ADVERTISEMENT

IPL| 3 ಆವೃತ್ತಿಗೆ ಸಿಎಸ್‌ಕೆಯಲ್ಲೇ ಧೋನಿ: ಯಾರು ಯಾವ ತಂಡದಲ್ಲಿ ಉಳಿಯಲಿದ್ದಾರೆ?

ಐಎಎನ್ಎಸ್
Published 25 ನವೆಂಬರ್ 2021, 2:25 IST
Last Updated 25 ನವೆಂಬರ್ 2021, 2:25 IST
ಚೆನ್ನೈ ಸೂಪಕ್‌ ಕಿಂಗ್ಸ್‌ನ ಕಾರ್ಯಕ್ರಮವೊಂದರಲ್ಲಿ ಮಹೇಂದ್ರ ಸಿಂಗ್‌ ಧೋನಿ
ಚೆನ್ನೈ ಸೂಪಕ್‌ ಕಿಂಗ್ಸ್‌ನ ಕಾರ್ಯಕ್ರಮವೊಂದರಲ್ಲಿ ಮಹೇಂದ್ರ ಸಿಂಗ್‌ ಧೋನಿ    

ನವದೆಹಲಿ: ಇಂಡಿಯನ್ ಸೂಪರ್‌ ಲೀಗ್‌ (ಐಪಿಎಲ್‌)ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಮುಂದಿನ ಮೂರು ಅವೃತ್ತಿಗೂ ಮಹೇಂದ್ರ ಸಿಂಗ್‌ ಧೋನಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧಾರ ಕೈಗೊಂಡಿದೆ.

ಐಪಿಎಲ್‌ ಆಟಗಾರರ ಮೆಗಾ ಹರಾಜಿಗೂ ಮುನ್ನವೇ ಸಿಎಸ್‌ಕೆ ಈ ತೀರ್ಮಾನ ಮಾಡಿರುವುದಾಗಿ ತಂಡದ ಮೂಲಗಳು ತಿಳಿಸಿವೆ.

ಧೋನಿ ಅಲ್ಲದೇ, ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್‌ ಅವರನ್ನೂ ಸಿಎಸ್‌ಕೆ ತನ್ನಲ್ಲೇ ಉಳಿಸಿಕೊಂಡಿದೆ. ಬಿಸಿಸಿಐ ನಿಯಮಗಳ ಪ್ರಕಾರ, ಪ್ರತಿ ತಂಡವು ಗರಿಷ್ಠ ನಾಲ್ಕು ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಬಹುದು.
ಈ ಮಧ್ಯೆ, ಇಂಗ್ಲೆಂಡ್‌ನ ಆಲ್‌ರೌಂಡರ್‌ ಮೋಯಿನ್‌ ಅಲಿಯನ್ನು ಉಳಿಸಿಕೊಳ್ಳುವ ಮಾತುಕತೆಗಳನ್ನು ಸಿಎಸ್‌ಕೆ ಆರಂಭಿಸಿದೆ. ಒಂದು ವೇಳೆ ಅವರು ತಂಡದಲ್ಲಿ ಉಳಿಯಲು ಇಚ್ಛಿಸದೇ ಹೋದರೆ, ಸ್ಯಾಮ್‌ ಕರನ್‌ ಅವರನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ಗೊತ್ತಾಗಿದೆ.

ADVERTISEMENT

ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 30 ರೊಳಗೆ ಬಿಸಿಸಿಐಗೆ ಸಲ್ಲಿಸಬೇಕು. ಎರಡು ಹೊಸ ತಂಡಗಳು 2022ರ ಋತುವಿನಿಂದ ಲೀಗ್‌ಗೆ ಸೇರ್ಪಡೆಗೊಂಡ ನಂತರ ಆಟಗಾರರ ಮೆಗಾ ಹರಾಜು ಆರಂಭವಾಗಲಿದೆ.

ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್, ಆಲ್ ರೌಂಡರ್ ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ವೇಗಿ ಅನ್ರಿಚ್ ನಾರ್ಟ್ಜೆ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.
ಮೂಲಗಳ ಪ್ರಕಾರ, ಶ್ರೇಯಸ್ ಅಯ್ಯರ್ ‘ಡಿಸಿ’ಯನ್ನು ಮುನ್ನಡೆಸಲು ಬಯಸಿದ್ದರು. ಆದರೆ, ತಂಡವು ಪಂತ್ ಅವರ ನಾಯಕತ್ವಕ್ಕೆ ಮನ್ನಣೆ ನೀಡಿದೆ. ಹೀಗಾಗಿ ಶ್ರೇಯಸ್‌ ಅಯ್ಯರ್‌ ತಂಡದಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಇಶಾನ್ ಕಿಶನ್ ಅವರನ್ನು ಉಳಿಸಿಕೊಂಡಿದೆ. ವೆಸ್ಟ್ ಇಂಡೀಸ್‌ನ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಅವರೊಂದಿಗೆ ಮಾತುಕತೆಯಲ್ಲಿ ಮುಂಬೈ ತಂಡ ತೊಡಗಿದೆ. ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸೂರ್ಯಕುಮಾರ್ ಯಾದವ್ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳಲು ಮುಂಬೈ ಇಂಡಿಯನ್‌ ಬಯಸಿದೆ. ಆದರೆ, ಅವರನ್ನು ಹರಾಜಿನಿಂದಲೇ ಮತ್ತೊಮ್ಮೆ ಖರೀದಿಸಲು ತೀರ್ಮಾನಿಸಿದೆ.

ಭಾರತದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್‌ನಿಂದ ಬೇರ್ಪಟ್ಟಿದ್ದು, ಹೊಸ ಲಕ್ನೋ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

ಏತನ್ಮಧ್ಯೆ, ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಇಬ್ಬರು ಆಲ್‌ರೌಂಡರ್‌ಗಳಾದ ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನೂ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ಮಧ್ಯೆ ಶುಭ್‌ಮನ್ ಗಿಲ್ ಅಥವಾ ವೆಂಕಟೇಶ್ ಅಯ್ಯರ್ ಅವರಲ್ಲಿ ಯಾರನ್ನು ಉಳಿಸಿಕೊಳ್ಳಬೇಕೆಂಬುದು ಕೊಲ್ಕತ್ತಾ ತಂಡಕ್ಕೆ ಕಗ್ಗಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.