟಿಐ
Published 7 ಮಾರ್ಚ್ 2020, 19:30 IST
Last Updated 7 ಮಾರ್ಚ್ 2020, 19:30 IST
ಚೇತೇಶ್ವರ್‌ ಪೂಜಾರ
ಚೇತೇಶ್ವರ್‌ ಪೂಜಾರ   

ರಾಜ್‌ಕೋಟ್‌: ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಅವರು ಬಂಗಾಳ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಲು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಸ್‌ಸಿಎ) ನಿರ್ಧರಿಸಿತ್ತು. ಈ ಸಂಬಂಧ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಜೊತೆ ಚರ್ಚಿಸಿದ್ದ ಎಸ್‌ಸಿಎ ಅಧ್ಯಕ್ಷ ಜಯದೇವ್ ಶಾ, ಇದೇ ತಿಂಗಳ 12ರಂದು ಧರ್ಮಶಾಲಾದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಜಡೇಜ ಅವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಗಂಗೂಲಿ ಒಪ್ಪಿಗೆ ನೀಡಿಲ್ಲ. ಹೀಗಾಗಿ ಶನಿವಾರ ಪ್ರಕಟಿಸಿರುವ 17 ಸದಸ್ಯರ ತಂಡದಲ್ಲಿ ಜಡೇಜಗೆ ಅವಕಾಶ ನೀಡಿಲ್ಲ.

ಮಧ್ಯಮ ವೇಗದ ಬೌಲರ್‌ ಜಯದೇವ್‌ ಉನದ್ಕತ್‌ ತಂಡವನ್ನು ಮುನ್ನಡೆಸಲಿದ್ದಾರೆ.

ADVERTISEMENT

ಪೂಜಾರ ಅವರು ಇತ್ತೀಚೆಗೆ ಮುಗಿದಿದ್ದ ನ್ಯೂಜಿಲೆಂಡ್‌ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮಿಂಚಲು ವಿಫಲರಾಗಿದ್ದರು. ನಾಲ್ಕು ಇನಿಂಗ್ಸ್‌ಗಳಿಂದ 100ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು.

ರಣಜಿ ಫೈನಲ್, ಇದೇ ತಿಂಗಳ 9ರಿಂದ ಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

ತಂಡ ಇಂತಿದೆ: ಜಯದೇವ್‌ ಉನದ್ಕತ್‌ (ನಾಯಕ), ಚೇತೇಶ್ವರ್‌ ಪೂಜಾರ, ಶೆಲ್ಡನ್‌ ಜಾಕ್ಸನ್‌, ಕಮಲೇಶ್‌ ಮಕ್ವಾನಾ, ಅರ್ಪಿತ್‌ ವಸಾವಡ, ಚಿರಾಗ್‌ ಜಾನಿ, ಧರ್ಮೇಂದ್ರಸಿಂಹ ಜಡೇಜ, ಹರ್ವಿಕ್‌ ದೇಸಾಯಿ, ಸ್ನೆಲ್‌ ಪಟೇಲ್‌ (ವಿಕೆಟ್‌ ಕೀಪರ್‌), ಕಿಶನ್‌ ಪಾರ್ಮರ್‌, ಅವಿ ಬರೋಟ್‌ (ವಿಕೆಟ್‌ ಕೀಪರ್‌), ಪ್ರೇರಕ್‌ ಮಂಕಡ್‌, ಸಮರ್ಥ್‌ ವ್ಯಾಸ್, ವಿಶ್ವರಾಜ್‌ ಜಡೇಜ, ಕುಶಾಂಗ್‌ ಪಟೇಲ್‌, ಚೇತನ್‌ ಸಕಾರಿಯಾ ಮತ್ತು ಪಾರ್ಥ್‌ ಭುಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.