ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕ ತಂಡಕ್ಕೆ ಗೆಲುವು

ಶಿವಕುಮಾರ್‌ ಮಿಂಚು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST

ಬೆಂಗಳೂರು: ಶಿವಕುಮಾರ್‌ ಬಿ.ಯು ಅವರ ಬ್ಯಾಟಿಂಗ್‌ ಹಾಗೂ ರಿಷಿ ಬೋಪಣ್ಣ ಅವರ ಬೌಲಿಂಗ್‌ ಬಲದಿಂದ ಕರ್ನಾಟಕ ತಂಡ ಬಿಸಿಸಿಐ 23 ವರ್ಷದೊಳಗಿನವರ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ರಾಜಸ್ಥಾನ ತಂಡವನ್ನು ಮಣಿಸಿದೆ.

ರಾಜಸ್ಥಾನದ ರಾಜಸಮಂದ್‌ನಲ್ಲಿ ಗುರುವಾರ ಕೊನೆಗೊಂಡ ಪಂದ್ಯದಲ್ಲಿ ಗೆಲುವಿಗೆ 165 ರನ್‌ಗಳ ಗುರಿ ಪಡೆದಿದ್ದ ಕರ್ನಾಟಕ ತಂಡ ಐದು ವಿಕೆಟ್‌ ಕಳೆದುಕೊಂಡು ಜಯ ಗಳಿಸಿತು. ಕರ್ನಾಟಕದ ಪರ ಎರಡನೇ ಇನಿಂಗ್ಸ್‌ನಲ್ಲಿ ಶಿವಕುಮಾರ್‌ ಔಟಾಗದೆ ಅರ್ಧಶತಕ (78) ಹಾಗೂ ಎನ್‌. ಜಯೇಶ್‌ (41) ಮಿಂಚಿದರು.

ಪಂದ್ಯದ ಮೊದಲ ಇನಿಂಗ್ಸ್‌ ಆಡಿದ್ದ ರಾಜಸ್ಥಾನ ತಂಡ ರಿಷಿ ಬೋಪಣ್ಣ( 50ಕ್ಕೆ 3) ಹಾಗೂ ಕುಶಾಲ್‌ ವದ್ವಾನಿ (44ಕ್ಕೆ 3) ಬೌಲಿಂಗ್‌ ದಾಳಿಗೆ ನಲುಗಿ 202 ರನ್‌ಗಳಿಗೆ ಆಲೌಟ್‌ ಆಗಿತ್ತು. ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 273 ರನ್‌ ಕಲೆಹಾಕಿತ್ತು. ನಿಕಿನ್ ಜೋಸ್‌ (79) ಹಾಗೂ ನಾಯಕ ಕಿಶನ್‌ ಬೆದರೆ (69) ದಾಖಲಿಸಿದ ಅರ್ಧಶತಕಗಳು ತಂಡದ ಇನಿಂಗ್ಸ್‌ ಮುನ್ನಡೆಗೆ ಕಾರಣವಾಗಿದ್ದವು.

ADVERTISEMENT

ಆತಿಥೇಯ ತಂಡ ಎರಡನೇ ಇನಿಂಗ್ಸ್‌ನಲ್ಲಿ 236 ರನ್‌ಗೆ ಎಲ್ಲ ವಿಕೆಟ್‌ ಕಳೆದುಕೊಂಡಿತ್ತು. ರಿಷಿ ಬೋಪಣ್ಣ (48ಕ್ಕೆ 4) ಹಾಗೂ ವದ್ವಾನಿ (58ಕ್ಕೆ 3) ತಂಡವನ್ನು ಮತ್ತೆ ಕಾಡಿದರು.

ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಆರು ಪಾಯಿಂಟ್ಸ್‌ ಬಗಲಿಗೆ ಹಾಕಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ: ಮೊದಲ ಇನಿಂಗ್ಸ್‌ 63 ಓವರ್‌ಗಳಲ್ಲಿ 202 ಹಾಗೂ ಎರಡನೇ ಇನಿಂಗ್ಸ್‌ 236ಕ್ಕೆ ಆಲೌಟ್ (ಎ.ಪಿ.ಸಿಂಗ್ 46, ಎ.ಬಿ.ಕೋಕ್ನಾ 40, ಎಸ್‌.ಎಸ್‌.ದಿವಾನ್‌ 38; ರಿಷಿ ಬೋಪಣ್ಣ 48ಕ್ಕೆ 4, ಕುಶಾಲ್‌ ವದ್ವಾನಿ 58ಕ್ಕೆ 3) ಕರ್ನಾಟಕ: ಮೊದಲ ಇನಿಂಗ್ಸ್‌ 273 ಹಾಗೂ ಎರಡನೇ ಇನಿಂಗ್ಸ್‌ 5 ವಿಕೆಟ್‌ಗೆ 166 (ಬಿ.ಯು. ಶಿವಕುಮಾರ್ ಔಟಾಗದೆ 78, ಎನ್‌.ಜಯೇಶ್‌ 41; ಎಮ್.ಜೆ ಸುತಾರ್‌ 64ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.